ವಿಜಯಪುರದ ವೀರ ಯೋಧ ಸಹದೇವ್ ಮೋರೆ ಅಂತ್ಯಕ್ರಿಯೆ
ಬೆಂಗಳೂರು, ಫೆಬ್ರವರಿ, 15: ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಪ್ರಾಣ ತ್ಯಾಗ ಮಾಡಿದ ವಿಜಯಪುರದ ಯೋಧ ಸಹದೇವ್ ಮೋರೆ ಅವರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನೆರವೇರಿಸಲಾಗಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ನಿವಾಸಿ ಯೋಧ ಸಹದೇವ್ ಜಮ್ಮುಕಾಶ್ಮೀರದಲ್ಲಿ ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದರು. ಫೆಬ್ರವರಿ 15ರಂದು ಬೆಳಗ್ಗೆ ಸಾವಳಸಂಗ ಗ್ರಾಮದಲ್ಲಿ ಯೋಧನ ಮನೆ ಎದುರು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.[ಕಾಶ್ಮೀರ ಗಡಿಯಲ್ಲಿ ಪ್ರಾಣ ಅರ್ಪಿಸಿದ ಮತ್ತೊಬ್ಬ ಕನ್ನಡಿಗ]
ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನಿಗೆ ಅಂತಿಮ ನಮನ ಸಲ್ಲಿಕೆ ಮಾಡಲಾಯಿತು. ಹಿರಿಯ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಿಯಾಚಿನ್ ನಲ್ಲಿ ಹುತಾತ್ಮರಾದ ಕರ್ನಾಟಕದ ಎಚ್.ಡಿ.ಕೋಟೆಯ ಪಿ.ಎನ್. ಮಹೇಶ್, ಹಾಸನದ ಟಿ.ಟಿ.ನಾಗೇಶ್ ಅವರ ಪಾರ್ಥೀವ ಶರೀರವನ್ನು ನವದೆಹಲಿಗೆ ತರಲಾಗಿದೆ. ಹವಾಮಾನ ವೈಪರೀತ್ಯವುಂಟಾಗಿ ವಿಮಾನ ಹಾರಾಟಕ್ಕೆ ಸಮಸ್ಯೆಯುಂಟಾದ ಕಾರಣ ಸಾಧ್ಯವಾಗಿರಲಿಲ್ಲ. ಇಂದು ಹಮಾಮಾನದಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಿದ್ದರೆ ಪಾರ್ಥಿವ ಶರೀರಗಳನ್ನು ಕುಟುಂಬದವರ ಕೈಗೆ ನೀಡಲಾಗುವುದು ಎಂದು ಸೈನ್ಯದ ಮೂಲಗಳು ತಿಳಿಸಿವೆ.[ಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ]
ಸಿಯಾಚಿನ್ ನಲ್ಲಿ ಹಿಮಪಾತಕ್ಕೆ ಸಿಕ್ಕು ಹನುಮಂತಪ್ಪ ಕೊಪ್ಪದ್ ಸೇರಿದಂತೆ ರಾಜ್ಯದ ಮೂವರು ಯೋಧರು ಹುತಾತ್ಮರಾಗಿದ್ದರು. ಅದಾದ ನಂತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಕಾದಾಟದಲ್ಲಿ ಫೆಬ್ರವರಿ 13ರಂದು ಯೋಧ ಸಹದೇವ್ ಮೋರೆ ದೇಶಕ್ಕೆ ಪ್ರಾಣ ಅರ್ಪಣೆ ಮಾಡಿದ್ದರು.