ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ: ಅಶ್ವತ್ಥ ನಾರಾಯಣ
ಬೆಂಗಳೂರು,ಜನವರಿ 13: ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ರಾಷ್ಟ್ರೀಯ ಗ್ರಾಮೀಣ ಮತ್ತು ನಗರ ಜೀವನೋಪಾಯ ಯೋಜನೆಗಳ ಅಡಿಯಲ್ಲಿ ಅಮೆಜಾನ್, ಫ್ಲಿಪ್ ಕಾರ್ಟ್ ತರಹದ ಕಂಪನಿಗಳ ಮೂಲಕ ಸೂಕ್ತ ಮಾರುಕಟ್ಟೆ, ಪ್ರಚಾರ ಮತ್ತು ಬ್ರ್ಯಾಂಡಿಂಗ್ ಒದಗಿಸಲಾಗುವುದು ಎಂದು ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಶುಕ್ರವಾರ ಡಾಟಿ ಸದಾನಂದ ಗೌಡರ ನೇತೃತ್ವದ ಸದಾಸ್ಮಿತಾ ಪ್ರತಿಷ್ಠಾನ ಮತ್ತು ಡಾ.ಸಿ ಎನ್ ಅಶ್ವತ್ಥ ನಾರಾಯಣ ಫೌಂಡೇಶನ್ ಮೂಲಕ ಕೌಶಲ್ಯಾಭಿವೃದ್ಧಿ ಪಡೆದುಕೊಂಡಿರುವ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಅಮೆಜಾನ್ ಕಂಪನಿಯವರು 70 ಸಾವಿರ ಕೋಟಿ ರೂಪಾಯಿ ಮೌಲ್ಯದ ಮಾರುಕಟ್ಟೆ ಒದಗಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಸಾಧಿಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಆಗಿದೆ ಎಂದರು.
ಮಹಿಳೆಯರಲ್ಲಿ ಅಪಾರ ಪ್ರತಿಭೆ ಅಡಗಿದ್ದು, ಅವುಗಳನ್ನು ಸಮಾಜದ ಸಮಗ್ರ ಬೆಳವಣಿಗೆಗೆ ಬಳಸಿ ಕೊಳ್ಳಬೇಕು. ಎನ್ಆರ್ಎಲ್ಎಂ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮವಾಗಿ ಶೇಕಡ 60 ಮತ್ತು 40ರಷ್ಟು ಆರ್ಥಿಕ ಅನುದಾನ ನೀಡುತ್ತಿವೆ ಎಂದು ಹೇಳಿದರು.

ಸದಾ ಸ್ಮಿತಾ ಪ್ರತಿಷ್ಠಾನವು ಆಸಕ್ತ ಮಹಿಳೆಯರಿಗೆ ಮೂರು ತಿಂಗಳ ಕೌಶಲ್ಯ ತರಬೇತಿ ನೀಡಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಜನಸಂಖ್ಯೆಯ ಅರ್ಧ ಭಾಗವಿರುವ ಮಹಿಳೆಯರು ಆರ್ಥಿಕ ಸ್ವಾವಲಂಬಿ ಗಳಾಗಬೇಕು ಎನ್ನುವುದು ಸರಕಾರದ ಗುರಿಯಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಡಿ ವಿ ಸದಾನಂದ ಗೌಡ, ಡಾಟಿ ಸದಾನಂದಗೌಡ, ಡಾ.ಸಿ ಎನ್ ಅಶ್ವತ್ಥ ನಾರಾಯಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಡಾ.ವಾಸುದೇವ್, ಸದಾಸ್ಮಿತಾ ಪ್ರತಿಷ್ಠಾನದ ಅಧ್ಯಕ್ಷ ಡಿ ವಿ ಶಿವರಾಂ, ಬಿಜೆಪಿ ನಾಯಕಿ ಕಾವೇರಿ ಕೇದಾರನಾಥ್, ಸೌಮ್ಯಾ ಮುಂತಾದವರು ಉಪಸ್ಥಿತರಿದ್ದರು.
ಸರಕಾರಿ ಕಾಲೇಜುಗಳಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ಪೂರೈಕೆ
ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ಕ್ರಾಂತಿಕಾರಕ ಸುಧಾರಣೆ ಆಗುತ್ತಿದೆ. ಇದರ ಫಲವಾಗಿ ಸರಕಾರಿ ಕಾಲೇಜುಗಳಲ್ಲಿ ಇಂದು ಕೈಗೆಟುಕುವ ವೆಚ್ಚದಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿ ಇರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ಇಡೀ ದೇಶವು ಎಲ್ಲರನ್ನೂ ಒಳಗೊಂಡು ವಿಕಾಸವಾಗಬೇಕು ಎನ್ನುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಇದರ ಅನುಷ್ಠಾನದಲ್ಲಿ ರಾಜ್ಯವು ಪ್ರಥಮ ಸ್ಥಾನದಲ್ಲಿದೆ.
ಕಲಿಕೆಯು ಯಾವಾಗಲೂ ಪ್ರಸ್ತುತವಾಗಿರಬೇಕು. ಇದನ್ನು ಪರಿಗಣಿಸಿ ಪಠ್ಯ ಕ್ರಮಕ್ಕೆ ಸಮಕಾಲೀನ ಸ್ಪರ್ಶ ಕೊಡಲಾಗಿದೆ. ಜತೆಗೆ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕೂಡ ಎನ್ಇಪಿ ಜಾರಿಗೆ ಬರುತ್ತಿದೆ. ಪದವಿಪೂರ್ವ, ಪದವಿ, ಐಟಿಐ, ಪಾಲಿಟೆಕ್ನಿಕ್, ಎಂಜಿನಿಯರಿಂಗ್, ಜಿಟಿಟಿಸಿ ಶಿಕ್ಷಣ ಕ್ರಮಗಳಲ್ಲಿ ವ್ಯಾಪಕ ಸುಧಾರಣೆ ತರಲಾಗಿದೆ. ಕಲಿಕೆಯ ಜತೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದರು. ಇನ್ನೂ ರಾಜ್ಯದಲ್ಲಿ ಶೈಕ್ಷಣಿಕ ಪರಿಸರ ಅತ್ತುತ್ತಮವಾಗಿದೆ. ಸರಕಾರವು ಯುವಜನರಿಗೆ ಕೌಶಲಗಳನ್ನು ಕಲಿಸುವ ಮೂಲಕ ಎಲ್ಲರನ್ನೂ ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡುತ್ತಿದೆ. ಒಟ್ಟಿನಲ್ಲಿ ನುರಿತ ಮಾನವ ಸಂಪನ್ಮೂಲ ಮತ್ತು ಉತ್ತಮ ಅವಕಾಶ ಎರಡೂ ನಮ್ಮಲ್ಲಿ ಇದೆ ಎಂದು ತಿಳಿಸಿದರು.












Click it and Unblock the Notifications