ವಿವಾದದಲ್ಲಿ ಲಡ್ಡು: ದೇವಸ್ಥಾನಗಳು ಹೊಡೆಯುತ್ತಾ ಸರ್ಕಾರಕ್ಕೆ ಸೆಡ್ಡು?
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನೀಡುವ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಸ್ತುಗಳನ್ನು ಬಳಸಲಾಗಿತ್ತು ಎನ್ನುವ ವಿಚಾರ ದೇಶದೆಲ್ಲೆಡೆ ವಿವಾದಕ್ಕೆ ಕಾರಣವಾಗಿದೆ. ಇದರ ಬಿಸಿ ಉಳಿದ ದೇವಸ್ಥಾನಗಳ ಮೇಲೂ ತಟ್ಟಿದೆ. ಇದೀಗ ದೇವಸ್ಥಾನಗಳನ್ನು ಸರ್ಕಾರದ ಆಡಳಿತದಿಂದ ಮುಕ್ತಗೊಳಿಸಬೇಕು ಎನ್ನುವ ಕೂಗು ಸಹ ಜೋರಾಗಿ ಎದ್ದಿದೆ.
ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಸೇರಿದಂತೆ ಹಲವು ಕಲಬೆರಕೆ ವಸ್ತುಗಳನ್ನು ಬಳಕೆ ಮಾಡಲಾಗಿದೆ ಎನ್ನುವ ವಿಚಾರವಾಗಿ ಎಲ್ಲೆಡೆ ಜೋರಾದ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಹಲವು ಧಾರ್ಮಿಕ ಗುರುಗಳು ಸಹ ಮಾತನಾಡಿದ್ದು, ಇಂತಹ ಘಟನೆಗಳು ತಪ್ಪಬೇಕಾದರೆ, ಸರ್ಕಾರಗಳು ದೇವಸ್ಥಾನಗಳ ತಂಟೆಗೆ ಬರಬಾರದು ಎಂದು ಧ್ವನಿ ಎತ್ತುತ್ತಿದ್ದಾರೆ.

ಲಡ್ಡು ವಿವಾದದ ಬಗ್ಗೆ ಈ ಬಗ್ಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಜರಾಯಿ ಇಲಾಖೆಗಳಿಂದ ದೇವಸ್ಥಾನಗಳು ಹಾಗೂ ಮಠಗಳನ್ನ ಮುಕ್ತಗೊಳಿಸಬೇಕು. ಕೇಂದ್ರ ಸರ್ಕಾರ ಮಾತ್ರವೇ ದೇವಸ್ಥಾನಗಳನ್ನು ನಿರ್ವಹಣೆ ಮಾಡಬೇಕು. ಈ ಸಂಬಂಧ ಕೇಂದ್ರ ಸರ್ಕಾರ ಹೊಸ ಕಾನೂನು ತರಬೇಕು ಎಂದು ಹೇಳಿದ್ದಾರೆ.
ದೇವಸ್ಥಾನಗಳು ಹಾಗೂ ಮಠಗಳು ಸ್ಥಳೀಯ ಭಕ್ತರು ಹಾಗೂ ಸಂಪ್ರದಾಯಗಳಿಗೆ ಸಂಬಂಧಿಸಿದ ಸ್ಥಳಗಳು. ದೇವಸ್ಥಾನದ ವಿಚಾರದಲ್ಲಿ ಸರ್ಕಾರ ತಲೆ ಹಾಕುವುದು, ಅಲ್ಲಿನ ಸಂಪ್ರದಾಯಗಳನ್ನು ಬದಲಿಸುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ಹೇಳಿದ್ದಾರೆ. ತಿರುಪತಿ ನಡೆದಿದೆ ಎನ್ನಲಾದ ಅಪವಿತ್ರ ಕೆಲಸವನ್ನು ಯಾರೇ ಮಾಡಿದ್ದರೂ ಅದು ಖಂಡನೀಯ. ಭಕ್ತರ ಶ್ರದ್ಧಾಕೇಂದ್ರದಲ್ಲಿ ಇಂತಹ ಆರೋಪ ಕೇಳಿಬಂದಿರುವುದು ದೊಡ್ಡ ಅಪಚಾರ. ತಪ್ಪಿತಸ್ಥರಿಗೆ ಕಾನೂನು ರೀತಿ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದ್ದಾರೆ.

ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಸಹ ಮಾತನಾಡಿದ್ದು, ಲಡ್ಡು ತಯಾರಿಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಪತ್ತೆಯಾಗಿರೋದು ಅಸಹ್ಯ ತರುವಂತಿದೆ. ಇವೆಲ್ಲ ನಿಲ್ಲಬೇಕಾದರೆ ದೇವಾಲಯಗಳು ಸರ್ಕಾರ ಆಡಳಿತದಿಂದ ನಡೆಯದೆ, ಕೇವಲ ಭಕ್ತರಿಂದ ನಡೆಯಬೇಕು. ಎಲ್ಲಿ ಭಕ್ತಿ ಇರುವುದಿಲ್ಲವೋ ಅಲ್ಲಿ ಪವಿತ್ರತೆಯೂ ಇರೋದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಧ್ಯಾತ್ಮಿಕ ಗುರುವಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿಕೆಯಂತೆ, ತಿರುಪತಿಯಲ್ಲಿ ನಡೆದಿರುವ ಲಡ್ಡು ವಿವಾದದ ಘಟನೆಯು ಹಿಂದೂಗಳ ಮನಸ್ಸಿನಲ್ಲಿ ತೀವ್ರ ನೋವು ಹಾಗೂ ಆಕ್ರೋಶವನ್ನುಂಟು ಮಾಡಿದೆ. ತಮ್ಮ ಸ್ವಾರ್ಥಕ್ಕಾಗಿ ಇರುವ ಅಧಿಕಾರಿಗಳು, ವ್ಯಾಪಾರಸ್ಥರು ಹಾಗೂ ರಾಜಕೀಯ ನಾಯಕರು ದೇವಾಲಯಗಳ ಮುಖ್ಯಸ್ಥಿಕೆ ವಹಿಸಿಕೊಳ್ಳಬಾರದು. ಬದಲಾಗಿ ಧಾರ್ಮಿಕ ಮುಖಂಡರು ಹಾಗೂ ಭಕ್ತರಿಗೆ ದೇವಸ್ಥಾನಗಳ ನಿರ್ವಹಣೆ ವಹಿಸುವುದು ಒಳ್ಳೆಯದು. ಇದಕ್ಕೆ ಈಗ ಸಮಯ ಕೂಡಿ ಬಂದಿದೆ ಎಂದಿದ್ದಾರೆ.
ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಕೂಡ ಲಡ್ಡು ವಿವಾದದ ಬಗ್ಗೆ ಮಾತನಾಡಿದ್ದು, ತಿರುಪತಿ ತಿಮ್ಮಪ್ಪನ ಪ್ರಸಾದದಲ್ಲಿ ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಬಳಸಿರುವುದು ಹಿಂದೂ ಸಮಾಜಕ್ಕೆ ಮಾಡಿರುವ ಬಹುದೊಡ್ಡ ಅಪಚಾರ. ಇದು ದೇವರಿಗೂ ಮಾಡಿರುವ ಅಪಚಾರ. ಸರ್ಕಾರವೇ ಇಂತಹ ನೀಚ ಕೆಲಸ ಮಾಡಿರುವುದು ಖಂಡನೀಯ ಎಂದು ದೂರಿದ್ದಾರೆ.
ಧಾರ್ಮಿಕ ಕೇಂದ್ರಗಳು ಸರ್ಕಾರ ವಶದಲ್ಲಿ ಇರಬಾರದು. ಅವು ಹಿಂದೂ ಧರ್ಮದವರ ಸುಪರ್ದಿಯಲ್ಲಿರಬೇಕು. ಈಗಲಾದರೂ ಎಚ್ಚೆತ್ತುಕೊಂಡು ಸರ್ಕಾರದ ಸ್ವಾಧೀನದಿಂದ ದೇಗುಲಗಳನ್ನು ಮುಕ್ತಗೊಳಿಸಬೇಕು. ತಿರುಪತಿ ದೇವಾಲಯದ ಆಡಳಿತವನ್ನು ಹಿಂದೂಗಳಿಗೆ ನೀಡಬೇಕು. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಸಲಹೆ ನೀಡಿದ್ದಾರೆ.
ಒಟ್ಟಾರೆ ಧಾರ್ಮಿಕ ಗುರುಗಳೆಲ್ಲರೂ ಒಂದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರಗಳ ಸುಪರ್ದಿಯಿಂದ ದೇವಸ್ಥಾನಗಳು, ಮಠಗಳು ಹಾಗೂ ಇನ್ನಿತರೆ ಧಾರ್ಮಿಕ ಕೇಂದ್ರಗಳನ್ನು ಬಿಡುಗಡೆ ಮಾಡುವಂತೆ ಕೋರಿದ್ದಾರೆ. ದೇವಸ್ಥಾನಗಳ ನಿರ್ವಹಣೆಯನ್ನು ಭಕ್ತರೇ ಮಾಡಲಿ ಅಥವಾ ಕೇಂದ್ರ ಸರ್ಕಾರವೇ ಒಂದು ಕಾನೂನು ತರಲಿ ಎಂಬ ಕೂಗನ್ನು ಎತ್ತಿದ್ದಾರೆ. ಮತ್ತೊಂದೆಡೆ ದೇವಸ್ಥಾನಗಳು ಸರ್ಕಾರಗಳ ಆಡಳಿತದಿಂದ ದೂರವಾದರೆ, ಬೊಕ್ಕಸಕ್ಕೆ ಆದಾಯ ಕಡಿಮೆಯಾಗಲಿದೆ ಎಂದು ಸಹ ಹೇಳಲಾಗುತ್ತಿದೆ.












Click it and Unblock the Notifications