ಹಲವು ಚರ್ಚೆಗೆ ಕಾರಣವಾದ ಕೆ. ಎಸ್. ಈಶ್ವರಪ್ಪ ಹೇಳಿಕೆ
ಬೆಂಗಳೂರು, ಜುಲೈ 29; ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿ, ಬವಸರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆದರೆ ಬಿಜೆಪಿ ಹಿರಿಯ ನಾಯಕರ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.
ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, "ಇನ್ನೂ ಪಕ್ಷದಲ್ಲಿ ಬದಲಾವಣೆಗಳು ಆಗುವುದಿದೆ" ಎಂದು ಹೇಳಿಕೆ ನೀಡಿದ್ದು ಕುತೂಹಲ ಮೂಡಿದಿದೆ. ಈಗಾಗಲೇ ಜಗದೀಶ್ ಶೆಟ್ಟರ್ ಹೊಸ ಸಂಪುಟವನ್ನು ಸೇರುವುದಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ, "ಈಗಷ್ಟೇ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಇನ್ನೂ ಹಲವು ಬದಲಾವಣೆಗೆಳು ಆಗಲಿವೆ. ಎಲ್ಲವನ್ನೂ ಕಾದು ನೋಡಿ" ಎಂದರು.

ವೈರಲ್ ಆಗಿದ್ದ ವಿಡಿಯೋ; ಯಡಿಯೂರಪ್ಪ ರಾಜೀನಾಮೆಗೂ ಮುನ್ನ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಈಶ್ವರಪ್ಪ, ಶೆಟ್ಟರ್ ಸೇರಿದಂತೆ ಹಿರಿಯನ್ನು ಸಂಪುಟದಿಂದ ಹೊರಗೆ ಇಡಲಾಗುತ್ತದೆ ಎಂಬ ಮಾತುಗಳಿದ್ದವು.
ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಗದೀಶ್ ಶೆಟ್ಟರ್, "ನಾನು ಈ ಹಿಂದೆ ಸಭಾಧ್ಯಕ್ಷನಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಈಗ ಕಿರಿಯರಾದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ಸಂಪುಟದಲ್ಲಿ ಸಚಿವನಾಗಿ ಕೆಲಸ ಮಾಡುವ ಆಕಾಂಕ್ಷೆ ನನಗಿಲ್ಲ" ಎಂದು ಹೇಳಿದ್ದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಯಡಿಯೂರಪ್ಪ ಸಂಪುಟ ಸೇರಿದ್ದರು. ಕೈಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ವೈರಲ್ ಆಗಿರುವ ಆಡಿಯೋ ಹೇಳಿಕೆಗೂ ಜಗದೀಶ್ ಶೆಟ್ಟರ್ ತೀರ್ಮಾನಕ್ಕೂ ಸಂಬಂಧವಿದೆಯೇ? ಎಂದು ಕಾದು ನೋಡಬೇಕಿದೆ.
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವಾಗ ಸಂಪುಟ ವಿಸ್ತರಣೆ ಮಾಡಲಿದ್ದಾರೆ? ಎಂಬುದು ಸದ್ಯದ ಕುತೂಹಲವಾಗಿದೆ. ಯಾರಿಗೆ ಸಚಿವ ಸ್ಥಾನ ಸಿಗಲಿದೆ? ಎಂದು ಸಹ ಕಾದು ನೋಡಬೇಕಿದೆ.












Click it and Unblock the Notifications