ಕೊನೆಯ ದಿನ ನಾಮಪತ್ರ ಸಲ್ಲಿಸಿದ ಹಲವು ಘಟಾನುಘಟಿ ನಾಯಕರು
ಬೆಂಗಳೂರು, ನವೆಂಬರ್ 18: ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಇಂದು ಹಲವು ಘಟಾನುಘಟಿ ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದರು.
ಹೊಸಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಂಟಿಬಿ ನಾಗರಾಜು ಅವರು ಇಂದು ನಾಮಪತ್ರ ಸಲ್ಲಿಸಿದರು. ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಥ್ ನೀಡಿದರು. ಭಾರಿ ಜನಬೆಂಬಲ ಪ್ರದರ್ಶಿಸಿದ ಎಂಟಿಬಿ ನಾಮಪತ್ರ ಸಲ್ಲಿಕೆ ನಂತರ ಬೃಹತ್ ಸಮಾವೇಶವನ್ನು ಆಯೋಜಿಸಿದ್ದರು.
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಸುಧಾಕರ್ ಅವರೂ ಸಹ ಇಂದು ನಾಮಪತ್ರ ಸಲ್ಲಿಸಿದರು. ಅವರಿಗೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಜೊತೆಯಾಗಿದ್ದರು. ಅವರೂ ಸಹ ಭಾರಿ ಬಲಪ್ರದರ್ಶನವನ್ನು ಇಂದು ಮಾಡಿದರು.
ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ಕೆ.ಆರ್.ಪೇಟೆಯ ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ನಾರಾಯಣಗೌಡ ನಾಮಪತ್ರ ಸಲ್ಲಿಸಿದರು. ಈ ಸಮಯದಲ್ಲಿ ಜೆಡಿಎಸ್ ಪ್ರತಿಭಟನೆ ಮಾಡಿದ್ದಲ್ಲದೇ ಕಾರ್ಯಕರ್ತರು ನಾರಾಯಣಗೌಡ ಮೇಲೆ ಚಪ್ಪಲಿ ತೂರಿದರು. ನಾರಾಯಣಗೌಡ ಸಹ ರಾಹುಕಾಲ ಮೀರಬಾರದೆಂದು ಓಡೋಡಿ ಬಂದು ನಾಮಪತ್ರ ಸಲ್ಲಿಸಿದ್ದು ಸಹ ವರದಿ ಆಯಿತು.
ಹಲವು ಅನರ್ಹರಿಂದ ಇಂದೇ ನಾಮಪತ್ರ
ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹಾಗೂ ಕೆ.ಆರ್.ಪುರಂ ಬಿಜೆಪಿ ಅಭ್ಯರ್ಥಿ ಅನರ್ಹ ಭೈರತಿ ಬಸವರಾಜು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ನಿಂದ ಇದೇ ಕ್ಷೇತ್ರಕ್ಕೆ ನಾರಾಯಣಸ್ವಾಮಿ ನಾಮಪತ್ರ ಸಲ್ಲಿಸಿದರು ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜೊತೆಯಾಗಿದ್ದರು. ಯಲ್ಲಾಪುರ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಂ ಹೆಬ್ಬಾರ್ ಇಂದು ನಾಮಪತ್ರ ಸಲ್ಲಿಸಿದರು, ಇವರಿಗೆ ಬಿಜೆಪಿ ಸಂಸದ ಅನಂತ್ಕುಮಾರ್ ಹೆಗಡೆ ಜೊತೆಯಾದರು.
ಸತೀಶ್ ಜಾರಕಿಹೊಳಿಯಿಂದ ನಾಮಪತ್ರ: ಅಚ್ಚರಿ
ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದರೆ. ಅವರ ಸಹೋದರರಾದ ಲಖನ್ ಜಾರಕಿಹೊಳಿ ಕಾಂಗ್ರೆಸ್ನಿಂದ ನಾಮಪತ್ರ ಸಲ್ಲಿಸಿದರು. ಜೊತೆಗೆ ಸತೀಶ್ ಜಾರಕಿಹೊಳಿ ಸಹ ನಾಮಪತ್ರ ಸಲ್ಲಿಸಿದ್ದು ವಿಶೇಷ.
ರಿಜ್ವಾನ್ ಅರ್ಷದ್ ನಾಮಪತ್ರ
ಶಿವಾಜಿನಗರ ಕ್ಷೇತ್ರಕ್ಕೆ ಬಿಜೆಪಿಯ ಶರವಣ ನಾಮಪತ್ರ ಸಲ್ಲಿಸಿದರು. ಇವರಿಗೆ ಸಚಿವ ಸುರೇಶ್ ಕುಮಾರ್ ಜೊತೆಯಾದರು. ಇದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಿಜ್ವಾನ್ ಅರ್ಷದ್ ನಾಮಮಪತ್ರ ಸಲ್ಲಿಸಿದರು. ಇವರಿಗೆ ದಿನೇಶ್ ಗುಂಡೂರಾವ್, ಎನ್.ಎ.ಹ್ಯಾರಿಸ್ ಜೊತೆಯಾದರು.
ಕಾಂಗ್ರೆಸ್ನಿಂದ ಎಂ.ನಾಗರಾಜು ನಾಮಪತ್ರ
ಮಹಾಲಕ್ಷ್ಮಿ ಲೇಔಟ್ನಿಂದ ಗೋಪಾಲಯ್ಯ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇವರಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಜೊತೆಯಾದರು. ಕಾಂಗ್ರೆಸ್ನಿಂದ ಬಿಬಿಎಂಪಿ ಸದಸ್ಯ ಎಂ.ನಾಗರಾಜು ನಾಮಪತ್ರ ಸಲ್ಲಿಸಿದರು. ಇವರಿಗೆ ರಾಮಲಿಂಗಾ ರೆಡ್ಡಿ ಜೊತೆಯಾದರು.
ಬಿ.ಸಿ.ಪಾಟೀಲ್, ಅರುಣ್ ಕುಮಾರ್, ಕೆ.ಬಿ.ಕೋಳಿವಾಡ ನಾಮಪತ್ರ
ಹಿರೇಕೆರೂರಿನಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಬಿ.ಸಿ.ಪಾಟೀಲ್, ಕಾಂಗ್ರೆಸ್ನಿಂದ ಬಿ.ಎಚ್.ಬನ್ನಿಕೋಡ್ ನಾಮಪತ್ರ ಸಲ್ಲಿಸಿದರು. ರಾಣೆಬೆನ್ನೂರಿನಿಂದ ಬಿಜೆಪಿಯ ಅರುಣ್ಕುಮಾರ್ ಪೂಜಾರ್, ಕಾಂಗ್ರೆಸ್ನಿಂದ ಕೆ.ಬಿ.ಕೋಳಿವಾಡ, ಜೆಡಿಎಸ್ನಿಂದ ಮಲ್ಲಿಕಾರ್ಜುನ ಹಲಗೇರಿ, ಕಾಗವಾಡದಲ್ಲಿ ಬಿಜೆಪಿಯಿಂದ ಶ್ರೀಮಂತ್ ಪಾಟೀಲ್, ಕಾಂಗ್ರೆಸ್ನಿಂದ ಭರಮಗೌಡ ಕಾಗೆ ನಾಮಪತ್ರ ಸಲ್ಲಿಸಿದರು. ರಾಣೆಬೆನ್ನೂರಿನಲ್ಲಿ ಆರ್.ಶಂಕರ್ಗೆ ಟಿಕೆಟ್ ನೀಡದ ಬಗ್ಗೆ ಪ್ರತಿಭಟನೆ ಸಹ ನಡೆಯಿತು.
ಅಥಣಿಯಿಂದ ಮಹೇಶ್ ಕುಮಟಳ್ಳಿ ನಾಮಪತ್ರ
ಅಥಣಿಯಿಂದ ಮಹೇಶ್ ಕುಮಟಳ್ಳಿ ನಾಮಪತ್ರ ಸಲ್ಲಿಸಿದರು. ಈ ಸಮಯ ಅದೇ ಕ್ಷೇತ್ರದಲ್ಲಿ ಕಳೆದ ಬಾರಿ ಸೋತಿದ್ದ ಹಾಲಿ ಡಿಸಿಎಂ ಲಕ್ಷ್ಮಣ ಸವಧಿ ಹಾಜರಿದ್ದರು. ವಿಜಯನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆನಂದ್ ಸಿಂಗ್ ನಾಮಪತ್ರ ಸಲ್ಲಿಸಿದರು. ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್ ಸಹ ನಾಮಪತ್ರ ಸಲ್ಲಿಸಿದರು. ಅವರಿಗೆ ಹಾಲಿನ ಅಭಿಷೇಕ ಮಾಡಿದ್ದು ವಿಶೇಷವಾಗಿತ್ತು.