ಮಂಗಳೂರು ಆಟೋ ಸ್ಫೋಟ: ವಿಡಿಯೋ ನೋಡಿ ಬಾಂಬ್ ತಯಾರಿಕೆ ಕಲಿತ ಆರೋಪಿ
ಮಂಗಳೂರು, ನ. 23: ಮಂಗಳೂರು ನಗರದಲ್ಲಿ ಆಟೋದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಶಂಕಿತ ಆರೋಪಿ ಮೂಲಭೂತವಾದಿ ಗುಂಪುಗಳ ಮೆಸೇಜ್ಗಳ ಮೂಲಕ ಬಾಂಬ್ ತಯಾರಿಸುವುದನ್ನು ಕಲಿತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಶಾರಿಕ್ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಗುಂಪುಗಳಿಂದ ಬಂದ ಸಂದೇಶಗಳ ಮೂಲಕ ಬಾಂಬ್ ತಯಾರಿಕೆಯನ್ನು ಕಲಿತಿದ್ದಾನೆ ಎಂದು ತನಿಖಾ ತಂಡದ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಮಂಗಳೂರು ಆಟೋ ಸ್ಫೋಟ: ಸಿಮ್ ಖರೀದಿಸಲು ಶಾರಿಕ್ ಬಳಸಿದ್ದು ಬಳ್ಳಾರಿ ಅಡ್ರೆಸ್
ಪ್ರಕರಣದ ಪ್ರಮುಖ ಶಂಕಿತನಾಗಿರುವ 24 ವರ್ಷದ ಮೊಹಮ್ಮದ್ ಶಾರಿಕ್ ಮತ್ತು ಆತನ ಸಹಚರರಾದ ಅಬ್ದುಲ್ ಮಥೀನ್ ತಾಹಾ, ಅರಾಫತ್ ಅಲಿ, ಮಾಜ್ ಮುನೀರ್ ಅಹಮದ್ ಮತ್ತು ಸೈಯದ್ ಯಾಸಿನ್ ಎಲ್ಲರೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿಗಳು.
"ಇಲ್ಲಿಯವರೆಗೆ, ಅವರು ಯಾವುದೇ ಸಂಸ್ಥೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿಲ್ಲ ಎಂಬುದು ನಮಗೆ ತಿಳಿದು ಬಂದಿದೆ. ಆದರೆ, ಅವರು ವಿವಿಧ ಮೂಲಗಳ ಮೂಲಕ ಇಸ್ಲಾಮಿಕ್ ಸ್ಟೇಟ್ ಒದಗಿಸುವ ಹಲವು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಅವರ ಸ್ವಂತ ಪ್ರೇರಣೆಯಿಂದ ಈ ಕೆಲಸವನ್ನು ಪ್ಲಾನ್ ಮಾಡಿದ್ದಾರೆ" ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳ ಗುಂಪಿನಲ್ಲಿ ಅಬ್ದುಲ್ ಮಥೀನ್ ತಾಹಾ ಮಾತ್ರ ದಕ್ಷಿಣ ಭಾರತದ ಕಾಡಿನಲ್ಲಿ ಐಎಸ್ ಪ್ರಾಂತ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಅಲ್-ಹಿಂದ್ ಮಾಡ್ಯೂಲ್ನ ಸದಸ್ಯರಾಗಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
"ಟೆಲಿಗ್ರಾಮ್ನಲ್ಲಿ ಅನೇಕ ಗುಂಪುಗಳಿವೆ. ಇಸ್ಲಾಮಿಕ್ ಸ್ಟೇಟ್ಗೆ ಸಂಬಂಧಿಸಿದ ಹಲವಾರು ವೇದಿಕೆಗಳು ಪ್ರಚಾರ ಸಾಮಗ್ರಿಗಳನ್ನು ಒದಗಿಸುತ್ತವೆ. ಇದರಲ್ಲಿ ಸ್ಫೋಟಕಗಳನ್ನು ನೀವೇ ಮಾಡಿ (Do It Yourself) ಎಂಬ ವಿಡಿಯೋಗಳಿವೆ. ಇದನ್ನು ಆರೋಪಿ ಬಳಸಿಕೊಂಡಿದ್ದಾರೆ" ಎಂದರು.
ಶಾರಿಕ್ ಅವರ ಫೋನ್ನಲ್ಲಿ ಬೈಕ್ ಬಾಂಬ್ ಮತ್ತು ಕುಕ್ಕರ್ ಬಾಂಬ್ ಅನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ವಿಡಿಯೋಗಳಿವೆ. ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೈಸೂರಿನ ಶಾರಿಕ್ ಅವರ ಮನೆಯಲ್ಲಿ ಭಾನುವಾರ ರಾತ್ರಿ ಪೊಲೀಸರು 150 ಬೆಂಕಿಕಡ್ಡಿಗಳು, ಸಲ್ಫರ್ ಪೌಡರ್ ಮತ್ತು ಗನ್ ಪೌಡರ್ ವಶಪಡಿಸಿಕೊಂಡಿದ್ದಾರೆ.
2020ರ ಡಿಸೆಂಬರ್ನಲ್ಲಿ ಮಂಗಳೂರಿನ ಗೋಡೆ ಮತ್ತು ಕಟ್ಟಡದ ಮೇಲೆ ಭಯೋತ್ಪಾದನಾ ಪರ ಬರಹ ಬರೆದಿದ್ದ ಪ್ರಕರಣದಲ್ಲಿ ಶಾರಿಕ್ನನ್ನು ಬಂಧಿಸಲಾಗಿತ್ತು. ಅದೇ ಪ್ರಕರಣದಲ್ಲಿ ಆಗ 21 ವರ್ಷ ವಯಸ್ಸಿನ ಮಜ್ ಮುನೀರ್ ಅಹ್ಮದ್, ಅಕಾ, ಮಜ್ ಎಂಬಾತನನ್ನೂ ಬಂಧಿಸಲಾಗಿತ್ತು.
2020ರಲ್ಲಿ ಭಯೋತ್ಪಾದನಾ ಪರ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಶಾರಿಕ್ ತನ್ನ ಕಾನೂನು ಹೋರಾಟಕ್ಕೆ ಸಂಗ್ರಹಿಸಿದ ಹಣವನ್ನು ಬಾಂಬ್ ತಯಾರಿಸಲು ಬಳಸಿದ ಉಪಕರಣಗಳನ್ನು ಖರೀದಿಸಲು ಬಳಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.