ಕನ್ನಡ ಮಾಧ್ಯಮಕ್ಕೆ ಕೀರ್ತಿ ತಂದ ಕುಡ್ಲ ಹುಡ್ಗಿ
ಮಂಗಳೂರು, ಮೇ.13: ರಾಜ್ಯದಲ್ಲಿ ಭಾಷಾ ಮಾಧ್ಯಮದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಕನ್ನಡ ಮಾಧ್ಯಮದಲ್ಲಿ ಓದಿ ಎಸ್ ಎಸ್ ಎಲ್ ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಥಮ ಶ್ರೇಯಾಂಕದಲ್ಲಿ ಮಂಗಳೂರಿನ ಲಾವಣ್ಯ ಪಾಸಾಗಿದ್ದಾರೆ.
ಬಿಜೈನ ಲೋರ್ಡ್ಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿರುವ ಲಾವಣ್ಯ ಈಗ ರಾಜ್ಯದ ಗಮನ ಸೆಳೆದಿದ್ದಾಳೆ. 625 ಅಂಕಗಳಲ್ಲಿ 611 ಅಂಕ ಪಡೆದಿರುವ ಲಾವಣ್ಯ ಒಟ್ಟು ಶೇ.97.76 ಗರಿಷ್ಠ ಸಾಧನೆ ಮಾಡಿದ್ದಾಳೆ. ಗಣಿತ ಹಾಗೂ ಸಮಾಜದಲ್ಲಿ ಶೇ. 100 ಅಂಕಗಳನ್ನು ಪಡೆದಿದ್ದಾಳೆ. ವಿಜ್ಞಾನದಲ್ಲಿ 94, ಕನ್ನಡ ಪ್ರಥಮ ಭಾಷೆಯಲ್ಲಿ 123 ಅಂಕ, ಎರಡನೇ ಭಾಷಾ ಜ್ಞಾನದಲ್ಲಿ 95 ಹಾಗೂ ಮೂರನೇ ಭಾಷಾ ಜ್ಞಾನದಲ್ಲಿ 99 ಅಂಕಗಳನ್ನು ಪಡೆದಿರುವುದು ವಿಶೇಷ.

ಬಿಜೈ ನಿವಾಸಿ ಉದ್ಯಮಿಯಾಗಿರುವ ಬಾಲಸುಬ್ರಹ್ಮಣ್ಯ ಹಾಗೂ ಪೂರ್ಣೀಮಾ ದಂಪತಿಗಳ ಸುಪುತ್ರಿ ಆಗಿದ್ದು ವಾಣಿಜ್ಯ ವಿಭಾಗದ ಮೂಲಕ ಆರ್ಥಿಕತೆಯ ಕ್ಷೇತ್ರದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಲಿದ್ದೇನೆ ಎಂದು ಒನ್ ಇಂಡಿಯಾ ಕನ್ನಡ ಪ್ರತಿನಿಧಿಗೆ ಲಾವಣ್ಯ ಪ್ರತಿಕ್ರಿಯಿಸಿದ್ದಾಳೆ. ಉಳಿದಂತೆ,ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಅಯೇಷಾ 612 ಅಂಕಗಳಿಸಿ ರಾಜ್ಯದ ಶ್ರೇಯಾಂಕ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದ್ದಾಳೆ.
ಮಾರ್ಚ್-ಏಪ್ರಿಲ್ ನಲ್ಲಿ ನಡೆದ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ.ಎ. ನಿತ್ಯಾ ಸುರಭಿ ಅವರು 625ಕ್ಕೆ 622 (ಶೇ 99.52) ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮೆಡ್ ಪ್ಲಸ್ ಔಷಧ ಅಂಗಡಿಯ ಫಾರ್ಮಸಿಸ್ಟ್ ಬಿ.ಎಸ್. ಅನಂತಶಯನಂ ಮತ್ತು ರೂಪಶ್ರೀ ದಂಪತಿಯ ಪುತ್ರಿ ನಿತ್ಯ ಸುರಭಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಓದಿ.












Click it and Unblock the Notifications