ಪ್ರೀತ್ಸೋಕೆ ಒಲ್ಲೆ ಎಂದವಳ ಬೆರಳು ಕತ್ತರಿಸಿದ ಭಗ್ನಪ್ರೇಮಿ
ಮಂಡ್ಯ, ನವೆಂಬರ್, 06 : ಕಾಲೇಜು ವಿದ್ಯಾರ್ಥಿನಿಯೊಬ್ಬಳು ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ ಕಾರಣ ಕುಪಿತಗೊಂಡ ಪ್ರೇಮಿ ಆಕೆಯ ಅಂಗೈ ಕತ್ತರಿಸಿದ ಘಟನೆ ಮದ್ದೂರು ತಾಲೂಕಿನ ನಾಗನದೊಡ್ಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ರವಿಕುಮಾರ್ ಎಂಬಾತನೇ ವಿದ್ಯಾರ್ಥಿನಿಯ ಅಂಗೈ ಕತ್ತರಿಸಿ ಜೈಲ್ ಸೇರಿದ ಭಗ್ನಪ್ರೇಮಿ. ಈತ ನಾಗದೊಡ್ಡಿ ಗ್ರಾಮದವನಾಗಿದ್ದು, ಅದೇ ಗ್ರಾಮದ ಕಾಲೇಜಿಗೆ ಹೋಗುತ್ತಿದ್ದ ಬೃಂದಾ (17) ಎಂಬಾಕೆಯನ್ನು ಆತ ಪ್ರೀತಿಸುತ್ತಿದ್ದ. ಆದರೆ ಆಕೆ ಮಾತ್ರ ಅವನ ಪ್ರೀತಿಗೆ ಸಮ್ಮತಿ ನೀಡಿರಲಿಲ್ಲ.[ತೊಟ್ಟಿಗೆ ನವಜಾತ ಕಂದಮ್ಮನ ಬಿಸಾಕಿದ ನಿರ್ದಯಿ ಮಹಿಳೆ]
ರವಿಕುಮಾರ್ ಒಮ್ಮೆ ಬೃಂದಾಳನ್ನು ತಡೆದು ತನ್ನ ಪ್ರೇಮವನ್ನು ನಿವೇದಿಸಿದ್ದಾನೆ. ಆದರೆ ಆಕೆ ಆತನ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಇದರಿಂದ ಕೋಪಗೊಂಡ ರವಿಕುಮಾರ್ ಆಕೆಯನ್ನು ಒಪ್ಪಿಸಿಯೇ ತೀರಬೇಕೆಂದು ತೀರ್ಮಾನಿಸಿದ್ದಾನೆ.
ಆಕೆ ಕಾಲೇಜು ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಸಂದರ್ಭ ನಾಗನದೊಡ್ಡಿ ಗ್ರಾಮದಲ್ಲಿ ಆತ ಸ್ನೇಹಿತರೊಡನೆ ಅಡ್ಡಹಾಕಿದ್ದಾನೆ. ಪ್ರೀತಿಗೆ ಒಪ್ಪಿಗೆ ಸೂಚಿಸುವಂತೆ ಒತ್ತಾಯಿಸಿದ್ದಾನೆ.[ಪಾಂಡವಪುರದಲ್ಲಿ ಯುವತಿ ಮೇಲೆ ಪುಂಡರ ಅತ್ಯಾಚಾರ]
ಆದರೆ, ಬೃಂದಾ ಆತನ ಪ್ರೀತಿಗೆ ನಿರಾಕರಣೆ ಮಾಡಿದಾಗ, ರವಿಕುಮಾರ್ ಮತ್ತು ಗೆಳೆಯರು ಮಚ್ಚಿನಿಂದ ಹೊಡೆದಿದ್ದು ಪರಿಣಾಮ ಅಂಗೈ ಮಾಂಸವೇ ಕಿತ್ತು ಬಂದಿದೆ. ರಕ್ತ ಚಿಮ್ಮಿದನ್ನು ಕಂಡ ಅವರು ಪರಾರಿಯಾಗಿದ್ದಾರೆ.
ಬೃಂದಾ ನೋವಿನಿಂದ ಕಿರುಚುತ್ತಿದ್ದುದನ್ನು ಕಂಡ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ರಕ್ತದ ಮಡುವಿನಲ್ಲಿದ್ದ ಆಕೆಯನ್ನು ತಕ್ಷಣ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.[ಮಂಡ್ಯ : ಕಾವೇರಿ ತೀರದಲ್ಲಿ ಕಾಮುಕನಿಗೆ ಚಪ್ಪಲಿ ಸೇವೆ]
ಇದೀಗ ಹೆಚ್ಚಿನ ಚಿಕಿತ್ಸೆಯನ್ನು ಬೆಂಗಳೂರಿನಲ್ಲಿ ನೀಡಲಾಗುತ್ತಿದ್ದು, ಆರೋಪಿ ರವಿಕುಮಾರ್ ನನ್ನು ಬೆಸಗರಹಳ್ಳಿ ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಮತ್ತಿಬ್ಬರ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.