'ಅಂಬಿಯನ್ನು ರಾಜಕೀಯಕ್ಕೆ ಕರೆತಂದಿದ್ದೇ ನಮ್ಮ ತಂದೆ'
ಕೆಆರ್ ಪೇಟೆ, ಫೆ. 27: ಮಂಡ್ಯ ಸಂಸದೆ, ಕನ್ನಡದ ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನಾ ಅವರು ನಿನ್ನೆ ಇಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ತಮ್ಮ ರಾಜಕೀಯ ಅನುಭವವನ್ನು ಹಂಚಿಕೊಂಡಿದ್ದಾರೆ. ಜತೆಗೆ, ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಅಂಬರೀಷ್ ಅವರ ರಾಜಕೀಯ ಎಂಟ್ರಿ ಹಾಗೂ ಅವರ ಜತೆಗಿನ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ. ( ನಟ ಅಂಬರೀಶ್ ಆರೋಗ್ಯದ ಬಗ್ಗೆ ಆತಂಕ ಬೇಡ )

ಹಿತೈಷಿ ಅಂಬರೀಷ್ ಜತೆ ಜಗಳ ಮಾಡಿಕೊಳ್ಳೋಲ್ಲ
ಹಿರಿಯರಾದ ಅಂಬರೀಷ್ ಅವರು ನನ್ನ ಹಿತೈಷಿ. ಅವರೊಂದಿಗೆ ನಾನು ಜಗಳ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ. ಸುಳ್ಳಗಳನ್ನೆಲ್ಲಾ ನಂಬಬೇಡಿ' ಎಂದಿದ್ದಾರೆ. 'ಅಂಬರೀಷ್ ಅಂಕಲ್ ಆದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ. ಈ ಬಗ್ಗೆ ಚಿಂತೆ ಬೇಡ. ಶ್ವಾಸಕೋಶದ ತೊಂದರೆಯಿಂದ ಉಸಿರಾಟದ ಸಮಸ್ಯೆ ಎದುರಾಗಿತ್ತು. ವೈದ್ಯರ ಚಿಕಿತ್ಸೆಗೆ ಅಂಬರೀಷ್ ಸ್ಪಂದಿಸುತ್ತಿದ್ದಾರೆ' ಎಂದು ಒಬ್ಬ ವಿದ್ಯಾರ್ಥಿನಿಯ ಪ್ರಶ್ನೆಗೆ ರಮ್ಯಾ ಉತ್ತರ ನೀಡಿದರು.

ಅಂಬರೀಷರನ್ನು ರಾಜಕೀಯಕ್ಕೆ ಕರೆತಂದಿದ್ದೇ ನಮ್ಮ ತಂದೆ
ಮುಂದುವರಿದು ಮಾತನಾಡಿದ ನಟ ರಮ್ಯಾ ಅವರು 'ಅಂಬರೀಷ್ ಅವರನ್ನು ರಾಜಕೀಯಕ್ಕೆ ಕರೆತಂದಿದ್ದೇ ನಮ್ಮ ತಂದೆ. ಆದರೆ ಇವತ್ತು ಅವರಿಲ್ಲ. ನನ್ನ ತಂದೆ ಮತ್ತು ಅಂಬರೀಷರ ಒತ್ತಾಸೆಯಿಂದ ನಾನು ರಾಜಕೀಯಕ್ಕೆ ಬಂದೆ. ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮತದಾರರು/ಮುಖಂಡರ ಆಶೀರ್ವಾದದಿಂದ ಗೆದ್ದೆ' ಎಂದು ಹೇಳಿದರು.

ಮಂಡ್ಯ ಜನತೆಗೆ ರಮ್ಯ ಅಭಯಹಸ್ತ
ಮುಂದಿನ ಚುನಾವಣೆಯಲ್ಲೂ ನೀವೇ ಅಭ್ಯರ್ಥಿಯಂತೆ. ಯಾವ ಕಾರಣಕ್ಕೆ ನಿಮಗೆ ನಾವೂ ನಿಮಗೆ ಮತ್ತೆ ಮತ ಹಾಕಬೇಕು? ಎಂಬ ಪ್ರಶ್ನೆಗೆ ರಮ್ಯಾ ಹೀಗೆ ಉತ್ತರಿಸಿದರು:
ಮಂಡ್ಯವನ್ನು ಯಾವ ರೀತಿ ಜಾಗತಿಕ ಪ್ರಪಂಚದ ಸ್ಪರ್ಧೆಗೆ ಅಣಿಗೊಳಿಸಬೇಕು ಎಂಬ ಬಗ್ಗೆ ನನ್ನದೇ ಆದ ಸ್ಪಷ್ಟ ಕಲ್ಪನೆಗಳಿವೆ. ಈಗಿರುವ ಅಧಿಕಾರದ ಅವಧಿ ಕಡಿಮೆ. ಹಾಗಾಗಿ, ಎಲ್ಲವೂ ಕೈಗೂಡುತ್ತಿಲ್ಲ. ಇರುವ ಅವಧಿಯಲ್ಲಿಯೇ ಮಂಡ್ಯಕ್ಕೆ ಕೇಂದ್ರೀಯ ವಿದ್ಯಾಶಾಲೆ, ಕಿಡ್ನಿ ಡಯಾಲಿಸಿಸ್ ಕೇಂದ್ರ, ಮೈಶುಗರ್ ಪುನಶ್ಚೇತನಕ್ಕಾಗಿ ಹೋರಾಟ ಹೀಗೆ ಹಲವಾರು ಕೆಲಸಗಳನ್ನು ಮಾಡಿದ್ದೇನೆ. ಇನ್ನೂ ಮಾಡಬೇಕಾದ ಕೆಲಸಗಳು ಸಾಕಷ್ಟಿದ್ದು ಮುಂದೆ ನಿಮ್ಮೆಲ್ಲರ ಆಶೀರ್ವಾದ ಸಿಕ್ಕರೆ ಸಾಧಿಸಿ ತೋರಿಸುತ್ತೇನೆ' ಎಂದು ಅಭಯ ನೀಡಿದರು.

ನನ್ನ ಬಗ್ಗೆ ಸಂಶಯವೇ ಬೇಡ -ರಮ್ಯಾ
ಮಂಡ್ಯದಲ್ಲಿ ವಾಸ ಇಲ್ಲ. ನಿಮಗೆ ಇಲ್ಲಿನ ವೆದರ್ ಅಡ್ಜಸ್ಟ್ ಆಗುತ್ತಿಲ್ಲವಾ? ಎಂಬ ಪ್ರಶ್ನೆಗೂ ನಗುಮುಖದೊಂದಿಗೆ ಉತ್ತರಿಸಿದ ರಮ್ಯಾ, ನಾನು ಈಗಾಗಲೇ ಮಂಡ್ಯದಲ್ಲಿ ಮನೆ ಬಾಡಿಗೆ ತಗೆದುಕೊಂಡು ವಾಸವಾಗಿದ್ದೇನೆ. ನಿಮ್ಮ ಕೆಲಸ ಮಾಡಲು ಸುತ್ತಾಡಬೇಕು. ಆದ್ದರಿಂದ ಬಹುಪಾಲು ಜಿಲ್ಲೆಯ ಹೊರಗಡೆಯೇ ಇರುತ್ತೇನೆ. ನಾನು ಮಂಡ್ಯದ ಮೊಮ್ಮಗಳು. ನನ್ನ ಬಗ್ಗೆಯಾಗಲಿ ನನ್ನ ಕಾರ್ಯಕ್ಷಮತೆ ಬಗ್ಗೆಯಾಗಲಿ ಸಂಶಯವೇ ಬೇಡ' ಎಂದು ಸಮಾಧಾನದ ಉತ್ತರ ನೀಡಿದರು.

ನಾನು ಕೇಜ್ರಿವಾಲಾರ ಹಾಗೆ ಓಡಿಹೋಗುವವಳಲ್ಲ
ಇನ್ನು ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾರ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ಪ್ರಸ್ತಾಪಿಸಿ, ಅವರ ಹಾಗೆಯೇ ನೀವು ರಾಜಕೀಯಕ್ಕೆ ಹೊಸಬರು ಆದರೆ ಇದನ್ನೆಲ್ಲಾ ಹೇಗೆ ನಿಭಾಯಿಸುತ್ತೀರಿ? ಎಂಬ ಪ್ರಶ್ನೆಗೆ
ಛೆ! ನನ್ನನ್ನು ಅವರ ಜತೆ ಹೋಲಿಕೆಯೇ ಮಾಡಬೇಡಿ. ಅವರು ಅಧಿಕಾರ ದೊರೆತರೂ ಅದನ್ನು ಸಮರ್ಥವಾಗಿ ನಿಭಾಯಿಸಲಾಗದೆ ಅರ್ಧದಲ್ಲಿಯೇ ಓಡಿಹೋದರು. ಅವರೊಬ್ಬ ಅನನುಭವಿ, ಅಸಮರ್ಥ ನಾಯಕ.
ನಾನು ಜವಾಬ್ದಾರಿಯಿಂದ ನುಣುಚಿಕೊಂಡು ಹೋಗುವವಳಲ್ಲ. ರಾಜಕೀಯ ಕ್ಷೇತ್ರಕ್ಕೆ ಹೊಸಬಳೇ ಆಗಿದ್ದರೂ ಜನರ ಸಂಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದೇನೆ. ಸಂಸದೆಯಾಗಿ ಜನತೆಯ ಕಲ್ಯಾಣಕ್ಕೆ ನನ್ನ ಅಧಿಕಾರ ಬಳಸುತ್ತಿದ್ದೇನೆ ಎಂದು ಉತ್ತರಿಸಿ ಭಾರಿ ಕರದತಾಡನ ಸಂಪಾದಿಸಿದರು.












Click it and Unblock the Notifications