'ರಾಹುಲ್ ಗಾಂಧಿ ಅವರಿಗೆ ರಮ್ಯಾ ರೈಟ್ ಹ್ಯಾಂಡ್'
ಮಂಡ್ಯ, ಅಕ್ಟೋಬರ್ 01 : 'ಮಾಜಿ ಸಂಸದೆ ರಮ್ಯಾ ಅವರಿಗೆ ರಾಜ್ಯದ ಉಸ್ತುವಾರಿ ವಹಿಸಲಾಗಿದೆ. ಆದ್ದರಿಂದ, ಅವರು ಎಲ್ಲೆಡೆ ಚುರುಕಿನಿಂದ ಓಡಾಡುತ್ತಿದ್ದಾರೆ' ಎಂದು ಮಂಡ್ಯ ಕ್ಷೇತ್ರದ ಸಂಸದ ಸಿ.ಎಸ್.ಪುಟ್ಟರಾಜು ಅವರು ಲೇವಡಿ ಮಾಡಿದ್ದಾರೆ.
ಬುಧವಾರ ಮಂಡ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿ.ಎಸ್.ಪುಟ್ಟರಾಜು ಅವರು, 'ರಮ್ಯಾ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ರೈಟ್ ಹ್ಯಾಂಡ್, ಅವರಿಗೆ ರಾಜ್ಯದ ಉಸ್ತುವಾರಿ ಜವಾಬ್ದಾರಿವಹಿಸಲಾಗಿದೆ' ಎಂದು ವ್ಯಂಗ್ಯವಾಡಿದರು. [ಮಂಡ್ಯಕ್ಕೆ ಭೇಟಿ ನೀಡಿದ ಮಾಜಿ ಸಂಸದೆ ರಮ್ಯಾ ಹೇಳಿದ್ದೇನು?]

'ಮಂಡ್ಯ ಜಿಲ್ಲಾ ರಾಜಕಾರಣದಲ್ಲಿ ಸಕ್ರಿಯರಾಗಲು ರಮ್ಯಾ ಅವರು ತಯಾರಿ ನಡೆಸುತ್ತಿದ್ದಾರೆ. ಆದ್ದರಿಂದ, ಚುರುಕಿನಿಂದ ಓಡಾಡುತ್ತಿದ್ದಾರೆ. ಅಧಿಕಾರವಿಲ್ಲದಿದ್ದರೂ ಅಭಿವೃದ್ಧಿ ಕಾಮಗಾರಿಗಳನ್ನು ತರುವ ಸಾಮರ್ಥ್ಯ ಅವರಲ್ಲಿದೆ. ಅವರು ಆ ಕೆಲಸವನ್ನು ಮೊದಲು ಮಾಡಲಿ' ಎಂದರು. [ರಾಹುಲ್ ಗಾಂಧಿ ಹಿಂದೆ ರಮ್ಯಾ ಜಿಂಕೆ ಮರಿ: ಕುಮಾರಸ್ವಾಮಿ ವ್ಯಂಗ್ಯ]
ರಮ್ಯಾ ಸಮಯ ಪ್ರಜ್ಞೆ ನೋಡಿ : ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ವಿಚಾರದಲ್ಲಿ ರಮ್ಯಾ ಅವರು ನೀಡಿರುವ ಹೇಳಿಕೆಯನ್ನು ಲೇವಡಿ ಮಾಡಿದ ಪುಟ್ಟರಾಜು ಅವರು, 'ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಆದರೂ, ನೀರು ಬಿಟ್ಟಿಲ್ಲ ಎಂದು ರಮ್ಯಾ ಹೇಳಿರುವುದು ಅವರ ಸಮಯಪ್ರಜ್ಞೆಗೆ ಹಿಡಿದ ಕೈಗನ್ನಡಿ' ಎಂದು ಲೇವಡಿ ಮಾಡಿದರು.
ಅಂದಹಾಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅ.9ರಂದು ಮಂಡ್ಯ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ಕೊಟ್ಟು ಸಾಂತ್ವನ ಹೇಳಲಿದ್ದಾರೆ.












Click it and Unblock the Notifications