ಮಂಡ್ಯ : ಮೋನಿಕಾಳದ್ದು ಮರ್ಯಾದಾ ಹತ್ಯೆ
ಮಂಡ್ಯ, ಏಪ್ರಿಲ್ 05 : ಮಂಡ್ಯದ ಮೋನಿಕಾ ಹತ್ಯೆ ರಹಸ್ಯ ಬಯಲಾಗಿದೆ. ಇದು ಮರ್ಯಾದಾ ಹತ್ಯೆ ಎಂದು ಪೊಲೀಸರು ಹೇಳಿದ್ದಾರೆ. ಮೋನಿಕಾ ತಂದೆ ಮತ್ತು ಸೋದರ ಮಾವಂದಿರು ಸೇರಿ ಆಕೆಯನ್ನು ಕೊಲೆ ಮಾಡಿ, ನಂತರ ಆತ್ಮಹತ್ಯೆ ಎಂದು ನಂಬಿಸಿ ಶವವನ್ನು ಸುಟ್ಟು ಹಾಕಿದ್ದರು.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ಮೋನಿಕಾ ಹತ್ಯೆ ಬಗ್ಗೆ ಮಾಹಿತಿ ನೀಡಿದರು. 'ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಎಚ್.ಬಿ.ಮೋಹನ್, ಸೋದರ ಮಾವ ಡಿ.ಸುರೇಶ್ ಅವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಸೋದರ ಮಾವ ರಾಮಕೃಷ್ಣ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ' ಎಂದು ಹೇಳಿದರು. [ರಾಮನಗರದಲ್ಲೊಂದು ಮರ್ಯಾದಾ ಹತ್ಯೆ?]

ಮರ್ಯಾದಾ ಹತ್ಯೆ : ಮೋನಿಕಾ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಬಗ್ಗೆ ಹಲವು ಬಾರಿ ಆಕೆಗೆ ಬುದ್ಧಿವಾದ ಹೇಳಿದರೂ ಆಕೆ ಕೇಳಿರಲಿಲ್ಲ. ಇದರಿಂದಾಗಿ ಕೋಪಗೊಂಡ ತಂದೆ ಮತ್ತು ಸೋದರ ಮಾವಂದಿರು ಏ.2ರಂದು ಆಕೆಯ ಮೇಲೆ ಹಲ್ಲೆ ಮಾಡಿ, ಕಾಲಿನಿಂದ ಕುತ್ತಿಗೆಯನ್ನು ತುಳಿದು ಕೊಲೆ ಮಾಡಿದ್ದರು. [ಬೆಳಗಾವಿಯಲ್ಲಿ ನಡೆಯಿತಾ ಮರ್ಯಾದಾ ಹತ್ಯೆ]
ನಂತರ ಮನೆ ಬಳಿ ಇರುವ ಮರಕ್ಕೆ ನೇಣು ಹಾಕಿದ್ದರು. ಮೋನಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಬಂಧಿಕರು ಮತ್ತು ಸ್ಥಳೀಯರನ್ನು ನಂಬಿಸಿ, ಅವರ ಸಹಾಯದಿಂದ ಶವವನ್ನು ಸುಟ್ಟು ಹಾಕಿ, ಸಾಕ್ಷ್ಯ ನಾಶ ಮಾಡಿದ್ದರು. [ದುರಾಸೆಗೆ ಮಗಳನ್ನೇ ಬಲಿಕೊಟ್ಟ ದಂಪತಿಗಳು]
ಪತ್ರ ಬರೆಸಿಕೊಂಡಿದ್ದರು : ಮೊದಲು ಮಾರ್ಚ್ 28ರಂದು ಮೋನಿಕಾ ನಾಪತ್ತೆಯಾಗಿದ್ದಳು. ಮಾ.31ರಂದು ಈ ಕುರಿತು ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಏ.1ರಂದು ಪೋಷಕರ ಜೊತೆ ಠಾಣೆಗೆ ಬಂದಿದ್ದ ಮೋನಿಕಾ, ಅವರ ಜೊತೆ ತೆರಳುವುದಾಗಿ ಪತ್ರ ಬರೆದುಕೊಟ್ಟಿದ್ದಳು. [ತಮಿಳುನಾಡು : ಪ್ರೇಮಿಯೊಬ್ಬನ ಮರ್ಯಾದಾ ಹತ್ಯೆ]
ಏ.2ರಂದು ಆಕೆ ಪುನಃ ಮನೆಯಿಂದ ನಾಪತ್ತೆಯಾಗಿದ್ದಳು. ಪೋಷಕರು ಆಕೆಯನ್ನು ಹುಡುಕಿ ಕರೆದುಕೊಂಡು ಬಂದಿದ್ದರು. ಪ್ರೀತಿಸಿದ ಹುಡುಗನೊಂದಿಗೆ ಹೋಗು ನಮ್ಮ ಅಭ್ಯಂತರವಿಲ್ಲ. ಆದರೆ, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದುಕೊಟ್ಟು ಹೋಗು ಎಂದು ಕುಟುಂಬದವರು ಹೇಳಿದ್ದರು.
ಮೋನಿಕಾ ಪತ್ರ ಬರೆದುಕೊಟ್ಟ ನಂತರ ಆಕೆಯ ಮೇಲೆ ಹಲ್ಲೆ ಮಾಡಿದ ತಂದೆ ಮತ್ತು ಸೋದರ ಮಾವಂದಿರು ಆಕೆಯನ್ನು ಕೊಲೆ ಮಾಡಿದ್ದರು. ಆರೋಪಿಗಳ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ಕೊಲೆ ಮತ್ತು ಸಾಕ್ಷ್ಯ ನಾಶ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications