ಮಂಡ್ಯ ಲೋಕಸಭಾ: 'ನಿಖಿಲ್' ಸರ್ಧೆ ಬೇಡ: ಅಮಿತ್ ಶಾ 'ಎಚ್ಡಿಕೆ'ಗೆ ಕೊಟ್ಟ ಸಲಹೆಗಳೇನು?
ಬೆಂಗಳೂರು, ಮಾರ್ಚ್ 18: ಲೋಸಕಭಾ ಚುನಾವಣೆ ಅಂಗವಾಗಿ ಜೆಡಿಎಸ್- ಬಿಜೆಪಿ ಮೈತ್ರಿ ಪಕ್ಷಗಳಿಂದ 20 ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಆಗಿದೆ. ಈ ಪೈಕಿ ಜೆಡಿಎಸ್ಗೆ ನೀಡಲಾದ ಹೈವೋಲ್ಟೇಜ್ ಕ್ಷೇತ್ರವಾದ ಮಂಡ್ಯದಿಂದ ಯಾರು ಸ್ಪರ್ಧಿಸುತ್ತಾರೆ. ಈ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿಯವರ ಅಭಿಪ್ರಾಯವೇನು?, ಅಮಿತ್ ಶಾ ಕೊಟ್ಟ ಸಲಹೆಗಳೇನು? ಎಂಬ ಅಪ್ಡೇಟ್ ಇಲ್ಲಿದೆ.
ಹಳೇ ಮೈಸೂರು ಭಾಗದಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗಿನ ಇತ್ತೀಚೆಗೆ ಮಹತ್ವ ಚರ್ಚೆ ನಡೆಸಿರುವ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿಗೆ ಮಹತ್ವದ ಸಲಹೆಗಳು ಬಂದಿವೆ.

ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆಗೆ ಶಾ ಸೂಚನೆ
ಸದ್ಯದ ರಾಜಕೀಯ ಸ್ಥಿತಿಗತಿಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬೇಡ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎಚ್ಡಿ ಕುಮಾರಸ್ವಾಮಿ ನೀವೆ ಸ್ಪರ್ಧಿಸುವಂತೆ ಅಮಿತ್ ಶಾ ಅವರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯದಿಂದ ನೀವೆ ಕಣ್ಣಕ್ಕಿಳಿದರೆ ಗೆಲುವಿಗೆ ಮತ್ತು ಮೈತ್ರಿ ಭವಿಷ್ಯಕ್ಕೆ ಸಾಕಷ್ಟು ಸಹಾಯವಾಗಲಿದೆ. ಆದ್ದರಿಂದ ನೀವೆ ಸ್ಪರ್ಧಿಸುವುದು ಒಳಿತು ಎಂಬುದು ಬಿಜೆಪಿ ಸಲಹೆ. ಅಂತಿಮ ನಿರ್ಧಾರ ತಮಗೇ ಬಿಟ್ಟದ್ದು ಎಂದು ಅಮಿತ್ ಶಾ ತಿಳಿಸಿದ್ದಾರೆ.
ಇದಕ್ಕೆ ಒಮ್ಮೆಲೆ ನಿರ್ಧಾರ ಪ್ರಕಟಿಸದ ಎಚ್ಡಿ ಕುಮಾರಸ್ವಾಮಿಯವರು, ತಂದೆ ಎಚ್ಡಿ ದೇವೇಗೌಡ ಜೊತೆ ಚರ್ಚಿಸಿ ಈ ಬಗ್ಗೆ ತಿಳಿಸುವುದಾಗಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆಗೆ ಸೂಚನೆ
ಕುಮಾರಸ್ವಾಮಿಯವರ ಈ ಮಾತಿಗೆ ಪ್ರತಿಕ್ರಿಯಿಸಿದ ಅಮಿತ್ ಶಾ ಅವರು, ಚಿಕ್ಕಬಳ್ಳಾಪುರ ಕ್ಷೇತ್ರವನ್ನು ನಿಮ್ಮ ಸ್ಪರ್ಧೆ ಪರಿಗಣಿಸಿ, ಅಲ್ಲಿಂದಲಾದರೂ ನೀವು ಸ್ಪರ್ಧಿಸಿದರೆ ಮೈತ್ರಿಗೆ ಸಹಾಯವಾಗಲಿದೆ ಎಂದು ಅಮಿತ್ ಶಾ ಸಲಹೆ ನೀಡಿದ್ದಾರೆ.
ಆದರೆ ಕುಮಾರಸ್ವಾಮಿಯವರು, ತಮಗೆ ಅನಾರೋಗ್ಯ ಸಮಸ್ಯೆ ಇದೆ. ಹೀಗಾಗಿ ಚರ್ಚೆ ವೇಳೆ ಅಮಿತ್ ಶಾ ಮಾತಿಗೆ ಪೂರ್ಣವಾಗಿ ಸಹಮತ ವ್ಯಕ್ತಪಡಿಸಿಲ್ಲ. ಹಾಗಂತ ನಿರಾಕರಿಸುವ ಗೋಜಿಗೂ ಬೀಳದೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಅನಾರೋಗ್ಯ ಸಮಸ್ಯೆ ಮುಂದಿಟ್ಟ ಎಚ್ಡಿಕೆ
ಸಭೆಯಲ್ಲಿ ತಮ್ಮ ಆರೋಗ್ಯ ಸಮಸ್ಯೆಯನ್ನು ಬಿಜೆಪಿ ಮುಂದಿಟ್ಟಿದ್ದಾರೆ. ನಾಳೆ ಮಂಗಳವಾರ ಮಾರ್ಚ್ 19ರಂದು ಹೃದಯ ಸಂಬಂಧಿ ಚಿಕಿತ್ಸೆಗೆ ಒಳಗಾಗಬೇಕಿದೆ. ಹೀಗಾಗಿ ಗುರುವಾರ ಚಿಕಿತ್ಸೆ ನಿಗದಿಯಾಗಿದೆ. ಇಂತಹ ಸಂದರ್ಭದಲ್ಲಿ ಚುನಾವಣಾ ಸ್ಪರ್ಧೆಯಂತಹ ಒತ್ತಡ ಎದುರಿಸುವುದು ಸರಿಯಲ್ಲ ಎಂದು ಅಮಿತ್ ಶಾಗೆ ಕುಮಾರಸ್ವಾಮಿಯವರು ವಿವರಿಸಿದ್ದಾರೆ.
ಮಂಡ್ಯ ಮತ್ತು ತಮ್ಮ ಸ್ಪರ್ಧೆ ಕುರಿತು ಪಕ್ಷದ ಹಿರಿಯರು ಆಗಿರುವ ದೇವೇಗೌಡರ ಜತೆ ಚರ್ಚಿಸಿ ಬಳಿಕ ಈ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು. ಚಿಕ್ಕಮಗಳೂರಲ್ಲಿ ನಮ್ಮ ಬಲವೇನೋ ಇದೆ. ಆದರೆ ಅಲ್ಲಿ ಪಕ್ಷದ ಶಾಸಕರು ಇಲ್ಲ. ಈ ಬಗ್ಗೆ ಯೋಚಿಸಲಾಗುವುದು ಎಂದು ತಿಳಿಸಿದ್ದಾರೆ.
ಮಂಡ್ಯದಿಂದಲೇ ನಿಖಿಲ್ ಸೋಲು
ಮಂಡ್ಯ ಕ್ಷೇತ್ರದ ಗೆಲುವು ಬಿಜೆಪಿ ಹಾಗೂ ಜೆಡಿಎಸ್ ಗೆ ಅತ್ಯಂತ ಪ್ರತಿಷ್ಠೆಯಾಗಿದೆ. ಕಳೆದ 2019ರಲ್ಲಿ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿಯವರು ಸ್ಪರ್ಧಿಸಿ ಸೋತಿದ್ದರು. ಆಗ ಪಕ್ಷೇತರವಾಗಿ ಬಿಜೆಪಿ ಬೆಂಬಲಿತ ಹಾಲಿ ಸಂಸದೇ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸಿ ಬಹುಮತ ಗಳಿಸಿದ್ದರು.
ಸುಮಲತಾಗೆ ಮಂಡ್ಯ ಟಿಕೆಟ್ ಇಲ್ಲ?
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ತಪ್ಪುವ ಭೀತಿ ಎದುರಾಗಿದೆ. ಮೇಲಿಂದ ಮೇಲೆ ಬಿಜೆಪಿ ವರಿಷ್ಠರನ್ನು ಭೇಟಿ ಮಾಡುತ್ತಿದ್ದಾರೆ. ಮೊದಲು ಮಂಡ್ಯದಿಂದ ಟಿಕೆಟ್ ಕೇಳಿದ್ದ ಅವರು, ಮಂಡ್ಯ ಜೆಡಿಎಸ್ ಪಾಲಾದಗಲಿದೆ ಎಂದು ಗೊತ್ತಾದ ಬಳಿಕ, ಇದೀಗ ಬೇರೆ ಕ್ಷೇತ್ರದಿಂದ ಲೋಕಸಭೆಗೆ ಟಿಕೆಟ್ ನೀಡುವಂತೆ ಅವರು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ತಮ್ಮ ಮೊದಲ ಪಟ್ಟಿಯಲ್ಲಿ ಮಂಡ್ಯಕ್ಕೆ ವೆಂಕಟರಾಮೇಗೌಡ (ಸ್ಟಾರ್ ಚಂದ್ರು) ಅವರನ್ನು ಕಣಕ್ಕಿಳಿಸಿದೆ. ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಆದರೂ ಸಹಿತ ಮಂಡ್ಯ ಸೇರಿದಂತೆ ಕೆಲವು ಕ್ಷೇತ್ರಗಳಿಗೆ ಮೈತ್ರಿ ಪಕ್ಷದಿಂದ ಅಭ್ಯರ್ಥಿಗಳ ಘೋಷಣೆ ಬಾಕಿ ಇದೆ.
ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸ್ಪರ್ಧೆಗೂ ಈ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲಿಂದಲೂ ಬೇರೆಯ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಅಮಿತ್ ಶಾ ಅವರು ಎಚ್ಡಿ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಕೋಲಾರ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ಮಧ್ಯೆ ಎಲ್ಲವು ಸರಿಹೋಗುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ರಾಜಕೀಯ ಲೆಕ್ಕಾಚಾರದಲ್ಲಿ ಏನು ಬೇಕಾದರೂ ನಡೆಯಬಹುದು. ಕುಮಾರಸ್ವಾಮಿ ಅವರು ಕೊನೆ ಕ್ಷಣದಲ್ಲಿ ಮಂಡ್ಯದಿಂದ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಅವರು ಮಂಗಳವಾರ ಚಿಕಿತ್ಸೆ ತೆರಳಿ ಅಲ್ಲಿಂದ ಬಂದ ಮೇಲೆ ರಾಜಕೀಯ ಚಟುವಟಿಕೆಗಳು ಜೆಡಿಎಸ್ನಲ್ಲಿ ಮತ್ತಷ್ಟು ಗರಿಗೆದರಲಿವೆ.












Click it and Unblock the Notifications