ಎಚ್ಡಿಕೆ ಪೂರ್ಣಕಾಲಿಕ ಉದ್ಯೋಗವೇನು?; ಸಚಿವರ ಟ್ವೀಟ್!
ಬೆಂಗಳೂರು, ಆಗಸ್ಟ್ 07; ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮೇಲೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಲವು ಆರೋಪ ಮಾಡುತ್ತಿದ್ದಾರೆ. ನನ್ನ ಬಳಿ ಇರುವ ಪೆನ್ ಡ್ರೈನಲ್ಲಿ ದಾಖಲೆ ಇವೆ, ಸರಿಯಾದ ಸಮಯಕ್ಕೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಸಹ ಕುಮಾರಸ್ವಾಮಿಗೆ ತಿರುಗೇಟು ನೀಡುತ್ತಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಎಚ್. ಡಿ. ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ HDK ಯವರ ನಿದ್ರೆ, ನೆಮ್ಮದಿ ಹಾರಿ ಹೋಗಿದೆ. ಹತಾಶೆಯ ಕೂಪದಲ್ಲಿ ಬಿದ್ದು ವಿಲ ವಿಲ ಒದ್ದಾಡುತ್ತಿರುವ HDK ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದನ್ನೇ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ" ಎಂದು ದೂರಿದ್ದಾರೆ.

"ಆರೋಪ ಮಾಡಿದರೆ ಅದನ್ನು ಸಾಬೀತುಪಡಿಸಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದ್ಯಾಕೆ?. HDKಯವರು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಲು ಒಮ್ಮೆ ಪೆನ್ಡ್ರೈವ್ ತೋರಿಸುತ್ತಾರೆ ಮತ್ತೊಮ್ಮೆ ಸಿಡಿ ತೋರಿಸುತ್ತಾರೆ. ನಿಜವಾಗಿಯೂ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ" ಎಂದು ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ.
ತೋಳ ಬಂತು ತೋಳದ ಕಥೆ; ಸಚಿವರು ತಮ್ಮ ಟ್ವೀಟ್ನಲ್ಲಿ, "ಕುಮಾರಸ್ವಾಮಿಯವರ ಕೈಯನ್ನು ನಾವ್ಯಾರು ಕಟ್ಟಿ ಹಾಕಿಲ್ಲ. ಕುಮಾರಸ್ವಾಮಿಯವರು ಪದೇ ಪದೇ ತೋಳ ಬಂತು ತೋಳದ ಕಥೆಯ ಕಥಾನಾಯಕನ ರೀತಿ ವರ್ತಿಸಿದರೆ ಹೆದರುವರು ಯಾರು?" ಎಂದು ಪ್ರಶ್ನೆಯನ್ನು ಮಾಡಿದ್ದಾರೆ.
"HDKಯವರು ಚುನಾವಣೆಗೂ ಮುನ್ನ 'ಕಿಂಗ್ ಮೇಕರ್' ಆಗುವ ಕನಸು ಕಂಡಿದ್ದರು. ಆದರೆ ಜನರು ಚುನಾವಣೆಯಲ್ಲಿ HDKಯವರ 'ಕಿಂಗ್ ಮೇಕರ್' ಕನಸನ್ನು ನುಚ್ಚುನೂರು ಮಾಡಿದರು. ಕನಸು ಭಗ್ನಗೊಂಡ HDK, ಭಗ್ನಪ್ರೇಮಿಯಂತೆ ವ್ಯಗ್ರರಾಗಿದ್ದಾರೆ. ಹಾಗಾಗಿ ಬಾಯಿಗೆ ಬಂದಂತೆ ನಮ್ಮ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಾ ತಿರುಗಾಡುತ್ತಿದ್ದಾರೆ" ಎಂದು ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಡಿಕೆಶಿ ತಿರುಗೇಟು; ಎಚ್. ಡಿ. ಕುಮಾರಸ್ವಾಮಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾಡಿದ ಆರೋಪಗಳಿಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಹ ತಿರುಗೇಟು ನೀಡಿದ್ದರು. ಭಾನುವಾರ ಮಾತನಾಡಿದ ಅವರು, "ಕುಮಾರಸ್ವಾಮಿ ಅವರ ಆರೋಪಗಳಿಗೆ ಸಮಯ ಬಂದಾಗ ನಾನು ಉತ್ತರ ನೀಡುತ್ತೇನೆ, ನನಗೂ ಅವರ ಬಗ್ಗೆ ಗೊತ್ತಿದೆ" ಎಂದು ಹೇಳಿದ್ದರು.
"ಅವರ ವಿರುದ್ಧ, ಅವರ ತಂದೆ ವಿರುದ್ಧ ನಾನು ಸ್ಪರ್ಧಿಸಿದ್ದೇನೆ. ಅವರ ಪತ್ನಿ ವಿರುದ್ಧ ನನ್ನ ತಮ್ಮ ಸ್ಪರ್ಧಿಸಿದ್ದಾರೆ. ಕಾದು ನೋಡಿ, ಈಗ ನಾನು ಈ ವಿಷಯದಲ್ಲಿ ಹೆಚ್ಚು ಚರ್ಚೆ ಮಾಡುವುದಿಲ್ಲ" ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದರು.
ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದ ಎಚ್. ಡಿ. ಕುಮಾರಸ್ವಾಮಿ, "ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಿಗೆ ವರ್ಗಾವಣೆ ದಂಧೆಯಲ್ಲಿ 1 ಸಾವಿರ ಕೋಟಿ ವ್ಯವಹಾರ ನಡೆಸಿದೆ. ಹಣ ಪಡೆದು ಸ್ಥಳ ನಿಯೋಜನೆ ಮಾಡುವ ಕುರಿತು ಅಧಿಕಾರಿಗಳೇ ಮಾತನಾಡುತ್ತಿದ್ದಾರೆ. ಪೆನ್ಡ್ರೈವ್ ಸೇರಿದಂತೆ ಅಗತ್ಯ ಸಾಕ್ಷಿ ಒದಗಿಸಲು ನಾನು ಸಿದ್ಧ. ತನಿಖೆ ನಡೆಸಿ ಬಹಿರಂಗ ಪಡಿಸಲು ಸರ್ಕಾರಕ್ಕೆ ಧಮ್, ತಾಕತ್ ಇದೆಯೇ? ಎಂದು ಪ್ರಶ್ನೆ ಮಾಡಿದ್ದರು.
"ಅಂದು ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಕೆಂಪಣ್ಣ ಈಗ ಎಲ್ಲಿದ್ದಾರೆ?. ಈಗ ಗುತ್ತಿಗೆದಾರರಿಂದ ಎಷ್ಟು ಪರ್ಸೆಂಟ್ಗೆ ಬೇಡಿಕೆ ಇದೆ ಎಂದು ಅವರೇ ಹೇಳಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಹಿಂದೆ ನಡೆದಿರುವ 710 ಕೋಟಿ ಕಾಮಗಾರಿಗಳಿಗೆ ಎಲ್ಒಸಿ ನೀಡಲು ಶೇ 15ರಷ್ಟು ಕಮಿಷನ್ ಕೇಳುತ್ತಿದ್ದಾರೆ" ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದರು.












Click it and Unblock the Notifications