ಮಹಿಳಾ ಕಾಂಗ್ರೆಸ್ನಲ್ಲಿ ಭಿನ್ನಮತ, ಸಿದ್ದರಾಮಯ್ಯಗೆ ದೂರು
ಬೆಂಗಳೂರು, ಅಕ್ಟೋಬರ್ 27; ಕರ್ನಾಟಕ ಮಹಿಳಾ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಅಧ್ಯಕ್ಷೆ ಪುಷ್ಪಾ ಅಮರನಾಥ್ ವಿರುದ್ಧ ಸದಸ್ಯರು ಪ್ರತಿಭಟನೆ ನಡೆಸಿದ್ದು, ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗುರುವಾರ ಪುಷ್ಪಾ ಅಮರನಾಥ್ ವಿರುದ್ಧ ಪೋಸ್ಟರ್ ಹಿಡಿದು ಸದಸ್ಯರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದರು. ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಪ್ರಮಾಣಿಕರಿಗೆ ಅವಕಾಶ ನೀಡಿ ಎಂದು ಆಗ್ರಹಿಸಿದರು.
ಕೆಲವು ದಿನಗಳ ಹಿಂದೆ ಪುಷ್ಪಾ ಅಮರನಾಥ್ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಬದಲಾವಣೆ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತಿಗೆ ಸಹ ಮನ್ನಣೆ ನೀಡಿಲ್ಲ ಎಂದು ಮಹಿಳಾ ಸದಸ್ಯರು ಆರೋಪ ಮಾಡಿದರು.

50ಕ್ಕೂ ಹೆಚ್ಚು ಸದಸ್ಯರು ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದರು. ಕಾರ್ಯಕ್ರಮವೊಂದಕ್ಕೆ ಹೊರಟಿದ್ದ ಸಿದ್ದರಾಮಯ್ಯ, "ಎಲ್ಲಾ ಮಹಿಳೆಯರಿಗೂ ನಮಸ್ಕಾರ. ಈ ಕುರಿತು ಈಗಲೇ ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತುಕತೆ ನಡೆಸುತ್ತೇನೆ" ಎಂದು ಹೇಳಿ ಹೊರಟರು.
11 ಅಧ್ಯಕ್ಷರ ಬದಲಾವಣೆ; ಪುಷ್ಪಾ ಅಮರನಾಥ್ 20 ದಿನಗಳ ಹಿಂದೆ 11 ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾವಣೆ ಮಾಡಿದ್ದರು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಇರುವುದರಿಂದ ಅಧ್ಯಕ್ಷರ ಬದಲಾವಣೆ ಬೇಡ ಎಂದು ಮನವಿ ಮಾಡಲಾಗಿತ್ತು.
ಮಹಿಳಾ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರು ಸಹ ಈ ಕುರಿತು ಪುಷ್ಪಾ ಅಮರನಾಥ್ಗೆ ಕರೆ ಮಾಡಿ ಸೂಚನೆ ನೀಡಿದ್ದರು. ಆದರೆ ಯಾವ ನಾಯಕರ ಸೂಚನೆಗೂ ಮನ್ನಣೆ ನೀಡದೆ ಅಧ್ಯಕ್ಷರ ಬದಲಾವಣೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ.
ಪುಷ್ಪಾ ಅಮರನಾಥ್ ಕರ್ನಾಟಕ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷರಾಗಿ ಮೂರು ವರ್ಷ ಕಳೆದಿದೆ. ಅವರ ಅಧಿಕಾರಾವಧಿ ಫೆಬ್ರವರಿಯಲ್ಲಿಯೇ ಕೊನೆಗೊಂಡಿದೆ. ಆದ್ದರಿಂದ ಅವರನ್ನು ಬದಲಾವಣೆ ಮಾಡಿ ಬೇರೆಯವರಿಗೆ ಅವಕಾಶ ನೀಡಿ ಎಂದು ಸಿದ್ದರಾಮಯ್ಯಗೆ ಮಹಿಳಾ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಚುನಾವಣೆ ಮುಗಿಯುವ ತನಕ ಯಾವ ಜಿಲ್ಲೆಯ ಅಧ್ಯಕ್ಷರನ್ನು ಬದಲಾವಣೆ ಮಾಡಬಾರದು ಎಂದು ಸೂಚನೆ ನೀಡಿದ್ದರು. ಆದರೆ ಪುಷ್ಪಾ ಅಮರನಾಥ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಸದಸ್ಯರು ದೂರಿದ್ದಾರೆ.
ಡಿಕೆಶಿ ದೆಹಲಿಯಲ್ಲಿ; ಮಹಿಳಾ ಕಾಂಗ್ರೆಸ್ನಲ್ಲಿನ ಅಸಮಾಧಾನ ಕಾಂಗ್ರೆಸ್ ನಾಯಕರ ತಲೆನೋವಿಗೆ ಕಾರಣವಾಗಿದೆ. ಪುಷ್ಪಾ ಅಮರನಾಥ್ ಬದಲಾವಣೆ ಮಾಡಿದರೆ ಮಹಿಳಾ ಕಾಂಗ್ರೆಸ್ನ ಮುಂದಿನ ಅಧ್ಯಕ್ಷರು ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುರುವಾರ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭವನ್ನು ಉದ್ಘಾಟಿಸಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹೋದವರು ದೆಹಲಿಯಲ್ಲಿಯೇ ಉಳಿದಿದ್ದಾರೆ. ಗುರುವಾರ ಬೆಳಗ್ಗೆ ಸಹೋದರ ಡಿ. ಕೆ. ಸುರೇಶ್ ಜೊತೆ ಅವರು ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿದ್ದರು.
ಪುಷ್ಪಾ ಅಮರನಾಥ್ ಪರಿಚಯ; 19 : 2018ರ ನವೆಂಬರ್ನಲ್ಲಿ ಬಿ. ಪುಷ್ಪಾ ಅಮರನಾಥ್ ಕರ್ನಾಟಕ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಇದಕ್ಕೂ ಮೊದಲು ಲಕ್ಷ್ಮೀ ಹೆಬ್ಬಾಳ್ಕರ್ ಅಧ್ಯಕ್ಷರಾಗಿದ್ದರು.
ಮೈಸೂರು ಜಿಲ್ಲಾ ರಾಜಕೀಯದಲ್ಲಿ ಸಕ್ರಿಯರಾಗಿರುವ ಬಿ. ಪುಷ್ಪಾ ಅಮರನಾಥ್ ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಬೆಂಬಲಿಗರು.
2011ರಲ್ಲಿ ಹುಣಸೂರಿನ ಧರ್ಮಾಪುರಿ ಕ್ಷೇತ್ರದಿಂದ, 2016ರ ಚುನಾವಣೆಯಲ್ಲಿ ಬನ್ನಿಕುಪ್ಪೆ ಕ್ಷೇತ್ರದಿಂದ ಬಿ. ಪುಷ್ಪಾ ಅಮರನಾಥ್ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡರು. 2018ರಲ್ಲಿ ಎಐಸಿಸಿ ಸದಸ್ಯರಾದರು. ಪುಷ್ಪಾ ಅಮರನಾಥ್ ಭಾವ ಎಚ್. ಪಿ. ಮಂಜುನಾಥ್ ಹುಣಸೂರು ಕ್ಷೇತ್ರದ ಕಾಂಗ್ರೆಸ್ ಶಾಸಕರು.












Click it and Unblock the Notifications