ವಿಧಾನಸಭಾ ಚುನಾವಣೆಯಲ್ಲಿ ಸೋಲು: ಒಳ ಮೀಸಲಾತಿ ಗೋಜಿಗೆ ಹೋಗಬಾರದಿತ್ತು: ಮಾಧುಸ್ವಾಮಿ ಪಶ್ಚಾತಾಪ
ತುಮಕೂರು, ಫೆಬ್ರವರಿ 06: ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಮಾಜಿ ಸಚಿವ ಮಾಧು ಸ್ವಾಮಿ ಸೋಲು ಅನುಭವಿಸಿದ್ರು. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ತುಮಕೂರು ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾಗಿದ್ದು, ಪಶ್ಚಾತಾಪ ಮಾತುಗಳನ್ನ ಆಡಿದ್ದಾರೆ.
ಹೌದು, ತುಮಕೂರು ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾಧುಸ್ವಾಮಿ ಮಾತನಾಡಿ, ನಾನು ಅಂದು ಒಳ ಮೀಸಲಾತಿ ಗೋಜಿಗೆ ಹೋಗಬಾರದಿತ್ತು. ಈ ಬಗ್ಗೆ ನನಗೆ ಹಲವು ಬಾರಿ ಅಂದುಕೊಂಡಿದ್ದೇನೆ ಎಂದು ಜೆ.ಸಿ ಮಾಧುಸ್ವಾಮಿ ಪಶ್ಚಾತಾಪ ವ್ಯಕ್ತಪಡಿಸಿದರು.

ಈ ಒಳ ಮೀಸಲಾತಿ ವಿಷಯ ನನಗೆ ಬೇಡ. ಏಕೆ ಸುಮ್ಮನೆ ನನ್ನನ್ನು ಎಳೆದು ತರ್ತೀರಾ..? ಎಂದು ಕ್ಯಾಬಿನೇಟ್ ನಲ್ಲಿ ಹೇಳಿದ್ದೆ. ನಾವು ಒಳ್ಳೆಯದನ್ನೇ ಮಾಡಿದ್ದೇವೆ. ಆದರೆ ವ್ಯವಸ್ಥೆ ನಮ್ಮನ್ನು ಸಹಿಸಿಕೊಳ್ಳಲಿಲ್ಲ. ಎಲ್ಲೋ ಒಂದು ಕಡೆ ನಾವು ಎಡಿದಿದ್ದೇವೆ ಎಂದು ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದ್ದರು.
ಸಂಘಟಿತರಾದ ಮೇಲೆ ಹೋರಾಟಕ್ಕೆ ಇಳಿತೇವೆ. ಚರಿತ್ರೆ ನಿರ್ಮಾಣ ಮಾಡೋದು ಹೀರೋಗಳಲ್ಲ. ಪಿತ್ತೂರಿ ಮಾಡೋರು, ಮೀರ್ ಸಾದಿಕ್ ಗಳಂತಹ ಅವರು ಚರಿತ್ರೆ ನಿರ್ಮಾಣ ಮಾಡುತ್ತಾರೆ ಎಂದು ಹೇಳುವ ಮೂಲಕ ಪಕ್ಷದೊಳಗಿನ ತಮ್ಮ ವಿರೋಧಿಗಳಿಗೆ ಟಾಂಗ್ ಕೊಟ್ಟರು.
ಕಾರ್ಯಕರ್ತರಾಗಿ ನಾವೆಲ್ಲ ಒಂದೇನೆ. ಅಧಿಕಾರ ಬರೋವರೆಗೂ ಒಂದೇ ಆಗಿರುತ್ತವೆ. ಈ ಕ್ಷೇತ್ರ ಗೆಲ್ಲಲು ಏನು ಮಾಡಬೇಕೋ ಮಾಡುತ್ತೇವೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಯಾವತ್ತೂ ದೊಡ್ಡ ಮಾರ್ಜೀನ್ನಲ್ಲಿ ಗೆಲ್ಲಲಿಲ್ಲ. ಕಳೆದ ಬಾರಿ ಮೈತ್ರಿ ಅಭ್ಯರ್ಥಿ ದೇವೇಗೌಡರು ಅಭ್ಯರ್ಥಿ ಆಗ್ತಾರೆ. ಅಂದ ತಕ್ಷಣ ಏನಪ್ಪಾ ಏನು ಮಾಡಬೇಕು ಎಂಬ ಚಿಂತೆ ಶುರುವಾಯಿತು. ಇಲ್ಲ ಸ್ಥಳೀಯವಾಗಿ ತಮ್ಮ ಅಭ್ಯರ್ಥಿಯನ್ನ ಉಳಿಸಿಕೊಳ್ಳಬೇಕು ಎಂದು ಪಕ್ಷ ಬೇಡ ಮರೆತು ಒಟ್ಟಾಗಿ ದೇವೇಗೌಡರನ್ನು ಸೋಲಿಸಿದರು ಎಂದರು.
ಜೆಡಿಎಸ್-ಬಿಜೆಪಿ ಮೈತ್ರಿ ಎಷ್ಟು ಒಳ್ಳೆಯದೋ, ಕೆಟ್ಟದ್ದು ಗೊತ್ತಿಲ್ಲ. ಜೆಡಿಎಸ್ ನವರು ಬಂದರೆ ಅಷ್ಟೂ ಮತ ಬರುತ್ತದೆ, ಇಷ್ಟು ಮತ ಬರುತ್ತದೆ ಎಂದು ಲೆಕ್ಕಾಚಾರದ ಚುನಾವಣೆ ಮಾಡಬಾರದು. ನಾವು ನಮ್ಮ ಸ್ವಂತ ಧೈರ್ಯದ ಮೇಲೆ ಚುನಾವಣೆ ಮಾಡಬೇಕು. ಸ್ವಂತ ಶಕ್ತಿಯೊಂದಿಗೆ ಚುನಾವಣೆ ಮಾಡಬೇಕು. ಮೋದಿ ಅವರೇ ಗೆಲುವಿನ ರೂವಾರಿ ಎಂದು ಜನರಿಗೆ ರೀಚ್ ಮಾಡಬೇಕು. ಮೋದಿ ಗೆದ್ದರೆ ಮಾತ್ರ ಈ ದೇಶಕ್ಕೆ ಭವಿಷ್ಯ ಎಂದರು.
ರಾಮಮಂದಿರ ಉದ್ಘಾಟನೆ ವೇಳೆ ಊರಿನವರೆಲ್ಲ ಶ್ರೀರಾಮನ ಮೆರವಣಿಗೆ ಮಾಡಲು ಸಿದ್ದರಿದ್ದರು. ಆದ್ರೆ, ಸರ್ಕಾರ ಬಿಟ್ಟಿಲ್ಲ. ರಾಮಮಂದಿರ ಉದ್ಘಾಟನೆ ವೇಳೆ ಊರುಗಳಲ್ಲಿ ಶ್ರೀರಾಮನ ಮೆರವಣಿಗೆ ಮಾಡಲು ಸರ್ಕಾರ ಬಿಟ್ಟಿಲ್ಲ. ಏಕೆ ಈ ಸರ್ಕಾರ ಇಷ್ಟೊಂದು ನಿರ್ಬಂಧ ಹಾಕಿತ್ತು ಎಂದು ಪ್ರಶ್ನಿಸಿದ ಅವರು, ನಾವು ಪ್ರಚಾರದಲ್ಲಿ ಬಹಳ ಹಿಂದೆ ಇದ್ದೇವೆ ನಮ್ಮ ನಮ್ಮಲ್ಲಿ ವೈಮನಸ್ಸು ಇದೆ. ಹಾಗಾಗಿ ನಾವು ಸೋಲುತ್ತಿದ್ದೇವೆ. ನಿಷ್ಠೆ, ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ ಎಂದು ಹೇಳುವ ಮೂಲಕ ಪಕ್ಷದೊಳಗಿನ ಸ್ಥಿತಿ ಕಂಡು ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯಗೆ ಸುಳ್ಳನ್ನು ಸತ್ಯವಾಗಿ ಬಿಂಬಿಸುವ ಕಲೆ ಬಹಳವಾಗಿ ಕರಗತವಾಗಿದೆ. 40% ಎಂದು ಸುಳ್ಳು ಪ್ರಚಾರ ಮಾಡಿ ಸತ್ಯ ಎಂದು ಜನರಿಗೆ ನಂಬಿಸಿದರು. 40 ಪರ್ಸೆಂಟ್ ಕೊಟ್ಟವರು ಇಲ್ಲ. ಇಸ್ಕೊಂಡವರು ಇಲ್ಲ. ನಮ್ಮವರಿಗೆ, ನಮ್ಮ ಪಕ್ಷದವರಿಗೆ ಟೀಕೆ ಮಾಡಲು ಧಮ್ ಇಲ್ಲ. ನಮ್ಮ ನಮ್ಮವರಿಗೆ ಬೇಕಾದರೆ ಟೀಕೆ ಮಾಡುತ್ತಾರೆ ಎಂದು ಮಾಧುಸ್ವಾಮಿ ಗುಡುಗಿದರು.












Click it and Unblock the Notifications