ಮಧು ಬಂಗಾರಪ್ಪಗೆ ಸಚಿವ ಸ್ಥಾನ : ಓದುಗರ ಅಭಿಪ್ರಾಯವೇನು?
ಬೆಂಗಳೂರು, ನವೆಂಬರ್ 07 : ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟವನ್ನು ಸೇರಲಿದ್ದಾರೆ?. ಹೌದು, ಈ ವಿಚಾರದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಕುಮಾರಸ್ವಾಮಿ ಸಂಪುಟದಲ್ಲಿ ಜೆಡಿಎಸ್ ಪಕ್ಷದ 2 ಸಚಿವ ಸ್ಥಾನಗಳು ಖಾಲಿ ಇವೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರು ಸೋಲು ಅನುಭವಿಸಿದ್ದಾರೆ. ಆದರೆ, ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಿಸುವ ಮೂಲಕ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬುದು ಸದ್ಯದ ಸುದ್ದಿ.
2019ರ ಲೋಕಸಭಾ ಚುನಾವಣೆಗೂ ಶಿವಮೊಗ್ಗ ಕ್ಷೇತ್ರಕ್ಕೆ ಮಧು ಬಂಗಾರಪ್ಪ ಅವರು ಜೆಡಿಎಸ್ ಅಭ್ಯರ್ಥಿ? ಎಂಬುದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನಿಲುವು. ಆದ್ದರಿಂದ, ಅವರಿಗೆ ಸಚಿವ ಸ್ಥಾನ ನೀಡಿ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಚರ್ಚೆ ನಡೆಯುತ್ತಿದೆ.
ಮಧು ಬಂಗಾರಪ್ಪ ಅವರರಂತಹ ಉತ್ಸಾಹಿ ಯುವಕರಿಗೆ ಸಂಪುಟದಲ್ಲಿ ಸ್ಥಾನ ನೀಡಿ ಎಂದು ಒನ್ ಇಂಡಿಯಾ ಕನ್ನಡದ ಓದುಗರು ಸಹ ಆಗ್ರಹಿಸಿದ್ದಾರೆ. ಓದುಗರು ನೀಡಿದ ಅಭಿಪ್ರಾಯಗಳು ಇಲ್ಲಿವೆ ನೋಡಿ.....

ಜೆಡಿಎಸ್ ನಾಯಕರಿಂದ ಕರೆ
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮಧು ಬಂಗಾರಪ್ಪ ಅವರಿಗೆ ಕರೆ ಮಾಡಿ, 52,148 ಮತಗಳ ಸೋಲು ಏನೂ ಅಲ್ಲ ಎಂದು ಹೇಳಿದ್ದು, ಪ್ರಬಲ ಪೈಪೋಟಿ ನೀಡಿರುವುದಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ಕರೆ ಮಾಡಿ, ಸೋಲಿನ ಬಗ್ಗೆ ಧೃತಿಗೆಡಬೇಡಿ ಪಕ್ಷ ನಿಮ್ಮ ಜೊತೆ ಇರುತ್ತದೆ. ನಿಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ.

ಕಡಿಮೆ ಅಂತರದ ಸೋಲು
ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರು ಸೋಲು ಅನುಭವಿಸಿರಬಹುದು. ಆದರೆ, 4,91,158 ಮತಗಳನ್ನು ಪಡೆದಿದ್ದಾರೆ. ಈ ಮತಗಳನ್ನು ಹಾಗೆಯೇ ಉಳಿಸಿಕೊಂಡು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿ ಹಾಕುವುದು ದೇವೇಗೌಡರ ತಂತ್ರ. ಅದಕ್ಕಾಗಿ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನವನ್ನು ನೀಡಿ ಅವರನ್ನು ಮತ್ತಷ್ಟು ಪ್ರಬಲ ನಾಯಕರಾಗಿ ಬೆಳೆಸಲಾಗುತ್ತದೆ.

ನಮ್ಮ ಓದುಗರ ಅಭಿಪ್ರಾಯ
ಜಿ.ಟಿ.ವೆಂಕಟರಮಣಪ್ಪ ಎಂಬುವವರು ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡುವುದು ಉತ್ತಮ ನಿರ್ಧಾರ. ಅವರಿಗೆ ಸಚಿವ ಸ್ಥಾನ ನೀಡುವುದರಲ್ಲಿ ಅರ್ಥವಿದೆ. ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೇಟ್ಲಿ ಸೋತುಮಂತ್ರಿ ಆಗಿಲ್ಲವೇ?, ಸ್ಮೃತಿ ಇರಾನಿ ಅವರು ಮಂತ್ರಿ ಆಗಿಲ್ಲವೇ?, ಮಧು ಬಂಗಾರಪ್ಪ ಅಷ್ಟೊಂದು ಮತ ತೆಗೆದುಕೊಂಡಿದ್ದು ಗ್ರೇಟ್ ಎಂದು ಓದುಗರು ಹೇಳಿದ್ದಾರೆ.

ಒಳ್ಳೆಯ ನಿರ್ಧಾರ
ರವಿ ಕುಮಾರ್ ಎನ್ನುವವರು ಒಳ್ಳೆಯ ನಿರ್ಧಾರ. ಈ ರೀತಿಯಲ್ಲಾದರೂ ಅವರಿಗೆ ಹೆಚ್ಚಿನ ಸ್ಥಾನಮಾನ ನೀಡಿ ಗೌರವಿಸಿ ಬಂಗಾರಪ್ಪ ಹೆಸರು ಉಳಿಸಿ ಎಂದು ಹೇಳಿದ್ದಾರೆ.
37 ಸೀಟ್ ಪಡೆದವರೇ ಮುಖ್ಯಮಂತ್ರಿಯಾಗಿದ್ದಾರೆ. ಸೋತ ವ್ಯಕ್ತಿಯನ್ನು ಮಂತ್ರಿ ಮಾಡುವುದು ಅವರಿಗೆ ಏನೂ ಕಷ್ಟವಲ್ಲ ಎಂದು ಓದುಗರು ಅಭಿಪ್ರಾಯಪಟ್ಟಿದ್ದಾರೆ.

ಅನಿತಾ ಕುಮಾರಸ್ವಾಮಿಗೆ ಮಂತ್ರಿಯಾಗಲಿ
ಬಿ.ಆರ್.ವೆಂಕಟೇಶ್ ಎಂಬುವವರು ರಾಮನಗರದಲ್ಲಿ ಗೆದ್ದ ಅನಿತಾ ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಮಧು ಬಂಗಾರಪ್ಪ ಅವರಿಗೆ ಬೇಡ ಎಂದು ಹೇಳಿದ್ದಾರೆ.
ಚಂದ್ರಶೇಖರ್ ಎಂಬ ಓದುಗರು ಮಧು ಬಂಗಾರಪ್ಪ ಅವರನ್ನು ಮಂತ್ರಿ ಮಾಡುವುದು ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ.












Click it and Unblock the Notifications