ಮಡೆಸ್ನಾನ ನಮ್ಮ ಹಕ್ಕು, ಅದಕ್ಕೆ ಅಡ್ಡ ಬರಬೇಡಿ
ಬೆಂಗಳೂರು, ಸೆಪ್ಟೆಂಬರ್ 16: ಮಡೆಸ್ನಾನಕ್ಕೆ ಕೊನೆ ಹೇಳಬೇಕು ಅಂತ ಸುಪ್ರೀಂ ಕೋರ್ಟ್ ಪ್ರಯತ್ನಿಸುತ್ತಿದ್ದರೆ, ಹಿಂದುಳಿದ ವರ್ಗಗಳ ಕೆಲವು ಸದಸ್ಯರು ಇದನ್ನು ಮುಂದುವರಿಸುತ್ತೇವೆ ಎನ್ನುತ್ತಿದ್ದಾರೆ. ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ.ಭಾಸ್ಕರ ಬೆಂಡೋಡಿ ಕಳೆದ ವರ್ಷ ರಾಷ್ಟ್ರಪತಿಗಳಿಗೆ ಪತ್ರ ಬರೆದು, ಈ ಪದ್ಧತಿ ಮುಂದುವರಿಸಿಕೊಂಡು ಹೋಗಲು ಅನುಮತಿ ಕೋರಿದ್ದರು ಎಂದು ವರದಿಯಾಗಿತ್ತು.
ಜಾತಿ-ಮತ ಅಂತ ನೋಡದೆ ಭಕ್ತರು ಸ್ವಯಂಪ್ರೇರಿತರಾಗಿ ಈ ಪದ್ಧತಿ ಅನುಸರಿಸುತ್ತಾರೆ ಎಂದು ಅವರು ಹೇಳಿದ್ದಾರೆ. ಈಚೆಗಷ್ಟೆ ಕೇಂದ್ರ ಸರ್ಕಾರವು ಮಡೆಸ್ನಾನವನ್ನು "ಅಮಾನವೀಯ ಹಾಗೂ ಮೂಢನಂಬಿಕೆ", ಅದನ್ನು ನಿಷೇಧಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿತ್ತು. ಮಡೆಸ್ನಾನ ಮನುಷ್ಯರ ಗೌರವಕ್ಕೆ ಚ್ಯುತಿ ತರುವಂಥದ್ದು, ಆರೋಗ್ಯಕ್ಕೂ ಹಾನಿಕರ ಎಂದು ಹೇಳಿತ್ತು.[ಕುಕ್ಕೆಯಲ್ಲಿ ಮಡೆಸ್ನಾನ, ಮಂಗಳೂರಲ್ಲಿ ಪ್ರತಿಭಟನೆ]

ಬ್ರಾಹ್ಮಣರು ಊಟ ಮಾಡಿದ ನಂತರ ಎಂಜಲಿನ ಬಾಳೆ ಎಲೆ ಮೇಲೆ ಉರುಳಿದರೆ ಚರ್ಮ ಕಾಯಿಲೆಗಳು ಗುಣವಾಗುತ್ತದೆ, ಮದುವೆ ವಿಳಂಬ, ಮಕ್ಕಳಾಗದಿರುವ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂಬ ನಂಬಿಕೆ ಇದೆ. ಇದನ್ನು ಮಡೆಸ್ನಾನ ಅಂತ ಕರೆಯುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಹೊರಭಾಗದಲ್ಲಿ ನವೆಂಬರ್ -ಡಿಸೆಂಬರ್ ನಲ್ಲಿ ಮೂರು ದಿನಗಳ ವಾರ್ಷಿಕ ಆಚರಣೆ ಸಂದರ್ಭದಲ್ಲಿ ಮಡೆಸ್ನಾನ ನಡೆಯುತ್ತದೆ. ಇದು ತಮಿಳುನಾಡಿನ ಕೆಲವು ಭಾಗದಲ್ಲೂ ಈ ಪದ್ಧತಿ ಆಚರಣೆ ಮಾಡುತ್ತಾರೆ. ಸಾವಿರಾರು ವರ್ಷಗಳಿಂದ ಬುಡಕಟ್ಟು ಜನಾಂಗದವರು ಇದನ್ನು ಮಾಡಿಕೊಂಡು ಬರುತ್ತಿದ್ದಾರೆ.[ಮಡೆಸ್ನಾನ ಪದ್ಧತಿಗೆ ಅಂತಿಮ ಮೊಳೆ ಹೊಡೆದ ಕೇಂದ್ರ ಸರಕಾರ]

ಆದಿವಾಸಿ ಬುಡಕಟ್ಟು ಸಮಾಜದವರ ಸಾಂವಿಧಾನಿಕ ಹಕ್ಕು ಇದು. ನಾಗದೇವರ ಪೂಜೆಯ ಭಾಗವಾಗಿ ಕೆಲವು ಸಾಂಪ್ರದಾಯಿಕ ಪೂಜೆಗಳು ಇವೆ. ಅದರ ಭಾಗವಾಗಿ ಮಡೆಸ್ನಾನ ಆಚರಣೆ ಇದೆ. ಆದ್ದರಿಂದ ಇದಕ್ಕೆ ಅವಕಾಶ ನೀಡಬೇಕು ಅಂತ ಕೇಳ್ತಿದೀವಿ ಎನ್ನುತ್ತಾರೆ ಬೆಂಡೋಡಿ. 2012ರಲ್ಲಿ ಕರ್ನಾಟಕ ಹೈಕೋರ್ಟ್ ಮಡೆಸ್ನಾನದ ಬದಲು ಎಡೆಸ್ನಾನ ಮಾಡಬಹುದು ಎಂದು ತೀರ್ಪು ನೀಡಿತ್ತು. ಆ ನಂತರ ತೀರ್ಪು ಮರುಪರಿಶೀಲಿಸುವಂತೆ ಬೆಂಡೋಡಿ 2014ರಲ್ಲಿ ಅರ್ಜಿ ಸಲ್ಲಿಸಿದ್ದರು.
ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯದ ಪ್ರಕಾರ ಯಾವುದೇ ಆಚರಣೆ ವಿರುದ್ಧ ನಿಷೇಧ ಹೇರುವುದಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡವಿಟ್ ನಲ್ಲಿ ತಿಳಿಸಿತ್ತು. ಕರ್ನಾಟಕ ಹೈಕೋರ್ಟ್ ಸಣ್ಣ ಮಾರ್ಪಾಡಿನೊಂದಿಗೆ ಆಚರಣೆಗೆ ಅವಕಾಶ ನೀಡಿತ್ತು. ಮಡೆಸ್ನಾನ ದೇವಸ್ಥಾನದ ಆಚೆ ನಡೆಯುವುದರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತಮಂಡಳಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು.











Click it and Unblock the Notifications