ಗುಂಪು ಹತ್ಯೆ, ಗುಂಪು ಗಲಭೆ ಸಂತ್ರಸ್ಥರಿಗೆ ಪರಿಹಾರ, ಸರ್ಕಾರದ ಆದೇಶ
ಬೆಂಗಳೂರು, ಸೆಪ್ಟೆಂಬರ್ 28; ಕರ್ನಾಟಕ ಸರ್ಕಾರ ಗುಂಪು ಹತ್ಯೆ/ ಗುಂಪು ಗಲಭೆ ಸಂತ್ರಸ್ಥರಿಗೆ ಪರಿಹಾರ (Lynching/ Mob violence Victim Compensation Scheme) ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಆದೇಶ ಹೊರಡಿಸಿದೆ. ಎಷ್ಟು ಪರಿಹಾರ ನೀಡಲಾಗುತ್ತದೆ? ಎಂದು ಸಹ ಆದೇಶ ತಿಳಿಸಿದೆ.
ವಿಶೇಷ ರಾಜ್ಯಪತ್ರದಲ್ಲಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹಸರಿನಲ್ಲಿ ಬಾಣದರಂಗಯ್ಯ ಎನ್. ಆರ್. ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ) ಒಳಾಡಳಿತ ಇಲಾಖೆ (ಕಾನೂನು & ಸುವ್ಯವಸ್ಥೆ) ಈ ಕುರಿತು ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಅಧಿಸೂಚನೆ ದಿನಾಂಕ 22/2/2012, ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ ದಿನಾಂಕ 17/7/2018ರಂದು ನೀಡಿರುವ ಆದೇಶ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿ ದಿನಾಂಕ 28/8/2023 ಉಲ್ಲೇಖಿಸಿ ಆದೇಶಿಸಲಾಗಿದೆ.
ಆದೇಶದ ವಿವರಗಳು; ಅಪರಾಧ ದಂಡ ಪ್ರಕ್ರಿಯೆ ಸಂಹಿತೆ, 1973ರ ಕಲಂ 357 A ರಲ್ಲಿನ ಉಪಬಂಧಗಳನ್ವಯ ಅಪರಾಧ ಕೃತ್ಯಗಳಿಂದ ಬಾಧಿತರಾದ ಸಂತ್ರಸ್ತರಿಗೆ ಅಥವಾ ಅವಲಂಬಿತರಿಗೆ ನಷ್ಟ ಅಥವಾ ನಷ್ಟ ಅನುಭವಿಸಿದವರಿಗೆ ಪರಿಹಾರದ ಉದ್ದೇಶಕ್ಕಾಗಿ ಪರಿಹಾರವನ್ನು ಒದಗಿಸಲು ರಾಜ್ಯ ಸರ್ಕಾರವು ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011 (Karnataka Victim Compensation Scheme, 2011) ರಚಿಸಲಾಗಿರುತ್ತದೆ ಎಂದು ಹೇಳಿದೆ.
ಸರ್ವೋಚ್ಚ ನ್ಯಾಯಾಲಯವು ಗುಂಪು ಹತ್ಯೆ/ ಗುಂಪು ಗಲಭೆಗಳಲ್ಲಿ ಸಂತ್ರಸ್ತರಾದವರಿಗೆ ಎಲ್ಲಾ ರಾಜ್ಯ ಸರ್ಕಾರಗಳು ಅಪರಾಧ ದಂಡ ಪ್ರಕ್ರಿಯೆ ಸಂಹಿತೆ, 1973ರ ಕಲಂ 357 A ರನ್ವಯ ಸಂತ್ರಸ್ತ ಪರಿಹಾರ ಯೋಜನೆಯನ್ನು ರೂಪಿಸುವಂತೆ ನಿರ್ದೇಶಿಸಿರುತ್ತದೆ. ಈಗಾಗಲೇ ರಾಜ್ಯ ಸರ್ಕಾರವು ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011(Karnataka Victim Compensation Scheme, 2011) ರಚಿಸಲಾಗಿದ್ದರೂ, ಗುಂಪು ಹತ್ಯೆ/ ಗುಂಪು ಗಲಭೆಗಳಲ್ಲಿ ಸಂತ್ರಸ್ತರಾದವರಿಗೆ/ ಅವಲಂಬಿತರಿಗೆ ಪರಿಹಾರ ನೀಡಲು ಪ್ರತ್ಯೇಕ ಆದೇಶ ಹೊರಡಿಸಬೇಕಾದ ಅಗತ್ಯತೆ ಇದೆ ಎಂಬುದಾಗಿ ಅಭಿಪ್ರಾಯಪಡಲಾಗಿರುತ್ತದೆ.
ಆದ್ದರಿಂದ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011(Karnataka Victim Compensation Scheme, 2011) ಅಡಿಯಲ್ಲಿ ಗುಂಪು ಹತ್ಯೆ/ ಗುಂಪು ಗಲಭೆಗಳಲ್ಲಿ ಸಂತ್ರಸ್ತರಾದವರು/ ಅವಲಂಬಿತರು ಪರಿಹಾರ ಕೋರಬಹುದಾದ ಅವಕಾಶಗಳು ಸ್ಪಷ್ಟವಾಗಿ ಒಳಗೊಳ್ಳದೇ ಇರುವುದರಿಂದ ಹಾಗೂ ಘನ ಸರ್ವೋಚ್ಚ ನ್ಯಾಯಾಲಯವು ತೀರ್ಪಿನಲ್ಲಿ ಗುಂಪು ಹತ್ಯೆ/ ಗುಂಪು ಗಲಭೆಗಳಲ್ಲಿ ಸಂತ್ರಸ್ತರಾದವರಿಗೆ/ ಅವಲಂಬಿತರಿಗೆ ಪರಿಹಾರ ನೀಡಲು ಯೋಜನೆಯನ್ನು ರೂಪಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿರುವುದರಿಂದ, ಈ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸುವುದು ಸೂಕ್ತವೆಂದು ಸರ್ಕಾರವು ನಿರ್ಣಯಿಸಿದೆ.
ಈ ಆದೇಶ ಹೊರಡಿಸಿದೆ ಎಂದು ಹೇಳಿದೆ.
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ರಾಜ್ಯದಲ್ಲಿ ಸಂಭವಿಸುವ ಗುಂಪು ಹತ್ಯೆ/ ಗುಂಪು ಗಲಭೆಗಳಲ್ಲಿ (Lynching/Mob violence Victims) ಸಂತ್ರಸ್ತರಾದವರಿಗೆ ಹಾಗೂ ಅವರ ಅವಲಂಬಿತರಿಗೆ ಪರಿಹಾರ ನೀಡಲು ಸಂತ್ರಸ್ತ ಪರಿಹಾರ ಯೋಜನೆ (Victim Compensation Scheme) ಕಾರ್ಯಗತಗೊಳಿಸಿ ಆದೇಶಿಸಿದೆ.
ಎಷ್ಟು ಪರಿಹಾರ?; ಪ್ರಾಣ ಹಾನಿ ಅನ್ವಯಿಸುವ ಕನಿಷ್ಠ ಪರಿಹಾರದ ಮೊತ್ತ 5 ಲಕ್ಷ ರೂ.ಗಳಲ್ಲಿ. ಅನ್ವಯಿಸುವ ಗರಿಷ್ಠ ಪರಿಹಾರ ಮೊತ್ತ 10 ಲಕ್ಷ ರೂ.ಗಳು. ಪುನರ್ವಸತಿ ಕಲ್ಪಿಸುವಂತಹ ತೀರ್ವತರವಾದ ಗಾಯ ಅಥವ ಇತರೆ ಮಾನಸಿಕ ಹಾನಿ/ ತೊಂದರೆ 1 ಲಕ್ಷ ರೂ. ಅನ್ವಯಿಸುವ ಕನಿಷ್ಠ ಪರಿಹಾರದ ಮೊತ್ತ, ಗರಿಷ್ಠ ಮೊತ್ತ 2 ಲಕ್ಷ ರೂ.ಗಳು.
ಕೈಕಾಲು ಹಾಗೂ ಇತರೆ ದೇಹ ಭಾಗದ ಅಂಗಾಗಗಳು, ಖಾಯಂ/ ಭಾಗಶಃ ಶೇಕಡಾ 80ರಷ್ಟು ಅಂಗ ವೈಕಲ್ಯ ಅನ್ವಯಿಸುವ ಕನಿಷ್ಠ ಪರಿಹಾರದ ಮೊತ್ತ 2 ಲಕ್ಷ ರೂ.ಗಳು. ಗರಿಷ್ಠ ಮೊತ್ತ 5 ಲಕ್ಷ ರೂ.ಗಳು. ಕೈಕಾಲು ಹಾಗೂ ಇತರೆ ದೇಹ ಭಾಗದ ಅಂಗಾಗಳು ಖಾಯಂ/ ಭಾಗಶಃ ಶೇಕಡಾ 40 ರಿಂದ 80 ರಷ್ಟು ಅಂಗವೈಕಲ್ಯ ಅನ್ವಯಿಸುವ ಕನಿಷ್ಠ ಪರಿಹಾರದ ಮೊತ್ತ 2 ಲಕ್ಷ ರೂ., ಗರಿಷ್ಠ 4 ಲಕ್ಷ ರೂ.ಗಳು.
ಕೈಕಾಲು ಹಾಗೂ ಇತರೆ ದೇಹದ ಭಾಗದ ಅಂಗಾಗಗಳು ಖಾಯಂ/ ಭಾಗಶಃ ಶೇಕಡಾ 20 ರಿಂದ 40ರಷ್ಟು ಅಂಗವೈಕಲ್ಯ ಅನ್ವಯಿಸುವ ಕನಿಷ್ಠ ಪರಿಹಾರದ ಮೊತ್ತ 1 ಲಕ್ಷ ರೂ.ಗಳು, ಗರಿಷ್ಠ ಮೊತ್ತ 3 ಲಕ್ಷ ರೂ.ಗಳು. ಕೈ ಕಾಲು ಹಾಗೂ ಇತರೆ ದೇದ ಭಾಗದ ಅಂಗಾಗಳು ಖಾಯಂ/ ಭಾಗಶಃ ಶೇಕಡಾ 20ಕ್ಕಿಂತ ಕಡಿಮೆ ಅಂಗವೈಕಲ್ಯ ಅನ್ವಯಿಸುವ ಕನಿಷ್ಠ ಪರಿಹಾರದ ಮೊತ್ತ 1 ಲಕ್ಷ ರೂ.ಗಳು, ಗರಿಷ್ಠ ಮೊತ್ತ 2 ಲಕ್ಷ ರೂ.ಗಳು.
ಗುಂಪು ಹತ್ಯೆ/ ಗುಂಪು ಗಲಭೆ ಸಂತ್ರಸ್ತ್ರ ಪರಿಹಾರ ಯೋಜನೆ ಅಡಿ ಪರಿಹಾರವನ್ನು ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ- 2011ರಡಿ ಸ್ಥಾಪಿಸಲಾಗಿರುವ ಪರಿಹಾರ ನಿಧಿಯಿಂದ ಪಾವತಿಸತಕ್ಕದ್ದು ಹಾಗೂ ಪರಿಹಾರದ ಮೊತ್ತ ನಿರ್ಣಯ ಮತ್ತು ಪಾವತಿ ಬಗ್ಗೆ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011ರಡಿಯಲ್ಲಿನ ಮಾರ್ಗಸೂಚಿಗಳನ್ನು ಅನುಸರಿಸತಕ್ಕದ್ದು ಎಂದು ಆದೇಶ ಹೇಳಿದೆ.












Click it and Unblock the Notifications