ಡಿನೋಟಿಫಿಕೇಷನ್ : ಯಡಿಯೂರಪ್ಪ ವಿರುದ್ಧ 3 ಎಫ್ಐಆರ್
ಬೆಂಗಳೂರು, ಜೂ. 20 : ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಎಫ್ಐಆರ್ ದಾಖಲಾಗಿದೆ. ಜಯಕುಮಾರ ಹಿರೇಮಠ ಅವರು ಸಲ್ಲಿಸಿದ್ದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಶುಕ್ರವಾರ ದಾಖಲಾಗಿರುವ ಮೂರು ಎಫ್ಐಆರ್ಗಳಲ್ಲೂ ಯಡಿಯೂರಪ್ಪ ಅವರು ಪ್ರಮುಖ ಆರೋಪಿ. ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಿಗಳು, ಜಮೀನಿನ ಮಾಲೀಕರು ಇತರ ಆರೋಪಿಗಳಾಗಿದ್ದಾರೆ. [ಅರ್ಕಾವತಿ ಹಗರಣ ತನಿಖೆ ಆರಂಭ]

ಎಫ್ಐಆರ್ 1 : ಜೆ.ಪಿ. ನಗರದ ಕೊತ್ತನೂರು ಹಳ್ಳಿಯಲ್ಲಿ ನಡೆದ 6 ಎಕರೆ 10 ಗುಂಟೆ ಜಮೀನಿನ ಡಿನೋಟಿಫಿಕೇಷನ್ ಕುರಿತು ಮೊದಲ ಎಫ್ಐಆರ್ ದಾಖಲಾಗಿದೆ. ಬಡಾವಣೆ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಂಡಿದ್ದ ಭೂಮಿ ಡಿನೋಟಿಫೈ ಮಾಡಿದ್ದಾರೆ ಎಂಬುದು ಆರೋಪ. ಯಡಿಯೂರಪ್ಪ ಮತ್ತು ಇತರ ಮೂವರು ಇದರಲ್ಲಿ ಆರೋಪಿಗಳಾಗಿದ್ದಾರೆ. [ಕುಮಾರಸ್ವಾಮಿ, ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಎಫ್ ಐಆರ್]
ಎಫ್ಐಆರ್ 2 : ಬಿ.ಎಸ್.ಯಡಿಯೂರಪ್ಪ ಮತ್ತು ಇತರ ಆರು ಜನರ ಹೆಸರನ್ನು 2ನೇ ಎಫ್ಐಆರ್ನಲ್ಲಿ ಹೆಸರಿಸಲಾಗಿದೆ. 6 ಎಕರೆ 30 ಗುಂಟೆ ಜಮೀನನ್ನು ಯಡಿಯೂರಪ್ಪ ಅವರು 2010ರಲ್ಲಿ ಡಿನೋಟಿಫೈ ಮಾಡಿರುವ ಕುರಿತು ಈ ಎಫ್ಐಆರ್ ದಾಖಲಾಗಿದೆ.
ಎಫ್ಐಆರ್ 3 : ಬಿಟಿಎಂ 4ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಂಡಿದ್ದ 1 ಎಕರೆ 17 ಗುಂಟೆ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 3ನೇ ಎಫ್ಐಆರ್ ದಾಖಲಾಗಿದೆ. ಅಕ್ರಮವಾಗಿ ಜಮೀನು ಡಿನೋಟಿಫೈ ಆಗಿದೆ ಎಂಬುದು ಆರೋಪವಾಗಿದೆ.
ಸಿಎಜಿ ವರದಿ ನೀಡಿತ್ತು : 2012ರಲ್ಲಿ ಮಹಾಲೇಖಪಾಲರು (ಸಿಎಜಿ) ನೀಡಿದ ವರದಿ ಅನ್ವಯ ಜಯಕುಮಾರ ಹಿರೇಮಠ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. 2007ರಿಂದ 2012ರ ತನಕ ನಡೆದ ಡಿನೋಟಿಫಿಕೇಷನ್ ಪ್ರಕರಣಗಳ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತ ಸಿಐಡಿಗೆ ಸೂಚನೆ ನೀಡಿತ್ತು. ಸಿಐಡಿ ವರದಿ ಬಂದ ನಂತರ ಎಫ್ಐಆರ್ ದಾಖಲು ಮಾಡಲಾಗಿದೆ.












Click it and Unblock the Notifications