ಲೋಕಸಭಾ ಚುನಾವಣೆ: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವ ಸ್ಥಾನಗಳೆಷ್ಟು? ಅಂಕಿ ಅಂಶಗಳನ್ನ ಬಿಚ್ಚಿಟ್ಟ ಚಲುವರಾಯಸ್ವಾಮಿ
ಮಂಡ್ಯ, ಮೇ 31: ಕರ್ನಾಟಕದಲ್ಲಿ ಎರಡು ಹಂತದ ಲೋಕಸಭಾ ಚುನಾವಣಾ ಮತದಾನ ನಡೆದಿದ್ದು, ರಾಜಕೀಯ ಪಕ್ಷಗಳು ಸೋಲು ಗೆಲುವಿನ ಲೆಕ್ಕಾಚಾರವನ್ನ ನಡೆಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರಿಗೆ ಆಂತರಿಕ ವರದಿಯಿಂದ ಕೊಚ್ಚ ಸಮಾಧಾನವಾಗಿದ್ರೆ, ಇತ್ತ ಬಿಜೆಪಿಗೆ ಟೆನ್ಷನ್ ಶುರುವಾಗಿದೆ. ಇತ್ತ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಸ್ಥಾನಗಳ ಕುರಿತು ಚಲುವರಾಯಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಮಂಡ್ಯದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಡೆದಿರುವ 28 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ. ಅದರಲ್ಲಿ ಒಂದು ಕಡಿಮೆಯಾಗಬಹುದು ಅಥವಾ ಒಂದು ಹೆಚ್ಚಾಗಬಹುದು. ಮಂಡ್ಯದಲ್ಲೂ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಚಲುವರಾಯಸ್ವಾಮಿ ಹೇಳಿದರು.

ನಾವು ಇಷ್ಟೇ ಅಂತರದಿಂದ ಗೆಲುವು ಸಾಧಿಸುವರೆಂದು ಉದ್ಧಟತನದಲ್ಲಿ ಎಂದೂ ಮಾತನಾಡುವುದಿಲ್ಲ. ಒಂದು ಸಾವಿರದಲ್ಲಿ ಗೆದ್ದರೂ ಗೆಲುವೇ. ಜೆಡಿಎಸ್ನವರಂತೆ 2-3 ಲಕ್ಷ ಅಂತರದಲ್ಲಿ ಗೆಲ್ಲುತ್ತೇವೆಂಬ ಅಹಂಕಾರದ ಮಾತುಗಳನ್ನಾಡುವುದಿಲ್ಲ. ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗದಂತೆ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದೇವೆ. ಗೆಲುವು ಖಚಿತ ಎಂಬ ಭರವಸೆ ನಮಗಿದೆ ಎಂದರು.
ಕಾಂಗ್ರೆಸ್ ಗೆಲ್ಲುತ್ತದೆ ಎಂದು ನಾವು ಹೇಳುತ್ತೇವೆಯೇ ವಿನಃ ವಿರೋಧಿಗಳಿಗೆ ಸವಾಲು ಹಾಕುವುದಿಲ್ಲ, ಬೆಟ್ಟಿಂಗ್ಗೆ ಜನರನ್ನು ಪ್ರಚೋದಿಸುವುದಿಲ್ಲ. ಬೆಟ್ಟಿಂಗ್ಗೆ ನಾವು ಹಿಂದಿನಿಂದಲೂ ವಿರೋಧಿಗಳು. ಯಾವ ಕಾರಣಕ್ಕೂ ಅದಕ್ಕೆ ಮಣೆ ಹಾಕುವುದಿಲ್ಲ. ಜೆಡಿಎಸ್ನವರು ಮೊದಲು 1ಲಕ್ಷಕ್ಕೆ 3 ಲಕ್ಷ ರು., 2 ಲಕ್ಷ ರು. ಎನ್ನುತ್ತಿದ್ದವರು ನಂತರದಲ್ಲಿ 25 ಸಾವಿರ, 50 ಸಾವಿರಕ್ಕೆ ಬಂದಿದ್ದರು. ಈಗ ಬೆಟ್ಟಿಂಗ್ಗೆ ಯಾರೂ ಮುಂದಾಗುತ್ತಿಲ್ಲ ಎಂದು ತಿಳಿಸಿದರು.
ಈ ಬಾರಿ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದ ಸಚಿವ ಎನ್.ಚಲುವರಾಯಸ್ವಾಮಿ, ನಾಲಾ ಆಧುನೀಕರಣ ಕಾಮಗಾರಿ ಶೀಘ್ರಗತಿಯಲ್ಲಿ ಮುಕ್ತಾಯವಾಗಲಿದೆ. ಜುಲೈ ಅಂತ್ಯದ ವೇಳೆಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಲಿರುವುದರಿಂದ ಅಲ್ಲಿಯವರೆಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಒಮ್ಮೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ರೈತರಿಗೆ ತೊಂದರೆಯಾಗದಂತೆ ನೀರು ಹರಿಸುವಂತೆ ಕ್ರಮ ಕೈಗೊಳ್ಳಲು ನೀರಾವರಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.












Click it and Unblock the Notifications