14 ಗ್ಯಾರಂಟಿ ಸಮಾವೇಶ..76 ಪ್ರಜಾಧ್ವನಿ : ಲೋಕಸಭಾ ಕದನದಲ್ಲಿ ಸಿದ್ದರಾಮಯ್ಯ ಹೋರಾಟ ಹೇಗಿತ್ತು..?
ಬೆಂಗಳೂರು, ಮೇ 10: 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗೆದ್ದು ಸರ್ಕಾರ ರಚಿಸಿರುವ ಕಾಂಗ್ರೆಸ್ ಗೆ 2024 ರ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಇತ್ತ ಕಾಂಗ್ರೆಸ್ ಹೈಕಮಾಂಡ್ ಕನಿಷ್ಟ 20 ಕ್ಷೇತ್ರಗಳನ್ನ ಗೆಲ್ಲಲು ಟಾರ್ಗೆಟ್ ನೀಡಿದ್ದು, ಪ್ರತಿಷ್ಠೆಯಾಗಿ ತೆಗೆದುಕೊಂಡ ಸಿದ್ದರಾಮಯ್ಯ ಅವರು ಭರ್ಜರಿ ಸಮಾವೇಶ ಹಾಗೂ ರೋಡ್ ಶೋ ಗಳನ್ನ ನಡೆಸಿದ್ದಾರೆ.
ಚುನಾವಣೆ ಘೋಷಣೆ ಆಗುವುದಕ್ಕೂ ಮೊದಲು 14 ಗ್ಯಾರಂಟಿ ಸಮಾವೇಶಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಎಲ್ಲಾ ಸಮಾವೇಶಗಳಲ್ಲೂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳ ತಾತ್ವಿಕತೆ, ಅಗತ್ಯ, ಅನಿವಾರ್ಯತೆ ಮತ್ತು ಪರಿಣಾಮಗಳನ್ನು ತಮ್ಮದೇ ಶೈಲಿಯಲ್ಲಿ ಜನರಿಗೆ ಮನದಟ್ಟು ಮಾಡಿಸಿದ್ದರು. ಪ್ರಮುಖವಾಗಿ ನೆರೆದಿದ್ದ ಜನರ ಜತೆ ಸಂವಾದ ನಡೆಸುತ್ತಲೇ ಅವರನ್ನು ಒಳಗೊಳ್ಳುತ್ತಾ ಜನಪದ (ಜನಪರ) ಕಲಾವಿದರ ಶೈಲಿಯಲ್ಲಿ ಸ್ಪಂದಿಸಿದ್ದು ಪರಿಣಾಮಕಾರಿಯಾಗಿತ್ತು.

ಚುನಾವಣೆ ಘೋಷಣೆಯಾದ ಬಳಿಕ ಮೊದಲ ಮತ್ತು ಎರಡನೇ ಹಂತದ 28 ಲೋಕಸಭಾ ಕ್ಷೇತ್ರಗಳ 76 ಸ್ಥಳಗಳಲ್ಲಿ "ಪ್ರಜಾಧ್ವನಿ-2" ಜನ ಸಮಾವೇಶಗಳಲ್ಲಿ ಹೈವೋಲ್ಟೇಜ್ ಭಾಷಣಗಳ ಮೂಲಕ ರಾಜ್ಯದ ಜನರಿಗೆ 2024ರ ಲೋಕಸಭಾ ಚುನಾವಣೆಯ ಮಹತ್ವವನ್ನು ಮನಮುಟ್ಟು ಮಾಡಿದ್ದಾರೆ. ಬಿಜೆಪಿ ಕೇವಲ ಭಾರತೀಯರ ಭಾವನೆಗಳನ್ನು ಕೆರಳಿಸಿ ಬಕ್ರಾ ಮಾಡುತ್ತಿದೆ. ಕಾಂಗ್ರೆಸ್ ನಿಮ್ಮ ಭಾವನೆಗಳನ್ನು ಗೌರವಿಸುತ್ತಲೇ ನಿಮ್ಮ ಬದುಕಿಗೆ ಭರವಸೆಗಳನ್ನು ನೀಡುತ್ತಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಭಾಷಣದ ಅಂಶಗಳು ಇಲ್ಲಿವೆ ನೋಡಿ
ಇಲ್ಲಿ ನಾನೇ ಅಭ್ಯರ್ಥಿ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ನಾನು ಗೆದ್ದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸುತ್ತಿದ್ದಂತೆ ಜನ ಕುಳಿತಲ್ಲಿಂದ ಮೇಲೆದ್ದು ಎರಡೂ ಕೈಗಳನ್ನು ಮೇಲೆತ್ತಿ, ಅವರ ಮಾತಿಗೆ ಸಮ್ಮತಿ ಸೂಚಿಸುತ್ತಿದ್ದರು. ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಆರ್ಥಿಕತೆಗೆ ಎಂಥಾ ದುಸ್ಥಿತಿ ತಂದಿಟ್ಟರು ಎನ್ನುವುದನ್ನು ವಿವರಿಸುವಾಗ ಪ್ರತೀ ಸಭೆಗಳಲ್ಲೂ ರೊಚ್ಚಿಗೆದ್ದ ಜನರ ಬಾಯಲ್ಲಿ ಅಂಬಾನಿ-ಅದಾನಿ ಹೆಸರು ಪ್ರಸ್ತಾಪವಾಗುವಂತೆ ಸಿದ್ದರಾಮಯ್ಯ ಅವರು ಭಾಷಣಗಳನ್ನ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಟಿ ಶೈಲಿಯ ಭಾಷಣಗಳಲ್ಲಿ ಅರ್ಥಪೂರ್ಣವಾದ ಹಾಸ್ಯವೂ ಮೇಳೈಸಿದ್ದರಿಂದ ರಾಜ್ಯದ ಜನತೆಗೆ ಮನರಂಜನೆಯೂ ಸಿಕ್ಕಿತ್ತು. ಹತ್ತು ವರ್ಷಗಳಲ್ಲಿ ಮೋದಿ ನಿಮ್ಮ ಕೈಗೆ ಏನು ಕೊಟ್ಟರು ಎಂದರು ಜನರೆಡೆಗೆ ಬೆರಳು ಮಾಡಿ ಸಿದ್ದರಾಮಯ್ಯ ಅವರು ಪ್ರಶ್ನಿಸುತ್ತಿದ್ರು, ಕೇಂದ್ರ ನಿಮಗೆ "ಖಾಲಿ ಚೊಂಬು" ಕೊಟ್ಟಿದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಅನ್ನಭಾಗ್ಯ ಕೊಟ್ಟಿದ್ದು ಯಾರು ? ಮೋದಿಯವರ "ಅಚ್ಛೇ ದಿನ್ ಆಯೇಂಗೆ" ಎನ್ನುವ ಸುಳ್ಳು ಭರವಸೆಯನ್ನು ಲೇವಡಿ ಮಾಡುವಾಗ ದೀರ್ಘವಾಗಿ "ಅಚ್ಚೆಏಏಏಏಏ ದಿನ್ ಆಯೇಂಗೇ" ಎಂದು ರಾಗವನ್ನ ಸಿದ್ದರಾಮಯ್ಯ ಎಳೆಯುತ್ತಿದ್ದು, 14 ಗ್ಯಾರಂಟಿ ಸಮಾವೇಶಗಳು ಮತ್ತು 76 ಪ್ರಜಾಧ್ವನಿ ಜನ ಸಮಾವೇಶಗಳು ಸೇರಿ 90 ಸಭೆಗಳಿಗಾಗಿ ಮುಖ್ಯಮಂತ್ರಿಗಳು ರಾಜ್ಯದ ಉದ್ದಗಲಕ್ಕೂ ಪ್ರಯಾಣಿಸಿದ್ದು ಪ್ರಯಾಣಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿಯವರು ಯಥಾ ಪ್ರಕಾರ ತಮ್ಮ ಸುಳ್ಳು ಭಾಷಣದಲ್ಲಿ, "ರಾಹುಲ್ ಗಾಂಧಿಯವರಿಗೆ ಅಂಬಾನಿ-ಅದಾನಿ ತಮ್ಮ ಬ್ಲಾಕ್ ಮನಿಯನ್ನು ಟೆಂಪೋಗಳಲ್ಲಿ ತುಂಬಿ ಕಳುಹಿಸಿದ್ದಾರಾ? ಅದಕ್ಕೇ ಇವರು ಅಂಬಾನಿ-ಅದಾನಿಯನ್ನು ಟೀಕಿಸುವುದನ್ನೇ ನಿಲ್ಲಿಸಿದ್ದಾರಾ? ಎಂದು ಆರೋಪಿಸಿದ್ದಾರೆ. ಇದು ಅಪ್ಪಟ ಸುಳ್ಳು. ಏಕೆಂದರೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಗಾಂಧಿ ರಾಜ್ಯದಲ್ಲಿ ನಡೆಸಿದ ಪ್ರತೀ ಚುನಾವಣಾ ಪ್ರಚಾರದಲ್ಲೂ, " ಭಾರತೀಯರ ಹಣ ಮತ್ತು ಭಾರತ ದೇಶದ ಸಂಪತ್ತು ಹೇಗೆ ಅಂಬಾನಿ-ಅಂದಾನಿಯ ಖಾಸಗಿ ಸ್ವತ್ತಾಗಿ ಪರಿವರ್ತನೆ ಆಗಿದೆ ಎನ್ನುವುದನ್ನು ತಮ್ಮದೇ ಮಾತುಗಳಲ್ಲಿ, ತಮ್ಮದೇ ಶೈಲಿಯಲ್ಲಿ ಜನತೆಗೆ ವಿವರಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.












Click it and Unblock the Notifications