Lok Sabha Elections: ಮಕ್ಕಳನ್ನು ಗೆಲ್ಲಿಸಲು ಟೊಂಕ ಕಟ್ಟಿನಿಂತ ಸಚಿವರು: ಕಾಂಗ್ರೆಸ್ಗೆ ಬೂಸ್ಟ್ ನೀಡುತ್ತಾ ಯುವ ಪೀಳಿಗೆ?
ಕರ್ನಾಟಕ ಲೋಕಸಭಾ ಚುನಾವಣೆಯ ಬಿಸಿ ಏರುತ್ತಿದೆ. ಪ್ರಚಾರದ ಕಾವು ದಿನೇ ದಿನೇ ಹೆಚ್ಚುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಮತ ಪ್ರಚಾರ ನಡೆಸಿವೆ. ಬಿಸಿಲು ಪ್ರಚಾರಕ್ಕೆ ಅಡ್ಡಿ ಪಡಿಸಿರುವುದು ಸುಳ್ಳಲ್ಲ. ಕುಟುಂಬ ರಾಜಕಾರಣ ಎಲ್ಲ ಪಕ್ಷಗಳಲ್ಲೂ ಇದ್ದಂತೆ ಕಾಂಗ್ರೆಸ್ನಲ್ಲೂ ಇದೆ. ಈ ಬಾರಿ ಸಚಿವರ ಮಕ್ಕಳು ಅಖಾಡ ಪ್ರವೇಶಿಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ನ ಆರು ಮಂದಿ ಸಚಿವರ ಮಕ್ಕಳು ಚುನಾವಣಾ ಕಣದಲ್ಲಿ ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಲವು ಸಚಿವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ತನ್ನ ಶಕ್ತಿಮೀರಿ ಪ್ರಯತ್ನಿಸಿತ್ತು ಆದರೆ ಯಾವೊಬ್ಬ ಸಚಿವರೂ ಕಣಕ್ಕೆ ಇಳಿಯಲಿಲ್ಲ. ಬದಲಿಗೆ ಅವರ ಮಕ್ಕಳಿಗೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ತಮ್ಮ ಮಕ್ಕಳು ಅಥವಾ ಬಂಧುಗಳಿಗೆ ಈ ಸಚಿವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಪಕ್ಷ ವಹಿಸಿದೆ.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದಿತ್ತು ಆದರೆ ಈ ಬಾರಿ ಪಕ್ಷವು 15 ರಿಂದ 20 ಕ್ಷೇತ್ರಗಳಲ್ಲಿ ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಹೀಗಾಗಿ ಸಚಿವರು ತಮ್ಮ ಸ್ವ ಕ್ಷೇತ್ರದಲ್ಲಿ ಮಕ್ಕಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.
ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಹವಾ
ಬೆಳಗಾವಿ ಜಿಲ್ಲೆಯಲ್ಲಿ ಮೊದಲಿನಿಂದಲೂ ಕುಟುಂಬ ರಾಜಕಾರಣ ಇದೆ. ಈ ಬಾರಿ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಕಣದಲ್ಲಿದ್ದಾರೆ. ಇವರ ರಾಜಕೀಯ ಭವಿಷ್ಯವನ್ನು ಉಜ್ವಲಗೊಳಿಸಲು ತಂದೆ ಶ್ರಮಿಸುತ್ತಿದ್ದಾರೆ. ಇವರು ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್ ಜೊಲ್ಲೆ ಅವರ ವಿರುದ್ಧ ಸ್ಪರ್ಧಿಸುತ್ತಿದ್ದು ತೀವ್ರ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಬಾವುಟ ಹಾರಿಸಲು ಸಂಯುಕ್ತ ಪಡೆ
ಬಾಗಲೋಕಟೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸಚಿವ ಶಿವರಾಜ್ ಪಾಟೀಲ್ ಪುತ್ರಿ ಸಂಯುಕ್ತ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಯುವ ಮುಖಂಡೆಯಾಗಿ ಗುರುತಿಸಿಕೊಂಡಿರುವ ಇವರು ಸಂಸತ್ ಪ್ರವೇಶಿಸುವ ಕನಸಿನಲ್ಲಿದ್ದಾರೆ. ಇವರಿಗೆ ಪಿಸಿ ಗದ್ದಿಗೌಡರ ಸವಾಲು ಎಸೆಯಲಿದ್ದಾರೆ. ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಮತದಾರ ಯಾರ ಕೈ ಹಿಡಿಯುತ್ತಾನೆ ಎಂಬ ಪ್ರಶ್ನೆಗೆ ಫಲಿತಾಂಶದ ಬಳಿಕ ಉತ್ತರ ಲಭಿಸಲಿದೆ.

ಕಣದಲ್ಲಿ ರಾಮಲಿಂಗಾರೆಡ್ಡಿ ಪುತ್ರಿ
ಕಳೆದ ವಿಧನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದ ಸೌಮ್ಯಾ ರೆಡ್ಡಿ ಅವರಿಗೆ ಕಾಂಗ್ರೆಸ್ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದೆ. ಇಲ್ಲಿ ಇವರಿಗೆ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರು ಕಠಿಣ ಸ್ಪರ್ಧೆ ಒಡ್ಡಲಿದ್ದಾರೆ. ಇಬ್ಬರು ಯುವ ನಾಯಕರ ನಡುವಿನ ಫೈಟ್ ರೋಚಕತೆ ಹೆಚ್ಚಿಸಿದೆ.
ಸುನಿಲ್ ಬೋಸ್ ಕಣಕ್ಕೆ
ಪ್ರಭಾವಿ ಸಚಿವ ಎಚ್.ಸಿ. ಮಹದೇವಪ್ಪ ಅವರು ತಮ್ಮ ಪುತ್ರ ಸುನಿಲ್ ಬೋಸ್ ಅವರಿಗೆ ಚಾಮರಾಜನಹಗರದಿಂದ ಸ್ಪರ್ಧಿಸಲು ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಇವರಿಗೆ ಈ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿ ಎಸ್ ಬಾಲರಾಜ್ ಪೈಪೋಟಿ ನೀಡುವ ಸಾಧ್ಯತೆ ಇದೆ. ಎರಡು ಹೊಸ ಮುಖಗಳ ನಡುವೆ ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದಕ್ಕೆ ಜೂನ್ 4ರಂದು ಉತ್ತರ ಸಿಗಲಿದೆ.

ಸಾಗರ್ ಖಂಡ್ರೆಗೆ ಟಿಕೆಟ್
ಬೀದರ್ ಲೋಕಸಭಾ ಕ್ಷೇತ್ರದಿಂದ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡೆ ಅವರ ಪುತ್ರ ಸಾಗರ ಖಂಡ್ರೆ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಈ ಬಾರಿ ಶತಾಯ ಗತಾಯ ಮಗನನ್ನು ಗೆಲ್ಲಿಸಲೇ ಬೇಕು ಎಂಬ ಕನಸನ್ನು ಖಂಡ್ರೆ ಕಾಣುತ್ತಿದ್ದಾರೆ.

ಸಚಿವರ ಮಗನ ವಿರುದ್ಧ ಮಾಜಿ ಸಿಎಂ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಇವರು ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಡುವೆ ಜಿದ್ದಾಜಿದ್ದಿನ ಫೈಟ್ ನಡೆಯಲಿದೆ. ಇಬ್ಬರ ನಡುವಿನ ಫೈಟ್ ರಾಜ್ಯದ ಚಿತ್ತ ಕದ್ದಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಗನ ರಾಜಕೀಯ ಭವಿಷ್ಯವನ್ನು ಭದ್ರವಾಗಿಸಲು ಶ್ರಮಿಸುತ್ತಿದ್ದಾರೆ.












Click it and Unblock the Notifications