ತುಮಕೂರಲ್ಲಿ ಜೆಡಿಎಸ್ಗೆ ಟಿಕೆಟ್: ತಳಮಳಗೊಂಡ ಪರಂ ದೆಹಲಿಗೆ ದೌಡು
ಬೆಂಗಳೂರು, ಮಾರ್ಚ್ 16: ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಉಂಟಾಗಿರುವ ಗೊಂದಲ ಬಿಗಡಾಯಿಸಿದೆ. ತಮ್ಮ ಪ್ರಭಾವವಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವುದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರಲ್ಲಿ ತಳಮಳ ಮೂಡಿಸಿದೆ.
ತಮ್ಮ ಅಭಿಪ್ರಾಯ ಪಡೆದುಕೊಳ್ಳದೆ ಒಳಗೊಳಗೆ ಈ ಸೀಟು ಹಂಚಿಕೆ ಒಪ್ಪಂದ ನಡೆದಿರುವುದು ಅವರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಅವರು ಶನಿವಾರ ಮಧ್ಯಾಹ್ನ ದೆಹಲಿಗೆ ದೌಡಾಯಿಸಿದ್ದಾರೆ. ರಾಜಧಾನಿಯಲ್ಲಿ ಪಕ್ಷದ ಹಿರಿಯ ಮುಖಂಡರನ್ನು ಭೇಟಿ ಮಾಡಿ ಅವರು ಮಾತುಕತೆ ನಡೆಸುವ ಸಾಧ್ಯತೆಯಿದೆ.
ತುಮಕೂರಿನಲ್ಲಿ ಜೆಡಿಎಸ್ ಪ್ರಬಲವಾಗಿಲ್ಲ. ತಮ್ಮ ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಜೆಡಿಎಸ್ಗೆ ಸೀಟು ನೀಡಿದರೆ ಅದು ಪಕ್ಷಕ್ಕೇ ಮಾರಕವಾಗಲಿದೆ. ಆದ್ದರಿಂದ ಈ ಒಪ್ಪಂದವನ್ನು ಬದಲಿಸುವುದು ಅಗತ್ಯವಾಗಿದೆ ಎಂದು ಅವರು ಹೈಕಮಾಂಡ್ಗೆ ಮನವರಿಕೆ ಮಾಡಿಕೊಡಬೇಕಿದೆ. ಅಲ್ಲದೆ, ಜೆಡಿಎಸ್ಗೆ ಸೀಟು ಬಿಟ್ಟುಕೊಡುವುದು ವೈಯಕ್ತಿಕವಾಗಿ ಪರಮೇಶ್ವರ್ ಅವರ ವರ್ಚಸ್ಸಿಗೆ ಧಕ್ಕೆ ಉಂಟುಮಾಡಲಿದೆ.

ದೇವೇಗೌಡರ ವಿರುದ್ಧ ಪ್ರತಿಭಟನೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ವಿರುದ್ಧ ತುಮಕೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.
ಹಾಲಿ ಸಂಸದ ಮುದ್ದಹನುಮೇಗೌಡ ಅವರಿಗೇ ಟಿಕೆಟ್ ನೀಡಬೇಕು. ಒಂದು ವೇಳೆ ತುಮಕೂರಿನಲ್ಲಿ ದೇವೇಗೌಡರೇ ನಿಂತರೂ ಅವರನ್ನು ಸೋಲಿಸುತ್ತೇವೆ ಎಂದು ಟೌನ್ಹಾಲ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಹೇಳಿದರು.
ಟಿಕೆಟ್ ಹಂಚಿಕೆ ಹಿನ್ನೆಲೆಯಲ್ಲಿ ಏನಿದೆ ಎನ್ನುವುದು ನಮಗೆ ಬೇಕಿಲ್ಲ. ಸಮ್ಮಿಶ್ರ ಸರ್ಕಾರ ಏನಿದ್ದರೂ ಬೇರೆ ಜಿಲ್ಲೆಗಳಿಗೆ. ನಮ್ಮ ಜಿಲ್ಲೆಗೆ ಕಾಂಗ್ರೆಸ್ ಮಾತ್ರ. ಜೆಡಿಎಸ್ಗೆ ಟಿಕೆಟ್ ನೀಡಿದರೆ ದೇವೇಗೌಡರನ್ನು ನಾವೇ ಸೋಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications