ನಾವು ಸುಮಲತಾ ಅಂಬರೀಷ್ ಮನೆಮಕ್ಕಳು: ಯಶ್, ದರ್ಶನ್ ಹೇಳಿಕೆ
Recommended Video

ಬೆಂಗಳೂರು, ಮಾರ್ಚ್ 18: ನಾವಿಲ್ಲಿ ಕಲಾವಿದರಾಗಿ ಬಂದಿಲ್ಲ, ಸುಮಲತಾ ಅಂಬರೀಷ್ ಅವರ ಮನೆಮಕ್ಕಳಾಗಿ ಕುಳಿತಿದ್ದೇವೆ- ಸುಮಲತಾ ಅವರ ಎಡ-ಬಲದಲ್ಲಿ ಕುಳಿತಿದ್ದ ಯಶ್ ಮತ್ತು ದರ್ಶನ್ ಅವರ ಒಮ್ಮತದ ಹೇಳಿಕೆ.
ಮಂಡ್ಯ ಲೋಕಸಭೆ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಘೋಷಿಸಲು ಸುದ್ದಿಗೋಷ್ಠಿ ನಡೆಸಿದ ಸುಮಲತಾ ಅವರ ಜತೆಯಲ್ಲಿ ಯಶ್ ಮತ್ತು ದರ್ಶನ್ ಇಬ್ಬರೂ ಕಾಣಿಸಿಕೊಂಡರು.
ಈ ವೇಳೆ ಮಾತನಾಡಿದ ಯಶ್, ನಾವು ಕಲಾವಿದರಾಗಿ ಕುಳಿತಿಲ್ಲ. ಮನೆಮಕ್ಕಳಾಗಿ ಕುಳಿತಿದ್ದೇವೆ. ಎಷ್ಟೋ ಜನರು ಕಲಾವಿದರಿಗೆ ಪ್ರೀತಿ ಹಂಚಿರುವ ಮಹಾನುಭಾವ ಅಂಬರೀಷ್. ಅವರು ಇಲ್ಲ ಎಂಬ ನೋವಿದೆ. ಅವರೆಡೆಗಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಮಂಡ್ಯ ಜನಕ್ಕೆ ಅಂಬರೀಷ್ ಎಂದರೆ ಏನು ಎಂದು ಗೊತ್ತಿದೆ. ಅಷ್ಟು ವರ್ಷ ಮಂಡ್ಯ ಜನರ ಪ್ರೀತಿ ಗಳಿಸುವುದು ಸುಲಭವಲ್ಲ. ಮಂಡ್ಯ ಎಂದರೆ ಅಂಬರೀಷಣ್ಣ ಎಂದೇ ಹೆಸರು.
ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಯಾವುದೋ ಸ್ವಾರ್ಥಕ್ಕಾಗಿ ಅಲ್ಲ. ಅಂಬರೀಷಣ್ಣ ರಾಜನಿದ್ದಂತೆ ಇದ್ದರು. ಕುಟುಂಬವನ್ನೂ ಹಾಗೆ ನೋಡಿಕೊಂಡಿದ್ದಾರೆ. ಮಂಡ್ಯದ ನಂಟನ್ನು ಕಡಿದುಕೊಳ್ಳಲು ಸಾಧ್ಯವಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅಂಬರೀಷಣ್ಣ ಅವರ ನೆನಪು ಇರುತ್ತದೆ. ಅದು ಮಂಡ್ಯ ಜನರ ಮನಸಿನಲ್ಲಿದೆ. ಅಂಬರೀಷ್ ಅವರ ಕುಟುಂಬದವರೆಂದು ಸುಮಲತಾ ಅವರು ಸ್ಪರ್ಧಿಸುತ್ತಿಲ್ಲ. ಅವರಿಗೆ ಯೋಗ್ಯತೆ ಇದೆ ಎಂದು ಭಾವಿಸಿದ್ದೇನೆ.
ಅಂಬರೀಷಣ್ಣ ಅವರ ನಂಟಿನ ಕಾರಣಕ್ಕೆ ಮಂಡ್ಯದ ಜನರ ಒತ್ತಾಯ ಇದೆ. ಆದರೆ, ಸುಮಲತಾ ಅವರಿಗೆ ಅದದಕ್ಕೂ ಮೀರಿದ ಶಕ್ತಿ ಇದೆ. ಗೊತ್ತಿಲ್ಲದ್ದನ್ನು ತಿಳಿಯುತ್ತಾರೆ. ಅವರಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಜ್ಞಾನವಿದೆ. ನಾವಂತೂ ಜತೆಗಿರುತ್ತೇವೆ. ಅವರು ಯಾವ ಮಟ್ಟಕ್ಕೆ ನಿಲ್ಲುತ್ತಾರೋ ಆ ಮಟ್ಟಕ್ಕೆ ನಿಲ್ಲುತ್ತೇವೆ. ನಮ್ಮ ಮನೆಯಲ್ಲಿ ತಾಯಿ ನಿರ್ಧಾರ ತೆಗೆದುಕೊಂಡ ಹಾಗೆ ನಾವೂ ಇರುತ್ತೇವೆ.

ಸುಮಲತಾ ಅವರಿಗೆ ಅರ್ಹತೆ ಇದೆ
ರಾಜಕೀಯದಲ್ಲಿ ಕೆಲಸ ಮಾಡಲು ಬಂದಿದ್ದಾರೆ. ಅದಕ್ಕೆ ಅರ್ಹತೆಗಳಿವೆ ಎಂದು ನಂಬಿದ್ದೇನೆ. ನಿಮ್ಮ ಪ್ರೀತಿ ಹಾರೈಕೆ ಅವರ ಮೇಲೆ ಇರಲಿ. ನನಗೆ ಅವರ ಮೇಲೆ ನಂಬಿಕೆ ಇದೆ. ನನ್ನನ್ನು ನಂಬದಿದ್ದರೂ ಅವರನ್ನು ನಂಬಿ ಎನ್ನುತ್ತೇನೆ.
ಒಳ್ಳೆ ಅಭ್ಯರ್ಥಿಗೆ ಓಟ್ ಮಾಡಿ ಎಂದು ನಾನು ಹೇಳುವುದು. ವ್ಯಕ್ತಿ ಒಳ್ಳೆತನಗಳಿದ್ದರೆ ಪಕ್ಷ, ಸಿದ್ಧಾಂತಗಳನ್ನು ಮೀರಿ ಕೆಲಸ ಮಾಡುತ್ತಾರೆ. ಯಾರಿಗೆ ಯೋಗ್ಯತೆ ಇದೆಯೋ ಅವರನ್ನು ಆಯ್ಕೆ ಮಾಡುತ್ತಾರೆ ಎಂದು ಯಶ್ ಹೇಳಿದರು.

ನಾವು ಮನೆಮಕ್ಕಳಾಗಿ ಬಂದಿದ್ದೇವೆ
ನಾವು ಸ್ಟಾರ್ಗಳಲ್ಲ. ಮನೆಮಕ್ಕಳಾಗಿ ಬಂದಿದ್ದೇವೆ. ಅಮ್ಮನ ಹಿಂದೆ ಅಪ್ಪಾಜಿಯನ್ನು ನೋಡುತ್ತಿದ್ದೇವೆ. ಈ ಚುನಾವಣೆ ವಿಚಾರದಲ್ಲಿ ಸಿಂಪಥಿ ಪ್ರಧಾನವಾಗಿಲ್ಲ. ಅಂಬರೀಷ್ ಮಾಡಿರುವ ಕೆಲಸಗಳನ್ನಿಟ್ಟುಕೊಂಡು ಜನತೆಯ ಮುಂದೆ ಹೋಗುತ್ತೇವೆ. ಅಭಿಮಾನಿಗಳಿಗೆ ಇವರಿಗೇ ಮತ ಹಾಕಿ ಎಂದು ಹೇಳುವ ಅಧಿಕಾರ ನಮಗಿಲ್ಲ. ಅವರ ಮುಂದೆ ಮನವಿ ಮಾಡಿಕೊಳ್ಳುತ್ತೇವೆ. ಚುನಾವಣಾ ಪ್ರಚಾರದಲ್ಲಿ ಎದುರಾಳಿ ಅಭ್ಯರ್ಥಿಗಳ ವಿರುದ್ಧ ನೆಗೆಟಿವ್ ಮಾತುಗಳನ್ನಾಡುವುದಿಲ್ಲ. ಮಂಡ್ಯ ಜನರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ.
ಇದು ನನ್ನ ನಾಲ್ಕನೆಯ ಚುನಾವಣೆ. ಅಪ್ಪಾಜಿ ಇದ್ದಾಗ ಪ್ರಚಾರಕ್ಕೆ ಹೋಗಲು ಹೇಳುತ್ತಿದ್ದರು. ಅವರು ಪಕ್ಷವನ್ನೂ ನೋಡುತ್ತಿರಲಿಲ್ಲ. ನನ್ನ ಸ್ನೇಹಿತ ಎಂದು ಹೇಳುತ್ತಿದ್ದರು. ಅವರ ಬಗ್ಗೆ ತಿಳಿದಿರಲಿಲ್ಲ. ಆದರೂ ಪ್ರಚಾರಕ್ಕೆ ತೆರಳುತ್ತಿದ್ದೆ ಎಂದರು.

ಜೋಡಿಯಾಗಿ ಗಾಡಿ ಹೊಡೆಯುತ್ತೇವೆ
ಮಂಡ್ಯದಲ್ಲಿ ನಿಖಿಲ್ ಪರ ಪ್ರಚಾರಕ್ಕೆ ಕರೆದರೆ ಹೋಗುತ್ತೀರಾ ಎಂಬ ಪ್ರಶ್ನೆಗೆ, ಒಂದೇ ಕ್ಷೇತ್ರದಲ್ಲಿ ಇಬ್ಬರ ಪರವಾಗಿ ಪ್ರಚಾರ ಮಾಡಲು ಆಗುವುದಿಲ್ಲ. ಹಾಸನದಲ್ಲಿ ಪ್ರಜ್ವಲ್ ಒಳ್ಳೆಯ ಸ್ನೇಹಿತ. ಅವರು ಕರೆದರೆ ಹೋಗಿ ಬರುತ್ತೇನೆ. ಇಲ್ಲಿ ಮಂಡ್ಯಕ್ಕೆ ಗೆಸ್ಟ್ ಅಪಿಯರೆನ್ಸ್ ಅಲ್ಲ. ಫುಲ್ ಸಿನಿಮಾ ಮಾಡುತ್ತೇನೆ. ಒಂಟಿಯಾಗಿ ಅಲ್ಲ, ಜೋಡಿಯಾಗಿ ಗಾಡಿ ಹೊಡೆಯುತ್ತೇವೆ ಎಂದು ಹೇಳಿದರು.

ಪುನೀತ್ ಕೂಡ ಬರುತ್ತಾರೆ
ನಮ್ಮ ಕಲಾವಿದರು ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ, ಕೆಲಸ ಮಾಡುತ್ತಿದ್ದಾರೆ. ಅವರನ್ನು ಸುಮಲತಾ ಅವರ ಬೆಂಬಲಕ್ಕೆ ಕರೆದಿಲ್ಲ. ಆದರೂ, ವೈಯಕ್ತಿಕವಾಗಿ ಅವರು ಗೌರವ, ಋಣ ತೀರಿಸಲು ನಮಗೆ ಅವಕಾಶ ಸಿಕ್ಕಿದೆ. ಅದಕ್ಕಾಗಿ ಜತೆಗೂಡುತ್ತೇವೆ ಎಂದು ಹೇಳಿದ್ದಾರೆ. ಪುನೀತ್ ರಾಜ್ಕುಮಾರ್ ಕೂಡ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಅಕ್ಕನ ಜೊತೆಯಲ್ಲಿ ನಾವಿದ್ದೇವೆ ಎಂದರು. ಏನು ಮಾಡಬೇಕು ಹೇಳಿ ಮಾಡುತ್ತೇನೆ ಎಂದಿದ್ದಾರೆ. ರಾಜಕೀಯವಾದ ಟೀಕೆ ಟಿಪ್ಪಣಿಗಳನ್ನು ಮಾಡಿ. ಆದರೆ, ವೈಯಕ್ತಿಕ ನಿಂದನೆ ಮಾಡಬೇಡಿ ಎಂದು ರಾಕ್ಲೈನ್ ವೆಂಕಟೇಶ್ ಹೇಳಿದರು.












Click it and Unblock the Notifications