ʼಮತದಾರರು ಸ್ಯಾಡಿಸ್ಟ್ ; ನನಗೆ ಸಿದ್ದರಾಮಯ್ಯನವರೇ ದೇವರುʼ
ಮೈಸೂರು, ಜೂನ್ 08: ನನಗೆ ಸಿದ್ದರಾಮಯ್ಯನವರೇ ದೇವರು. ಸಿದ್ದರಾಮಯ್ಯನವರು ನನಗೆ ಟಿಕೆಟ್ ಕೊಟ್ಟರು, ಅದಕ್ಕೆ ಡಿಕೆ ಶಿವಕುಮಾರ್ ಕೂಡ ಸಹಕಾರ ನೀಡಿದರು. ಎಂಟು ಕ್ಷೇತ್ರದ ಶಾಸಕ, ಮಾಜಿ ಶಾಸಕರು ನನಗೆ ಸಹಕಾರ ನೀಡಿದ್ದಾರೆ. ನನಗೆ ಅದೃಷ್ಟ ಇರಲಿಲ್ಲ, ನನ್ನ ಹಣೆಬರಹ ಸರಿ ಇರಲಿಲ್ಲ, ಹೀಗಾಗಿ ನಾನು ಸೋತಿದ್ದು ಎಂದು ಸಿದ್ದರಾಮಯ್ಯರಿಗೆ ಎದ್ದು ನಿಂತು ಮೈಸೂರು ಕಾಂಗ್ರೆಸ್ ಪರಾಜಿತ ಅಭ್ಯರ್ಥಿಎಂ ಲಕ್ಷ್ಮಣ್ ನಮಸ್ಕಾರ ಮಾಡಿದರು.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಮತ ಹಾಕಿದವರಿಗೆ ಸಾಷ್ಟಾಂಗ ನಮಸ್ಕಾರ. ಮತ ಹಾಕದವರಿಗೆ ಬರಿ ನಮಸ್ಕಾರ. ಮೈಸೂರಿಗೆ ಕೊಡಗು ಕ್ಷೇತ್ರದಲ್ಲಿ 6.5 ಲಕ್ಷ ಜನ ಮತ ನೀಡಿದ್ದಾರೆ. 7.9 ಲಕ್ಷ ಜನ ಮತ ನೀಡಿಲ್ಲ, ಇರುವವರಿಗೂ ಧನ್ಯವಾದ ಹೇಳುತ್ತೇನೆ. ಚುನಾವಣೆಯಲ್ಲಿ ಜನರಿಗೆ ಭರವಸೆ ನೀಡಿದ್ದೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದ್ದೆ, ಈಗ ನಾನು ಎಲ್ಲೂ ಓಡಿ ಹೋಗಲ್ಲ. ನಮ್ಮ ಪಕ್ಷ ಸರ್ಕಾರ ಅಧಿಕಾರದಲ್ಲಿದೆ. ಪ್ರಾಮಾಣಿಕವಾಗಿ ನಿಮ್ಮ ಜೊತೆ ಇದ್ದು ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಯದುವೀರ್ ಜನರನ್ನ ಎಷ್ಟರ ಮಟ್ಟಿಗೆ ಅರಮನೆಗೆ ಬಿಟ್ಟುಕೊಳ್ತಾರೋ ಇಲ್ಲವೋ ಗೊತ್ತಿಲ್ಲ. ನಾಳೆಯಿಂದಲೇ ನಾನು ಜನರ ಸಮಸ್ಯೆ ಪರಿಹರಿಸಲು ಮುಂದಾಗುತ್ತೇನೆ, ನನಗೆ ಮತ ಕೊಟ್ಟವರು, ಕೊಡದೆ ಇರುವವರು ಎಲ್ಲರು ನನ್ನ ಸಂಪರ್ಕ ಮಾಡಬಹುದು. ನಾಳೆಯೆ ನನ್ನ ಕಚೇರಿ ಸಹ ತೆರೆಯುತ್ತೇನೆ, ಆ ಕಚೇರಿಗೆ ಎಲ್ಲರಿಗೂ ಮುಕ್ತ ಅವಕಾಶ ಇದೆ ಎಂದು ಮೈಸೂರು ಕೊಡಗು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂ ಲಕ್ಷ್ಮಣ್ ಹೇಳಿದರು.
ಬಿಜೆಪಿ ಜೆಡಿಎಸ್ ಮೈತ್ರಿ ಸಕ್ಸಸ್ ಆಗಿದೆ. ಕಾಂಗ್ರೆಸ್ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ, ಚುನಾವಣೆ ವೇಳೆ ನನ್ನನ್ನ ಒಕ್ಕಲಿಗನೇ ಅಲ್ಲ ಅಂದು ಪ್ರಚಾರ ಮಾಡಿದ್ರು. ಹಳೆ ಮೈಸೂರು ಭಾಗದಲ್ಲಿ 8 ಜನ ಒಕ್ಕಲಿಗರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಒಬ್ಬ ಒಕ್ಕಲಿಗನನ್ನು ನೀವು ಆಯ್ಕೆ ಮಾಡಿಕೊಳ್ಳಲಿಲ್ವ. ಮೈಸೂರಿನಲ್ಲಿ ಹಲವು ವರ್ಷಗಳ ನಂತರ ಒಕ್ಕಲಿಗೆ ಸಮುದಾಯಕ್ಕೆ ಟಿಕೆಟ್ ನೀಡಿದ್ದರು.. ಈ ಅವಕಾಶವನ್ನ ಸಹ ನೀವು ಕೈ ಚೆಲ್ಲಿದಿರಾ ಎಂದು ಹೇಳಿದರು.
ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸರ್ಕಾರದ ಯಾವುದೇ ಹೊಸ ಯೋಜನೆ ಇಲ್ಲಿಗೆ ಬರಲಿಲ್ಲ. ಕೇಂದ್ರ ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ಗಮನಹರಿಸಿ, ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ. ರೈಲ್ವೆ ಟರ್ಮಿನಲ್ ಗಳ ನಿರ್ಮಾಣದ ಕಡೆ ಗಮನ ಕೊಡಿ ಎಂದು ನೂತನ ಸಂಸದ ಯದುವೀರ್ ಗೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಸಲಹೆ ನೀಡಿದರು.
ಮೈಸೂರು ಸಿದ್ದರಾಮಯ್ಯನವರ ತವರು ಜಿಲ್ಲೆ. ಇನ್ನೆಷ್ಟು ಬಾರಿ ಸಿದ್ದರಾಮಯ್ಯರಿಗೆ ಅವಮಾನ ಮಾಡುತ್ತೀರಾ. ಇದು ನಮ್ಮ ಮೈಸೂರಿನ ಜನತೆಯ ದೌರ್ಭಾಗ್ಯ, ನನ್ನನ್ನ ಎಷ್ಟು ಬಾರಿ ಬೇಕಾದರು ಸೋಲಿಸಿ.
ಆದರೆ ಸಿದ್ದರಾಮಯ್ಯರಿಗೆ ಎಷ್ಟು ಬಾರಿ ಅನ್ಯಾಯ ಮಾಡುತ್ತೀರಾ. ಸಿದ್ದರಾಮಯ್ಯನವರು ಸಾಕಷ್ಟು ಅನುದಾನವನ್ನ ಮೈಸೂರಿಗೆ ಕೊಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೂ ಇದರ ಬಗ್ಗೆ ನೋವಿದೆ. ಆದರೆ, ಅವರು ಎಲ್ಲಿಯೂ ಅದನ್ನ ಹೇಳಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂ ಲಕ್ಷ್ಮಣ್ ಹೇಳಿದರು.
ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ.ಅದನ್ನು ಅವರು ಫಲಿತಾಂಶದ ಮೂಲಕ ತೋರಿಸಿದ್ದಾರೆ, ಬಿಜೆಪಿ ನಮ್ನ ಗ್ಯಾರಂಟಿ ವಿರುದ್ಧ ಮಾತಾನಾಡುತ್ತಿತ್ತು. ಜನರ ಅವರನ್ನು ಬೆಂಬಲಿಸಿದ್ದಾರೆ, ಹಾಗಾಗಿ ಜನರಿಗೆ ನಮ್ಮ ಗ್ಯಾರಂಟಿ ಇಷ್ಟ ಆಗಿಲ್ಲ ಅಂತಲೇ ಅಲ್ಲ. ಹೀಗಾಗಿ ಗ್ಯಾಂರಂಟಿ ನಿಲ್ಲಿಸೋದೆ ಒಳಿತು. ಗ್ಯಾರಂಟಿ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ಈಗ ಮರು ಪರಿಶೀಲನೆ ಮಾಡಬೇಕು, ಈ ಬಗ್ಗೆ ಸಿಎಂ ಗಮನಹರಿಸಬೇಕು. ಶೇಕಡಾ 70% ರಷ್ಟು ಮೇಲ್ವರ್ಗದವರು ಈ ಯೋಜನೆ ಫಲಾನುಭವಿಗಳಗಿದ್ದಾರೆ. ಆದರೆ ಅದನ್ನ ಜನರು ತಿರಸ್ಕಾರ ಮಾಡಿದ್ದಾರೆ.
ಬೆಂಜ್ ಕಾರ್ ಹೊಂದಿರುವವನು, 25 ಸಾವಿರ ಸಂಬಳ ಪಡೆಯುವ ವ್ಯಕ್ತಿಗೆ ಪುಕ್ಕಟೆ ಕರೆಂಟ್ ಕೊಟ್ಟರೆ ಹೇಗೆ. ಈಗಲೂ ಗ್ಯಾರಂಟಿ ಹಣದಿಂದಲೇ ಜೀವನ ನಡೆಸುವ ಜನ ಇದ್ದಾರೆ. ಅಂತಹವರನ್ನು ನೋಡಿ ಗ್ಯಾರಂಟಿ ರೀ ಲುಕ್ ಮಾಡುವ ಅಗತ್ಯ ಇದೆ. ಇದಕ್ಕೆ ಉದಾಹರಣೆ ಎಂದರೆ ಹುಣಸೂರಿನ ಹಲವು ಹಳ್ಳಿಗಳಲ್ಲಿ ಕೇವಲ ಒಂದೇ ಸಮುದಾಯದವರು ಇದ್ದಾರೆ. ಅಲ್ಲಿ ಬಿಜೆಪಿಗೆ 600 ಕ್ಕೂ ಹೆಚ್ಚು ಮತ ನೀಡಿದರು. ನನಗೆ ಕೇವಲ ಮೂರು, ಏಳು ಮತಗಳನ್ನ ನೀಡಿದ್ದಾರೆ. ಒಕ್ಕಲಿಗರು ನನಗೆ ಮತ ಹಾಕಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.












Click it and Unblock the Notifications