ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಟ್ವಿಸ್ಟ್: ಜೆಡಿಎಸ್ಗೆ ಮತ್ತೊಂದು ಕ್ಷೇತ್ರ?
ಬೆಂಗಳೂರು, ಮಾರ್ಚ್ 17: ಕರ್ನಾಟಕದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿರುವುದು ಬಿಜೆಪಿ-ಜೆಡಿಎಸ್ ಮೈತ್ರಿ ಕಾರಣಕ್ಕೆ. ಕರ್ನಾಟಕ 20 ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಬಿಜೆಪಿ ಘೋಷಣೆ ಮಾಡಿದೆ. ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ.
ಸದ್ಯದ ಮಾಹಿತಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಜೆಡಿಎಸ್ಗೆ ಮಂಡ್ಯ, ಹಾಸನ ಎರಡು ಕ್ಷೇತ್ರಗಳು ಪಕ್ಕಾ ಆಗಿವೆ. ಶನಿವಾರ ಬಿಜೆಪಿ ನಾಯಕ ಅಮಿತ್ ಶಾರನ್ನು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭೇಟಿ ಮಾಡಿದರು. ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಅವರೊಂದಿಗೆ ವಿವರವಾಗಿ ಸಮಾಲೋಚನೆ ನಡೆಸಿದರು.

ಈ ಭೇಟಿಯ ವೇಳೆ ಮೈತ್ರಿಯಲ್ಲಿ ಕೆಲವು ಬದಲಾವಣೆಗಳನ್ನು ಅಮಿತ್ ಶಾ ಸೂಚಿಸಿದ್ದಾರೆ. ಆದರೆ ಒಂದು ಕ್ಷೇತ್ರವನ್ನು ಬಿಟ್ಟುಕೊಡಲು ಷರತ್ತು ಒಂದನ್ನು ಹಾಕಿದ್ದಾರೆ. ಆದರೆ ಇದಕ್ಕೆ ಇನ್ನೂ ಜೆಡಿಎಸ್ ನಾಯಕರು ಒಪ್ಪಿಗೆ ಕೊಟ್ಟಿಲ್ಲ. ಸದ್ಯದ ಮಟ್ಟಿಗೆ ಮಂಡ್ಯ, ಹಾಸನ ಮಾತ್ರ ಜೆಡಿಎಸ್ಗೆ ಎನ್ನುವುದು ಪಕ್ಕಾ ಆಗಿದೆ.
ಏನಿದು ಟ್ವಿಸ್ಟ್?: ಎಚ್. ಡಿ. ಕುಮಾರಸ್ವಾಮಿ ದೆಹಲಿಯಲ್ಲಿ ಅಮಿತ್ ಶಾರನ್ನು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಡಾ. ಸಿ. ಎನ್. ಮಂಜುನಾಥ್ ಜೊತೆ ಭೇಟಿ ಮಾಡಿದರು.
ಮೈತ್ರಿ ಮಾತುಕತೆಯಂತೆ ಸದ್ಯಕ್ಕೆ ಜೆಡಿಎಸ್ ಪಕ್ಷಕ್ಕೆ ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಡಲಿದೆ. ಆದರೆ ಅಮಿತ್ ಶಾ ಕುಮಾರಸ್ವಾಮಿಗೆ ಹೊಸ ಆಫರ್ ಒಂದನ್ನು ನೀಡಿದ್ದು, ಅದಕ್ಕೆ ಷರತ್ತು ಸಹ ವಿಧಿಸಿದ್ದಾರೆ ಎಂಬ ಮಾಹಿತಿ ಇದೆ.
ಅಮಿತ್ ಶಾ ಕುಮಾರಸ್ವಾಮಿ ಜೊತೆ ಚರ್ಚಿಸುವಾಗ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧ. ಆದರೆ ಅಲ್ಲಿಂದ ನೀವು ಕಣಕ್ಕಿಳಿಯುವುದಾದರೆ ಮಾತ್ರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವುದಾಗಿ ಆಫರ್ ನೀಡಿದ್ದಾರೆ. ಆದರೆ ಇದಕ್ಕೆ ಇನ್ನೂ ಜೆಡಿಎಸ್ ಒಪ್ಪಿಗೆ ನೀಡಿಲ್ಲ.
ಬಿಜೆಪಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಹಾಸನ, ಮಂಡ್ಯ, ಕೋಲಾರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ಮಾಹಿತಿ ಇದೆ. ಆದ್ದರಿಂದ ಇನ್ನೂ ಚಿಕ್ಕಬಳ್ಳಾಪುರ ಸೇರಿ 5 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಬೇಕಿದೆ. ಆದರೆ ಈಗ ಚಿಕ್ಕಬಳ್ಳಾಪುರವನ್ನು ಜೆಡಿಎಸ್ಗೆ ಬಿಟ್ಟು ಕೊಡುವ ಮಾತು ಕೇಳಿ ಬಂದಿದೆ.
ಚನ್ನಪಟ್ಟಣದ ಹಾಲಿ ಶಾಸಕ ಎಚ್. ಡಿ. ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಸದ್ಯದ ಮಾಹಿತಿ ಪ್ರಕಾರ ಮತ್ತೆ ಮಂಡ್ಯದಿಂದ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಕುಮಾರಸ್ವಾಮಿ ಆರೋಗ್ಯದ ಕಾರಣದಿಂದ ಲೋಕಸಭೆ ಚುನಾವಣಾ ಕಣಕ್ಕಿಳಿಯುವುದಿಲ್ಲ ಎಂಬ ಮಾಹಿತಿ ಇದೆ.
ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್ ರೇವಣ್ಣ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಲಿದ್ದಾರೆ. ಕೋಲಾರದಿಂದ ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ. ಮಾರ್ಚ್ 25ರಂದು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ದೇವೇಗೌಡರ ಕುಟುಂಬದಿಂದ ಬೆಂಗಳೂರು ಗ್ರಾಮಾಂತರದಿಂದ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಡಾ. ಸಿ. ಎನ್. ಮಂಜುನಾಥ್. ಹಾಸನದಿಂದ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ, ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ. ಮತ್ತೆ ಕುಮಾರಸ್ವಾಮಿ ಚಿಕ್ಕಬಳ್ಳಾಪುರದಿಂದ ಕಣಕ್ಕಿಳಿದರೆ ಕುಟುಂಬ ರಾಜಕಾರಣದ ಅಪವಾದ ಎದುರಿಸಬೇಕಾಗುತ್ತದೆ.
ಚಿಕ್ಕಬಳ್ಳಾಪುರದ ಹಾಲಿ ಸಂಸದರು ಬಿಜೆಪಿಯ ಬಿ. ಎನ್. ಬಚ್ಚೇಗೌಡ. ಆದರೆ ವಯೋಸಹಜ ಕಾರಣಕ್ಕೆ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದಿದ್ದು, ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಜೆಡಿಎಸ್ ಪ್ರಭಾವ ಇರುವ ಕಾರಣ ಕ್ಷೇತ್ರವನ್ನು ಪಕ್ಷಕ್ಕೆ ಬಿಟ್ಟುಕೊಡುವುದು ಅಮಿತ್ ಶಾ ಲೆಕ್ಕಾಚಾರವಾಗಿದೆ.












Click it and Unblock the Notifications