BJP Candidate List: ಲೋಕಸಭೆ ಚುನಾವಣೆಗೆ ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ್ಯಾರು? ಇಲ್ಲಿದೆ ಸಂಭವನೀಯ ಪಟ್ಟಿ
ಬೆಂಗಳೂರು, ಜನವರಿ 12: ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಕರ್ನಾಟಕ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಇತ್ತ ಹೀನಾಯವಾಗಿ ಸೋಲು ಕಂಡ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಾದೇಶಿಕ ಪಕ್ಷ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು, 28 ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕಮಲ-ದಳ ನಾಯಕರು ಹಲವು ತಂತ್ರಗಾರಿಕೆಯನ್ನ ನಡೆಸಿದ್ದಾರೆ.
ಹೌದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮುಂಬರುವ ಲೋಕಸಭೆ ಚುನಾವಣಾ ತಯಾರಿಯನ್ನ ಚುರುಕುಗೊಳಿಸಿದೆ. ಬಿಜೆಪಿಯಲ್ಲಿ ಹಿರಿಯ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಹಲವು ಹಿರಿಯವ ಮುಖಂಡರನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣಾ ತಯಾರಿ ಕುರಿತು ಗುರುವಾರ ಬಿಜೆಪಿ ಹಿರಿಯ ಮುಖಂಡರೆಲ್ಲರೂ ಸಭೆ ನಡೆಸಿದ್ದಾರೆ.

ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಅಭ್ಯರ್ಥಿಗಳ ಪಟ್ಟಿಯನ್ನು ಮಾಸಾಂತ್ಯದಲ್ಲಿಯೇ ಅಂತಿಮಗೊಳಿಸಲು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ. ಈ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಚುನಾವಣೆ ಎದುರಿಸಲು ಅನುಸರಿಸಬೇಕಾದ ಕಾರ್ಯತಂತ್ರಗಳು, ನಾಯಕರ ಸಮನ್ವಯತೆ ಕುರಿತು ಚರ್ಚೆ ನಡೆಸಲಾಗಿದೆ. ಇನ್ನೂ ಶೀಘ್ರದಲ್ಲಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಕುರಿತು ಹೈಕಮಾಂಡ್ ವರಿಷ್ಟರನ್ನ ಭೇಟಿ ಮಾಡುವುದಾಗಿ ಬಿ ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ. ಹಾಗಾದ್ರೆ, ಜೆಡಿಎಸ್ ಗೆ ಸಿಗುವ ಕ್ಷೇತ್ರಗಳು ಯಾವುವು? ಬಿಜೆಪಿಯಲ್ಲಿ ಯಾರಿಗೆ ಈ ಬಾರೀ ಟಿಕೆಟ್ ಸಿಗಬಹುದು ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಲೋಕಸಭಾ ಕ್ಷೇತ್ರಗಳ ಬಿಜೆಪಿ ಸಂಭವನೀಯ ಅಭ್ಯರ್ಥಿ ಇಲ್ಲಿದೆ
ಬೆಂಗಳೂರು ಕೇಂದ್ರ; ಪಿ ಸಿ ಮೋಹನ್
ತುಮಕೂರು: ವಿ ಸೋಮಣ್ಣ
ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ
ಬೆಂಗಳೂರು ಉತ್ತರ : ಡಿ ವಿ ಸದಾನಂದಗೌಡ
ಬೆಂಗಳೂರು ಗ್ರಾಮಾಂತರ: ಸಿ ಪಿ ಯೋಗೇಶ್ವರ್

ಮೈಸೂರು: ಪ್ರತಾಪ್ ಸಿಂಹ ಅಥವಾ ಯದುವೀರ್ ಒಡೆಯರ್
ಚಾಮರಾಜನಗರ: ಶ್ರೀನಿವಾಸ್ ಪ್ರಸಾದ್ ಅಳಿಯ ಡಾ. ಮೋಹನ್, ಕೊಳ್ಳಗಾಲ ಎನ್ ಮಹೇಶ್
ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ
ದಾವಣಗೆರೆ: ಜಿ ಎಂ ಸಿದ್ದೇಶ್ವರ್
ಶಿವಮೊಗ್ಗ: ಬಿ ವೈ ರಾಘವೇಂದ್ರ
ಹಾವೇರಿ: ಬಸವರಾಜ ಬೊಮ್ಮಾಯಿ, ಕೆ ಎಸ್ ಈಶ್ವರಪ್ಪ ಪುತ್ರ ಕಾಂತೇಶ್
ಚಿಕ್ಕಬಳ್ಳಾಪುರ: ಡಾ. ಕೆ ಸುಧಾಕರ್, ಅಲೋಕ್ ವಿಶ್ವನಾಥ್, ಎಂಟಿಬಿ ಪುತ್ರ ನಿತೀನ್ ಪುರುಷತ್ತಮ್
ಉತ್ತರ ಕನ್ನಡ: ಅನಂತ ಕುಮಾರ್ ಹೆಗ್ಡೆ, ವಿಶ್ವೇಶ್ವರ ಹೆಗಡೆ ಕಾಗೇರಿ
ದಕ್ಷಿಣ ಕನ್ನಡ: ನಳಿನ್ ಕುಮಾರ್ ಕಟೀಲ್
ಹುಬ್ಬಳ್ಳಿ-ಧಾರವಾಡ: ಪ್ರಹ್ಲಾದ್ ಜೋಶಿ
ಚಿತ್ರದುರ್ಗ: ಎ ನಾರಾಯಣಸ್ವಾಮಿ
ಬಾಗಲಕೋಟೆ: ಪಿ. ಸಿ. ಗದ್ದಿಗೌಡರ್
ಬಳ್ಳಾರಿ: ಶ್ರೀರಾಮುಲು
ಕೊಪ್ಪಳ: ಕರಡಿ ಸಂಗಣ್ಣ
ವಿಜಯಪುರ: ರಮೇಶ್ ಜಿಗಜಿಣಗಿ
ಕಲಬುರ್ಗಿ: ಉಮೇಶ್ ಜಾದವ್
ಬೆಳಗಾವಿ: ಮಂಗಳ ಸುರೇಶ್, ರಮೇಶ ಕತ್ತಿ
ಬೀದರ್;: ಭಗವಂತ್ ಖೂಬಾ
ಚಿಕ್ಕೋಡಿ: ಅಣ್ಣಾಸಾಹೇಬ ಜೊಲ್ಲೆ
ರಾಯಚೂರು : ರಾಜಾ ಅಮರೇಶ್ವರ
ಇನ್ನೂ ಬಿಜೆಪಿ ಜೊತೆಗೆ ಮೈತ್ರಿಯಿಂದ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಮೂರು ಕ್ಷೇತ್ರಗಳು ಕೈ ಸೇರಲಿದ್ದು, ಮಂಡ್ಯ, ಹಾಸನ ಹಾಗೂ ಕೋಲಾರ ದಳಪತಿಗಳ ತೆಕ್ಕೆಗೆ ಬರಲಿದೆ. ಈ ಮೂರು ಕ್ಷೇತ್ರಗಳ ಪೈಕಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರಾದ ಪ್ರಜ್ವಲ್ ರೇವಣ್ಣ ಅವರ ವಿರುದ್ಧವಾಗಿ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಸಿದ್ದಾರೆ.ಈ ಅಸಮಾಧಾನವನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಶಮನಗೊಳಿಸಿದ್ದಾರೆ ಎನ್ನಲಾಗಿದೆ. ಈ ಬಾರಿಯೂ ಸಹ ಹಾಸನ ಲೋಕಸಭ ಕ್ಷೇತ್ರದಿಂದ ಹಾಲಿ ಸಂಸದರಾದ ಪ್ರಜ್ವಲ್ ರೇವಣ್ಣ ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು ತಿಳಿಸಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ದಳಪತಿಗಳ ಕೈ ತಪ್ಪಿತ್ತು. ಹೀಗಾಗಿ ಮುಂದಿನ ಲೋಕಸಮರದಲ್ಲಿ ಮರಳಿ ಮಂಡ್ಯವನ್ನ ಪಡೆಯುವ ನಿಟ್ಟಿನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಹೆಚ್ ಡಿ ದೇವೇಗೌಡ್ರು ತಯಾರಿ ನಡೆಸಿದ್ದಾರೆ. ಇತ್ತ ಮಂಡ್ಯ ಕ್ಷೇತ್ರದಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈಗಾಗಲೇ ನಿಖಿಲ್ ಕುಮಾರಸ್ವಾಮಿ ಅವರು ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಇತ್ತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧೆಗೆ ಸಾಕಷ್ಟು ಒತ್ತಡ ಕೇಳಿ ಬಂದಿದ್ದು, ಮಂಡ್ಯ ಹಾಗೂ ಕೋಲಾರದಿಂದ ಅಭ್ಯರ್ಥಿ ಆಯ್ಕೆ ವಿಚಾರ ಇನ್ನು ಸ್ಪಷ್ಟವಾಗಿಲ್ಲ.
ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ನಾಯಕರು ಸಭೆ ನಡೆಸಿದ್ದು, ಸಭೆಯಲ್ಲಿ ಕೆಲವು ಹಾಲಿ ಸಂಸದರಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಪರ ವಿರೋಧಗಳು ಕೇಳಿ ಬಂದಿವೆ. ಬಹುತೇಕ 16 ರಿಂದ 18 ಮಂದಿ ಹಾಲಿ ಸಂಸದರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿದೆ ಎಂದು ಬಿಜೆಪಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.












Click it and Unblock the Notifications