Lok Sabha Election 2024: 28 ಕ್ಷೇತ್ರಗಳ ಪೈಕಿ ಈ ಎರಡು ಕ್ಷೇತ್ರದಿಂದ ಜೆಡಿಎಸ್ ಸ್ಪರ್ಧೆ ಫಿಕ್ಸ್: ಪ್ರಚಾರಕ್ಕೆ ಸಿದ್ದರಾದ್ರು
ಬೆಂಗಳೂರು, ಮಾರ್ಚ್ 05: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ರಣತಂತ್ರವನ್ನು ಹೆಣೆಯುತ್ತಿದೆ. ಇತ್ತ ಕಮಲ-ದಳ ನಾಯಕರಿಗೆ ಕ್ಷೇತ್ರ ಹಂಚಿಕೆ ದೊಡ್ಡ ಸವಾಲಗಿದ್ದು, ಬಿಜೆಪಿ ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ಎರಡು ಲೋಕಸಭಾ ಕ್ಷೇತ್ರದ ಪ್ರಚಾರಕ್ಕೆ ದಳಪತಿಗಳು ಮುಂದಾಗಿದ್ದಾರೆ.
ಹೌದು, ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ನಾಲ್ಕು ಕ್ಷೇತ್ರಗಳ ಕುರಿತು ಬಿಜೆಪಿ ಹೈಕಮಾಂಡ್ ನಾಯಕರ ಮುಂದೆ ಜೆಡಿಎಸ್ ನಾಯಕರು ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಳೆದು ಕೊಂಡ ಕ್ಷೇತ್ರವನ್ನ ಮರಳಿ ಪಡೆಯುವ ನಿಟ್ಟಿನಲ್ಲಿ ದಳಪತಿಗಳು ಮಾಸ್ಟರ್ ಪ್ಲಾನ್ ಹಾಕಿಕೊಂಡಿದ್ದು, ಇದೀಗ ಮಂಡ್ಯ ಮತ್ತು ಕೋಲಾರದಿಂದ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಲು ಜೆಡಿಎಸ್ ನಿರ್ಧರಿಸಿದೆ.

ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪಕ್ಷದ ವರಿಷ್ಠ ಎಚ್ಡಿ ದೇವೇಗೌಡರು, ಪಕ್ಷದ ಶಕ್ತಿ ಪ್ರದರ್ಶನಕ್ಕಾಗಿ ಎರಡೂ ಲೋಕಸಭೆ ಕ್ಷೇತ್ರಗಳಲ್ಲಿ ರ್ಯಾಲಿಗಳನ್ನು ಆಯೋಜಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿಯಂತೆ ಈ ಎರಡು ಸ್ಥಾನಗಳು ತನ್ನ ಪಾಲಾಗಬಹುದು ಎಂದು ಪ್ರಾದೇಶಿಕ ಪಕ್ಷ ನಿರೀಕ್ಷಿಸುತ್ತಿದೆ.
ಬಿಜೆಪಿಯಿಂದ ಕಣಕ್ಕಿಳಿದಿರುವ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ದೇವೇಗೌಡರು, ನಾವು ಸುಮ್ಮನಿರಲಾರೆವು, ನಮ್ಮ ಶಕ್ತಿ ಪ್ರದರ್ಶಿಸುವ ಸಮಯ ಬಂದಿದೆ, ಮಂಡ್ಯ ಕ್ಷೇತ್ರದ ಬಗ್ಗೆ ಅನಗತ್ಯ ಚರ್ಚೆ ನಡೆಯುತ್ತಿದೆ. ಅಲ್ಲಿ ನಮ್ಮ ಪಕ್ಷ ಬಲಿಷ್ಠವಾಗಿದೆ ಎಂದು ಕಿಡಿಕಾರಿದ್ದಾರೆ. ಇದೇ ತಿಂಗಳ 14 ಅಥವಾ 16ರಂದು ಕೋಲಾರದಲ್ಲಿ ಮೊದಲ ರ್ಯಾಲಿ ಆಯೋಜಿಸಲಾಗುವುದು. ಕೋಲಾರದಲ್ಲಿ ನಮ್ಮ ಶಕ್ತಿ ಹೆಚ್ಚಿದ್ದು, ಇದರಲ್ಲಿ ಯಾವುದೇ ಅನುಮಾನವಿಲ್ಲ, ನೀತಿ ಸಂಹಿತೆ ಯಾವಾಗ ಬೇಕಾದರೂ ಬರಬಹುದು ಮತ್ತು ನಾವು ಸಿದ್ಧರಾಗಿರಬೇಕು ಎಂದು ದೇವೇಗೌಡ್ರು ಹೇಳಿದ್ದಾರೆ.
ಈ ಬಾರಿ ಕೋಲಾರದಿಂದಲೇ ನಮ್ಮ ಲೋಕಸಭಾ ಪ್ರಚಾರ ಆರಂಭವಾಗಲಿದ್ದು, ನಮ್ಮ ಶಕ್ತಿಯನ್ನೂ ಸಾಬೀತುಪಡಿಸಬೇಕಾಗಿದೆ. ಬಿಜೆಪಿಯೊಂದಿಗಿನ ಸೀಟು ಹಂಚಿಕೆ ಬಗ್ಗೆ ಒಂದು ವಾರದಲ್ಲಿ ಎಲ್ಲವನ್ನೂ ಗೊತ್ತಾಗಲಿದೆ ಎಂದು ಹೇಳಿದರು. ಕುಮಾರಸ್ವಾಮಿ ಅವರು ಈಗಾಗಲೇ ಬಿಜೆಪಿ ಕೇಂದ್ರ ನಾಯಕರೊಂದಿಗೆ ಚರ್ಚಿಸಿದ್ದು, ಸೀಟು ಹಂಚಿಕೆ ಕುರಿತು ಅಂತಿಮ ಚಿತ್ರಣ ಇನ್ನೂ ಒಂದು ವಾರದಲ್ಲಿ ಹೊರಬೀಳಲಿದೆ ಎಂದು ಗೌಡರು ಹೇಳಿದ್ದಾರೆ.
ಪಕ್ಷವು ಮೈತ್ರಿ ತತ್ವಗಳನ್ನು ಉಳಿಸಿಕೊಳ್ಳಲಿದೆ ಎಂದು ಭರವಸೆ ನೀಡಿದ ಗೌಡರು, "ನಾವು ಮೈತ್ರಿ ತತ್ವಗಳಿಗೆ ಅಂಟಿಕೊಳ್ಳುತ್ತೇವೆ ಮತ್ತು ಎಲ್ಲಾ 28 ಸ್ಥಾನಗಳನ್ನು ಗೆಲ್ಲಲು ಬಿಜೆಪಿಯೊಂದಿಗೆ ಕೆಲಸ ಮಾಡುತ್ತೇವೆ" ಎಂದು ಹೇಳಿದರು. ನೀತಿ ಸಂಹಿತೆ ಪ್ರಕಟವಾದ ಕೂಡಲೇ ರಾಜ್ಯ ಪ್ರವಾಸ ಮಾಡುವುದಾಗಿಯೂ ಅವರು ಹೇಳಿದ್ದು, ಎಚ್ಡಿ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕತ್ವನಿರ್ಧರಿಸಲಿದೆ ಎಂದು ಗೌಡರು ಹೇಳಿದ್ದಾರೆ.












Click it and Unblock the Notifications