ಬಿಜೆಪಿಯಿಂದ ಘರ್ ವಾಪ್ಸಿ ಶುರು: ಶೆಟ್ಟರ್ ಬಳಿಕ ಕಮಲ ಪಕ್ಷ ಸೇರುವ ಕೈ ನಾಯಕ ಯಾರು ?
ಬೆಂಗಳೂರು, ಜನವರಿ 25 : ಲೋಕ ಸಭಾ ಚುನಾವಣೆ ಮುನ್ನವೇ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಂಚಲನವನ್ನು ಸೃಷ್ಟಿ ಮಾಡಿದ್ದು, ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ನಿಂದ ವಾಪಸ್ ಕರೆತರುವ ಮೂಲಕ ಬಿಜೆಪಿ ತೊರೆದು ಹೋದವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆಗೊಳಿಸುವ ಘರ್ ವಾಪ್ಸಿಗೆ ಚಾಲನೆ ನೀಡಿರುವುದು ಎದ್ದು ಕಾಣಿಸುತ್ತಿದ್ದು, ಇದು ಬಿಜೆಪಿ ಚುನಾವಣೆಯಲ್ಲಿ ಆಕ್ಟೀವ್ ಆಗಿದೆ ಎಂಬುದನ್ನು ತೋರಿಸುತ್ತಿದೆ.
ಬಿಜೆಪಿಗೆ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಅಷ್ಟೇ ಅಲ್ಲದೆ ಪಕ್ಷದಲ್ಲಿ ಹೊಸತೊಂದು ಅಲೆ ಶುರುವಾಗಿತ್ತು. ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿತ್ತಲ್ಲದೆ, ಕಾರ್ಯಕಾರಿ ಮಂಡಳಿಯಲ್ಲಿಯೂ ಪದಾಧಿಕಾರಿಗಳ ಬದಲಾವಣೆಗಳು, ಹೊಸಬರಿಗೆ ಅವಕಾಶಗಳನ್ನು ನೀಡಲಾಗಿತ್ತು.

ಪಕ್ಷದ ನಾಯಕರಲ್ಲಿದ್ದ ಅಸಮಾಧಾನವನ್ನು ಸರಿಪಡಿಸುವುದು. ಪಕ್ಷ ಬಿಟ್ಟು ಹೋದವರನ್ನು ಮರಳಿ ಕರೆ ತರುವುದು ಸೇರಿದಂತೆ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವುದು, ಮೌನಕ್ಕೆ ಶರಣಾಗಿರುವ ಕಾರ್ಯಕರ್ತರನ್ನು ಮತ್ತೆ ಸಕ್ರಿಯಗೊಳಿಸುವುದು ಹೀಗೆ ಹತ್ತಾರು ಸವಾಲುಗಳು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮುಂದಿತ್ತು. ಅದೆಲ್ಲವನ್ನು ನಿಭಾಯಿಸಲು ಅವರು ಮುಂದಾಗಿದ್ದಾರೆ ಎಂಬುದು ಈಗ ಗೊತ್ತಾಗುತ್ತಿದೆ.
ಬಿಜೆಪಿಯನ್ನು ಟೀಕಿಸುವ ಎಚ್.ವಿಶ್ವನಾಥ್
ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಸ್ವಪಕ್ಷದ ವಿರುದ್ಧ ಮಾತನಾಡುತ್ತಿದ್ದ ನಾಯಕರ ಮನವೊಲಿಸುವ ಕಾರ್ಯದಲ್ಲಿ ಸಫಲರಾದ ಕಾರಣದಿಂದ ಇತ್ತೀಚೆಗೆ ಪಕ್ಷದ ವಿರುದ್ಧ ಮಾತನಾಡುವ ನಾಯಕರ ಸಂಖ್ಯೆ ಕಡಿಮೆಯಾಗಿದೆ. ಸದ್ಯ ಎಚ್.ವಿಶ್ವನಾಥ್ ಹೊರತುಪಡಿಸಿದರೆ ಬೇರೆ ಯಾರೂ ಸದ್ಯ ಪಕ್ಷದ ವಿರುದ್ಧ ಯಾರೂ ಮಾತನಾಡಿದಂತೆ ಕಾಣಿಸುತ್ತಿಲ್ಲ. ಆದರೆ ಮೈಸೂರು ಭಾಗದಲ್ಲಿ ಎಚ್.ವಿಶ್ವನಾಥ್ ಅವರು ಬಿಜೆಪಿಯಿಂದ ವಿಧಾನಪರಿಷತ್ ಸದಸ್ಯ ಸ್ಥಾನವನ್ನು ಅಲಂಕರಿಸಿದ್ದಾರೆ. ಆದರೆ ಅವರ ಒಲವು ಕಾಂಗ್ರೆಸ್ ಕಡೆಗಿದೆ.
ರಾಜಕೀಯ ಮೂಲದ ಪ್ರಕಾರ ಎಚ್.ವಿಶ್ವನಾಥ್ ಅವರು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವ ಆಕಾಂಕ್ಷೆ ಹೊಂದಿದ್ದರು. ಹೀಗಾಗಿಯೇ ಅವರು ಅಧಿಕೃತವಾಗಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಳ್ಳದಿದ್ದರೂ ಸಮಯ ಸಿಕ್ಕಾಗಲೆಲ್ಲ ಕಾಂಗ್ರೆಸ್ ಪರ ಮಾತನಾಡುತ್ತಾ ಬಿಜೆಪಿಯನ್ನು ಚುಚ್ಚುತ್ತಿದ್ದರೂ ಈಗಲೂ ಅವರು ಸ್ಥಳೀಯ ರಾಜ್ಯ ನಾಯಕರನ್ನು ಟೀಕಿಸುವುದಕ್ಕಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರಮೋದಿಯನ್ನು ಟೀಕಿಸುತ್ತಿದ್ದಾರೆ.

ಕಾಂಗ್ರೆಸ್ಗೆ ಸೇರ್ಪಡೆಗೊಳಿಸುವ ಅಭಿಯಾನ
ಬಿಜೆಪಿಯ ಯಾವುದೇ ನಾಯಕರು ಎಚ್.ವಿಶ್ವನಾಥ್ ಅವರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅತ್ತ ಕಾಂಗ್ರೆಸ್ ನಾಯಕರು ಕೂಡ ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿಲ್ಲ. ಹೀಗಾಗಿ ಅವರ ಮುಂದಿನ ರಾಜಕೀಯ ತೀರ್ಮಾನವೇನು ಎಂಬುದು ಗೊತ್ತಾಗುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿ ಅಧಿಕಾರ ಹಿಡಿದ ಬಳಿಕ ಕೆಪಿಸಿಸಿ ಅಧ್ಯಕ್ಷರು ಮತ್ತು ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಮತ್ತು ಜೆಡಿಎಸ್ ನಲ್ಲಿದ್ದ ನಾಯಕರನ್ನು ಕಾಂಗ್ರೆಸ್ಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈಗಾಗಲೇ ಒಂದಷ್ಟು ನಾಯಕರನ್ನು ಕಾಂಗ್ರೆಸ್ ಗೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯೂ ಆಗಿದ್ದರು. ಜತೆಗೆ ಇನ್ನೊಂದಷ್ಟು ನಾಯಕರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನತ್ತ ಬರುತ್ತಾರೆ ಎಂಬ ಮಾತನ್ನು ತೇಲಿ ಬಿಟ್ಟಿದ್ದರು. ಅದು ಬಹಳ ದಿನಗಳವರೆಗೆ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೂ ಕಾರಣವಾಗಿತ್ತು. ಬಿಜೆಪಿ ಮತ್ತು ಜೆಡಿಎಸ್ ನಿಂದ ಶಾಸಕರು ಪಕ್ಷ ಬಿಟ್ಟು ಬರುತ್ತಾರೆ ಎಂಬ ಹೇಳಿಕೆಯನ್ನು ನೀಡುತ್ತಾ ಬಂದಿದ್ದರಲ್ಲದೆ,. ಅ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸದೃಢವಾಗಿದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗಿತ್ತು.
ಬಿಜೆಪಿಯ ಮುಂದಿನ ನಡೆ ಹೇಗಿರಬಹುದು?
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವು, ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ, ವಿಪಕ್ಷ ನಾಯಕರ ನೇಮಕ ಹೀಗೆ ಎಲ್ಲ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಹೊಸ ದಿಕ್ಕಿನ ಪಯಣಕ್ಕೆ ಹಾದಿ ತೋರಿಸಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಸದ್ಯ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಈ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಹೊಸ ದಾಳವನ್ನು ಎಸೆದಿದ್ದು ಅದು ಸಕ್ಸಸ್ ಆಗಿದೆ. ಚುನಾವಣೆಗೆ ಒಂದೆರಡು ತಿಂಗಳಷ್ಟೇ ಬಾಕಿಯಿದೆ. ಹೀಗಾಗಿ ಮುಂದಿನ ಬಿಜೆಪಿ ನಡೆ ಹೇಗಿರಬಹುದು ಎಂಬುದು ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.












Click it and Unblock the Notifications