ಕಾಪ್ಸ್ ಸಮೀಕ್ಷೆ : ರಾಜ್ಯದಲ್ಲಿ ಯಾರಿಗೆ ಗೆಲುವು, ಸೋಲು?
ಬೆಂಗಳೂರು, ಮೇ 12 : ಹದಿನಾರನೇ ಲೋಕಸಭೆ ಚುನಾವಣೆಗೆ ಒಂಬತ್ತನೇ ಮತ್ತು ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಒಂದರ ಹಿಂದೆ ಒಂದರಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳುತ್ತಿವೆ. ಬಹುತೇಕ ಎಲ್ಲ ಸಮೀಕ್ಷೆಗಳು ಕೇಂದ್ರದಲ್ಲಿ ಎನ್ಡಿಎ ಮೈತ್ರಿಕೂಟ ಜಯಭೇರಿ ಬಾರಿಸುತ್ತದೆ ಎಂದು ಹೇಳುತ್ತಿವೆ.
ಆದರೆ, ಕರ್ನಾಟಕದ ಮತದಾರರ ಕಣ್ಣು ಮಾತ್ರ ಇಡೀ ದೇಶದ ಚುನಾವಣಾ ಫಲಿತಾಂಶದ ಜೊತೆಗೆ ರಾಜ್ಯದಲ್ಲಿ ಯಾವ ಪಕ್ಷ ಹೆಚ್ಚಿನ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂಬುದರತ್ತ ನೆಟ್ಟಿದೆ. ಏಕೆಂದರೆ, ಕರ್ನಾಟಕದ 28 ಕ್ಷೇತ್ರಗಳು ಕೂಡ ಕೇಂದ್ರದಲ್ಲಿ ಸರಕಾರ ರಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.
(ರಾಜದೀಪ್ ಸರ್ದೇಸಾಯಿ ಚಾನೆಲ್ ಏನು ಹೇಳುತ್ತದೆ?)
ಕಾಪ್ಸ್ (COPS) ಸಂಸ್ಥೆ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಅತಿ ಹೆಚ್ಚು ಅಂದರೆ 14 ಸೀಟುಗಳನ್ನು ಗೆಲ್ಲಲಿದ್ದರೆ, ಕಾಂಗ್ರೆಸ್ 10 ಮತ್ತು ಜೆಡಿಎಸ್ 4 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ. ಕಳೆದ 2009ರ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಬಿಜೆಪಿ ಗಳಿಸುವ ಸ್ಥಾನಗಳಲ್ಲಿ ಕಡಿಮೆಯಾಗಿದ್ದರೆ, ಕಾಂಗ್ರೆಸ್ ನಾಲ್ಕು ಸೀಟುಗಳನ್ನು ಏರಿಸಿಕೊಂಡಿದೆ.
ಜನರೇ ನೀಡಿರುವ ತೀರ್ಪನ್ನು ನೋಡಿದರೆ ಕೆಲವೊಂದು ಕ್ಷೇತ್ರಗಳಲ್ಲಿ ನರೇಂದ್ರ ಮೋದಿ ಅಲೆ ಕೆಲಸ ಮಾಡಿದ್ದರೆ, ಹಲವಾರು ಕಡೆಗಳಲ್ಲಿ ಕೆಲಸ ಮಾಡಿಲ್ಲದಿರುವುದು ಕಂಡುಬರುತ್ತದೆ. ಹಾಗಾದರೆ, ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು, ಯಾರು ಸೋಲಬಹುದು? ಯಾರು ಮೀಸೆ ತಿರುವಲಿದ್ದಾರೆ, ಯಾರ ಮೀಸೆ ಮಣ್ಣಾಗಲಿದೆ?

ಬೆಂಗಳೂರು ಉತ್ತರದಲ್ಲಿ ಸದಾನಂದ ಗೌಡ ಗೆಲುವು
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಹೊರಗಿನವರು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದರೂ ನರೇಂದ್ರ ಮೋದಿ ಅಲೆಯ ಕೃಪೆಯಿಂದಾಗಿ ಸದಾನಂದ ಗೌಡರು ಜಯಭೇರಿ ಬಾರಿಸುವ ಸಂಭವನೀಯತೆಯಿದೆ.

ಬೆಂಗಳೂರು ದಕ್ಷಿಣದಲ್ಲಿ ಅನಂತ್ ಕುಮಾರ್ ಸಿಕ್ಸರ್
ಸಮೀಕ್ಷೆ ನಿಜವಾದರೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಅನಂತ್ ಕುಮಾರ್ ಅವರು 6ನೇ ಬಾರಿ ಸಂಸತ್ ಪ್ರವೇಶಿಸುವುದು ಖಚಿತ. ನಂದನ್ ನಿಲೇಕಣಿಗೆ ನಿರಾಶೆ ಆಗುವುದು ದಿಟ.

ಬೆಂಗಳೂರು ಕೇಂದ್ರದಲ್ಲಿ ಅಚ್ಚರಿ ಫಲಿತಾಂಶ
ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಹಾಲಿ ಸಂಸದರಾಗಿರುವ ಬಿಜೆಪಿಯ ಪಿಸಿ ಮೋಹನ್ ಸೋತು, ಕಾಂಗ್ರೆಸ್ ಪಕ್ಷದ ಯುವ ನಾಯಕ ರಿಜ್ವಾನ್ ಅರ್ಷದ್ ಗೆಲ್ಲುವ ಸಾಧ್ಯತೆಯಿದೆ ಎಂದಿದ್ದಾರೆ ಮತದಾರರು.

ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಜಯಭೇರಿ
ಕಳೆದ ಚುನಾವಣೆಯಲ್ಲಿ ಮೊದಲ ಬಾರಿಗೇ ಗೆದ್ದಿದ್ದ ಕಾಂಗ್ರೆಸ್ಸಿನ ಡಿಕೆ ಸುರೇಶ್ ಅವರನ್ನು ಸೋಲಿಸಲಾಗದೆ ಆಪ್ ಪಕ್ಷದ ರವಿ ಕೃಷ್ಣಾ ರೆಡ್ಡಿ ನೀರು ಕುಡಿಯುವುದು ಗ್ಯಾರಂಟಿ ಎನ್ನುತ್ತದೆ ಸಮೀಕ್ಷೆ.

ಮೈಸೂರಿನಲ್ಲಿ ಘರ್ಜಿಸಲಿದೆಯಾ ಪ್ರತಾಪ್ ಸಿಂಹ?
ನಾಯಿ ನರಿ ಎಂದೆಲ್ಲ ಕಿತ್ತಾಡಿಕೊಂಡಿದ್ದ ಹಾಲಿ ಸಂಸದ ಕಾಂಗ್ರೆಸ್ ನಾಯಕ ವಿಶ್ವನಾಥ್ ಮತ್ತು ಡೆಬ್ಯೂಟೆಂಟ್ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ನಡುವಿನ ಕಾಳಗದಲ್ಲಿ ಯಾರಿಗೆ ಗೆಲುವು? ಪ್ರತಾಪ್ ಸಿಂಹ? ವೇಟ್ ಅಂಡ್ ವಾಚ್!

ರಮ್ಯಾ ಸಾಕಪ್ಪಾ ಸಾಕು ಅಂದುಬಿಡ್ತಾ ಮಂಡ್ಯ?
ಮತ್ತೊಂದು ಬಾರಿ ಸಂಸತ್ತು ಪ್ರವೇಶಿಸುವ ಹುಮ್ಮಸ್ಸಿನಲ್ಲಿ ಭಾರೀ ಪ್ರಚಾರ ಕೈಗೊಂಡಿದ್ದ ನಟಿ ರಮ್ಯಾಗೆ ಈ ಬಾರಿ ಕೈಕೊಟ್ಟಿದ್ದಾರಾ ಮಂಡ್ಯದ ಜನತೆ. ಸಮೀಕ್ಷೆ ಹೇಳತ್ತೆ, ಈ ಬಾರಿ ಅವರ ಬಾಯಿಗೆ ಕಹಿ, ಜೆಡಿಎಸ್ ಮುಖಂಡ ಸಿಎಸ್ ಪುಟ್ಟರಾಜು ಬಾಯಿಗೆ ಸಕ್ಕರೆ!

ದಾವಣಗೆರೆಯಲ್ಲಿ ಸಿದ್ದರಾಜುವಿಗೆ ಬೆಣ್ಣೆದೋಸೆ
ದಾವಣಗೆರೆಯಲ್ಲಿ ಬಿಜೆಪಿಯ ಸಿದ್ದರಾಜು ಮತ್ತು ಕಾಂಗ್ರೆಸ್ ನ ಮಲ್ಲಿಕಾರ್ಜುನ ನಡುವೆ ಟ್ವೆಂಟಿ20 ಮ್ಯಾಚ್ ನಡೆದಿತ್ತು. ಇವರಿಬ್ಬರ ನಡುವೆ ಸಿದ್ದರಾಜು ಹೆಚ್ಚು ಸಿಕ್ಸರ್ ಹೊಡೆದಿದ್ದಾರೆ ಅಂತ ಕಾಣತ್ತೆ, ನೋಡೋಣ.

ಚಿತ್ರದುರ್ಗದಲ್ಲಿ ಸ್ವಾಮಿಗೆ ಕೋಟೆ ಬಾಗಿಲು ಮುಚ್ಚಲಿದೆಯಾ
ಚಿತ್ರದುರ್ಗದಲ್ಲಿ ಅಮೆರಿಕಾ ರಿಟರ್ನ್ಡ್ ಜನಾರ್ದನ ಸ್ವಾಮಿ ನಿಜಕ್ಕೂ ಜನ ಮೆಚ್ಚುವಂತೆ ಕೆಲಸ ಮಾಡಿದ್ದಾರಾ? ಆದರೂ ಜನರು ಒಲವೇಕೆ ಕಾಂಗ್ರೆಸ್ಸಿನ ಚಂದ್ರಪ್ಪ ಕಡೆಗೆ ತೋರಿಸುತ್ತಾರೆ ಎಂದು ಸಮೀಕ್ಷೆ ಹೇಳುತ್ತಿರುವುದೇಕೋ?

ರೈಲು ಮಿಸ್ ಮಾಡ್ಕೋತಾರಾ ಮುನಿಯಪ್ಪ?
ಗೆದ್ದೇ ಗೆಲ್ಲುವೆನೆಂಬ ವಿಶ್ವಾಸದಲ್ಲಿರುವ ಕೇಂದ್ರ ಸಚಿವ ಕೋಲಾರದ ಹಾಲಿ ಸಂಸದ ಕೋಲಾರದ ಕೆಎಚ್ ಮುನಿಯಪ್ಪ ಈ ಬಾರಿ ರೈಲು ಮಿಸ್ ಮಾಡ್ಕೋತಾರೆ ಅಂತಾರೆ ಜನರು. ನೀವೇನಂತೀರಿ?

ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿ ಗೆಲುವು ನಿಶ್ಚಿತ
ಹಳೆ ಹುಲಿ ಕಾಂಗ್ರೆಸ್ ನಾಯಕ ಡಾ. ವೀರಪ್ಪ ಮೋಯ್ಲಿ, ಬಿಜೆಪಿಯ ಬಿಎನ್ ಬಚ್ಚೇಗೌಡ ಅವರನ್ನು ಹಿಂದಿಕ್ಕಿ ಜೆಡಿಎಸ್ಸಿನ ಎಚ್ ಡಿ ಕುಮಾರಸ್ವಾಮಿ ಗೆಲ್ತಾರಂತೆ ಸಮೀಕ್ಷೆ ಹೇಳಿದೆ. ಗೆದ್ದರೂ ಸರಿ, ಆದರೆ ಮತ್ತೆ ರಾಜೀನಾಮೆ ನೀಡುವುದು ಬೇಡ.

ಶಿವಮೊಗ್ಗದಲ್ಲಿ ಯಡಿಯೂರಪ್ಪನೇ ಕಿಂಗ್?
ಗೀತಾ ಶಿವರಾಜ್ ಕುಮಾರ್ ಅವರನ್ನು ಮುಂದಿಟ್ಟುಕೊಂಡು ಜೆಡಿಎಸ್ ಯಡಿಯೂರಪ್ಪ ವಿರುದ್ಧ ಯುದ್ಧ ಮಾಡಿತ್ತಾದರೂ, ಮೋದಿ ಅಲೆಯ ಮೇಲೆ ತೇಲಿದ ಮತದಾರರು ಯಡಿಯೂರಪ್ಪನವರಿಗೆ ಸಿಹಿ ಮೊಗೆದು ಕೊಡಲಿದ್ದಾರೆ ಅನ್ನುತ್ತದೆ ಸಮೀಕ್ಷೆ. ಗೆಲುವು ಯಾರಿಗೆ? ಯಡಿಯೂರಪ್ಪನವರಿಗೋ, ಗೀತಾಗೋ?

ಉಡುಪಿ-ಚಿಕ್ಕಮಗಳೂರಿನಲ್ಲಿ ಶೋಭಾ ಜಯಭೇರಿ
ಒಲ್ಲದ ಮನಸ್ಸಿನಿಂದ ಉಡುಪಿ-ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಶೋಭಾ ಕರಂದ್ಲಾಜೆ ಕಾಂಗ್ರೆಸ್ ನ ಜಯಪ್ರಕಾಶ್ ಹೆಗಡೆ ಅವರಿಗೆ ಅಚ್ಚರಿಯ ಸೋಲು ಉಣ್ಣಿಸುತ್ತಾರೆ ಅನ್ನತ್ತೆ ಸಮೀಕ್ಷೆ. ಗುಡ್ ಲಕ್.

ದಕ್ಷಿಣ ಕನ್ನಡದಲ್ಲಿ ಪೂಜಾರಿಗೆ ಒಲಿದ ಮತದೇವರು?
ದಕ್ಷಿಣ ಕನ್ನಡದಲ್ಲಿ ಪೂಜಾರಿ ಗೆಲ್ತಾರೆ, ನಳಿನ್ ಕುಮಾರ್ ಕಟೀಲ್ ಸೋಲ್ತಾರೆ ಅಂತ ಸಮೀಕ್ಷೆ ಹೇಳಿದರೆ ಕಟೀಲ್ ಅಭಿಮಾನಿಗಳು ಒಪ್ಪಿಕೊಳ್ಳಲು ತಯಾರಿಲ್ಲ. ದೇವರು ಯಾರ ಪರವಾಗಿದ್ದಾನೋ?

ಧಾರವಾಡದಲ್ಲಿ ಪ್ರಹ್ದಾದ್ ಜೋಶಿ ಬಾಯಿಗೆ ಪೇಡೆ?
ಧಾರವಾಡದಾಗ ಬಿಜೆಪಿಯ ಅಭ್ಯರ್ಥಿ, ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ದಾದ್ ಜೋಶಿ ಬಾಯಿಗೆ ಪೇಡೆ ಬೀಳ್ತದೇನ್ರೀ ಸಾಹೇಬ್ರ?
ಉಳಿದ ಸಂಭಾವ್ಯ ವಿಜೇತರ ಹೆಸರುಗಳು ಕೆಳಗಿನಂತಿವೆ
ತುಮಕೂರು - ಬಸವರಾಜು, ಬಿಜೆಪಿ
ಚಾಮರಾಜನಗರ - ಧ್ರುವನಾರಾಯಣ, ಕಾಂಗ್ರೆಸ್
ಬೆಳಗಾವಿ - ಲಕ್ಷ್ಮೀ ಹೆಬ್ಬಾಳ್ಕರ್, ಕಾಂಗ್ರೆಸ್
ಬಿಜಾಪುರ - ರಮೇಶ್ ಜಿಗಜಿಣಗಿ, ಬಿಜೆಪಿ
ರಾಯಚೂರು - ಬಿವಿ ನಾಯಕ್, ಕಾಂಗ್ರೆಸ್
ಕೊಪ್ಪಳ - ಸಂಗಣ್ಣ ಕರಡಿ, ಬಿಜೆಪಿ
ಬಾಗಲಕೋಟೆ - ಅಜಯ್ ಕುಮಾರ್, ಕಾಂಗ್ರೆಸ್
ಬೀದರ್ - ಧರಂ ಸಿಂಗ್, ಕಾಂಗ್ರೆಸ್
ಗುಲಬರ್ಗ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್
ಹಾವೇರಿ - ಶಿವಕುಮಾರ್ ಉದಾಸಿ, ಬಿಜೆಪಿ
ಉತ್ತರ ಕನ್ನಡ - ಅನಂತ್ ಕುಮಾರ್ ಹೆಗಡೆ, ಬಿಜೆಪಿ
ಹಾಸನ - ದೇವೇಗೌಡ, ಜೆಡಿಎಸ್
ಬಳ್ಳಾರಿ - ಶ್ರೀರಾಮುಲು, ಬಿಜೆಪಿ
ಚಿಕ್ಕೋಡಿ - ರಮೇಶ್ ಕತ್ತಿ, ಬಿಜೆಪಿ












Click it and Unblock the Notifications