ಮೈಸೂರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಆಸ್ತಿ ವಿವರ ಘೋಷಣೆ
ಬೆಂಗಳೂರು, ಮಾರ್ಚ್ 20: ಮುಂದಿನ ಏಪ್ರಿಲ್ 17ರಂದು ರಾಜ್ಯದ 28 ಲೋಕಸಭಾ ಕ್ಷೇತ್ರಗಳ ನಡೆಯುವ ಚುನಾವಣೆಗಾಗಿ ಮೊದಲ ದಿನವಾದ ನಿನ್ನೆ ಬುಧವಾರ 'ಶುಭವಾ' ಎಂದು 22 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಚುನಾವಣೆ ಪ್ರಕ್ರಿಯೆಯ ಈ ಹಂತದಲ್ಲಿ ಇನ್ನು ಅಭ್ಯರ್ಥಿಗಳ ಆಸ್ತಿಪಾಸ್ತಿ ವಿವರಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಯಾವ ಅಭ್ಯರ್ಥಿಯ ಬಳಿ ಎಷ್ಟು ಹಣ/ ಆಸ್ತಿ ಇದೆ ಎಂದು ಜನ ಕುತೂಹಲಿಗಳಾಗಿ ತಿಳಿದುಕೊಳ್ಳಲು ಬಯಸುತ್ತಾರೆ. ಜನರ ಈ ಕುತೂಹಲ ತಣಿಸಲೆಂದೇ ನಿನ್ನೆ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಒಂದಷ್ಟು ಮಂದಿಯ ಆಸ್ತಿ ಅಫಿಡವಿಟ್ ವಿವರ ಇಲ್ಲಿದೆ. ನಾಮಪತ್ರ ಸಲ್ಲಿಕೆಗೆ ಇನ್ನೂ ಆರು ದಿನ ಕಾಲಾವಕಾಶ ಇದೆ. ಘಟಾನುಘಟಿಗಳು ಇನ್ನೂ ತಮ್ಮ ಸುಸಮಯ ನೋಡಿಕೊಂಡು ನಾಪಪತ್ರ ಸಲ್ಲಿಸಲಿದ್ದಾರೆ.
ಪ್ರಮುಖವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ (ಕೋಲಾರ ಮೀಸಲು), ಬಿಜೆಪಿಯಿಂದ ಅನಂತಕುಮಾರ್ (ಬೆಂಗಳೂರು ದಕ್ಷಿಣ), ಶೋಭಾ ಕರಂದ್ಲಾಜೆ (ಉಡುಪಿ-ಚಿಕ್ಕಮಗಳೂರು), ಜೆಡಿಎಸ್ ರಾಜ್ಯಾಧ್ಯಕ್ಷ ಎ ಕೃಷ್ಣಪ್ಪ (ತುಮಕೂರು), ಬಿಜೆಪಿಯ ಪಿಸಿ ಮೋಹನ್ (ಬೆಂಗಳೂರು ಕೇಂದ್ರ), ಕಾಂಗ್ರೆಸ್ಸಿನ ವಿ ಮಂಜುನಾಥ ಭಂಡಾರಿ (ಶಿವಮೊಗ್ಗ) ಅವರು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಬಾಗಲಕೋಟೆ ಕ್ಷೇತ್ರದದಿಂದ ನಿವೃತ್ತ ಡಿಐಜಿ ಶಂಕರ ಮಹಾದೇವ ಬಿದರಿ, ಹಾಸನದಿಂದ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಕಣಕ್ಕೆ ಇಳಿದಿದ್ದಾರೆ.

ಮೈಸೂರು ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಆಸ್ತಿ ವಿವರ ಘೋಷಣೆ
ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ: ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಅವರ ಆಸ್ತಿ ವಿವರ ಹೀಗಿದೆ.
* 2012-13 ಸಾಲಿನ ವಾರ್ಷಿಕ ಆದಾಯ: 7,62,389 ರೂ.
* ಪ್ರಸ್ತುತ ಕೈಯಲ್ಲಿರುವ ನಗದು: 30,000 ರೂ. ಪತ್ನಿ ಅರ್ಪಿತಾರ ಬಳಿ 5,000 ರೂ. ಇದೆ.
* ಕರ್ನಾಟಕ ಪತ್ರಕರ್ತರ ಸಂಘದಲ್ಲಿ ಷೇರು ಧನ ಇತ್ಯಾದಿ 23,800 ರೂ.
* ವಿವಿಧ ಬ್ಯಾಂಕ್ ಖಾತೆಯಲ್ಲಿ ಸುಮಾರು 30,000 ರೂ. ಪತ್ನಿಯ ಬ್ಯಾಂಕ್ ಖಾತೆಯಲ್ಲಿ 2,700 ರೂ.
* ಬಾಡಿಗೆ ಮನೆಗೆ ನೀಡಿರುವ ಅಡ್ವಾನ್ಸ್ 70,000 ರೂ.
* ಹುಂಡೈ ಕಾರು ಮೌಲ್ಯ - 5.3 ಲಕ್ಷ ರೂ, ಮಾರುತಿ ಕಾರು ಮೌಲ್ಯ - 90,000 ರೂ, 1 ಬೈಕು ಮೌಲ್ಯ - 12,000 ರೂ.
* ಪತ್ನಿಯ ಬಳಿಯಿರುವ ಚಿನ್ನಾಭರಣದ ಮೌಲ್ಯ 7.25 ಲಕ್ಷ ರೂ.*
* ಬೆಂಗಳೂರು ಹೊಸಕರೆಹಳ್ಳಿಯಲ್ಲಿರುವ 30x50 ನಿವೇಶನದ ಮೌಲ್ಯ (ಖರೀದಿ ಸಮಯದಲ್ಲಿ) 43 ಲಕ್ಷ ರೂ. ಮೈಸೂರಿನ ವಿಜಯನಗರದಲ್ಲಿ ಪತ್ನಿಯ ಹೆಸರಲ್ಲಿರುವ 60X40 ನಿವೇಶನದ ಮೌಲ್ಯ 2.46 ಲಕ್ಷ ರೂಪಾಯಿ(ಖರೀದಿ ಸಮಯದಲ್ಲಿ).
* ವಿವಿಧ ಬ್ಯಾಂಕ್/ ಸೊಸೈಟಿಗಳಲ್ಲಿರುವ ವೈಯಕ್ತಿಕ ಸಾಲ 17.62 ಲಕ್ಷ ರೂಪಾಯಿ

ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ
ಅನೇಕ ಬಾರಿ ಸಂಸದರಾಗಿರುವ/ ಸಚಿವ ಸ್ಥಾನವನ್ನೂ ಅನುಭವಿಸಿರುವ ಕೆಎಚ್ ಮುನಿಯಪ್ಪನವರು ತಮ್ಮ ಪತ್ನಿಯಿಂದಲೇ ಸಾಲ ಪಡೆದಿದ್ದಾರೆ. ಪತ್ನಿ ನಾಗರತ್ಮಮ್ಮ ಅವರಿಂದ 14.14 ಲಕ್ಷ ರೂ. ಸಾಲ ಪಡೆದಿರುವುದಾಗಿ ನಾಮಪತ್ರದೊಂದಿಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಅವರು ಹೇಳಿಕೊಂಡಿದ್ದಾರೆ. ಎರಡು ಬ್ಯಾಂಕುಗಳಿಂದ 2.25 ಕೋಟಿ ರೂ ಸಾಲ ಎತ್ತಿದ್ದಾರೆ.
ಆದಾಯದಲ್ಲೂ ಮುನಿಯಪ್ಪಗಿಂತ ಪತ್ನಿ ನಾಗರತ್ನಮ್ಮ ಅವರದೇ ಮೇಲುಗೈ. ಮುನಿಯಪ್ಪ ಅವರ ಕಳೆದ ವರ್ಷ ನಾನಾ ಮೂಲಗಳಿಂದ 23.15 ಲಕ್ಷ ರೂ. ಆದಾಯ ಗಳಿಸಿದರೆ. ಅವರ ಪತ್ನಿ ನಾಗರತ್ನಮ್ಮ 50.87 ಲಕ್ಷ ರೂ. ಆದಾಯ ಪಡೆದಿದ್ದಾರೆ.
ತಮ್ಮ ಹೆಸರಲ್ಲಿ 4.40 ಕೋಟಿ ರೂ. ಹಾಗೂ ಪತ್ನಿಯ ಹೆಸರಿನಲ್ಲಿ 11.11 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಅಂದರೆ ಸ್ವಂತವಾಗಿ 28.78 ಲಕ್ಷ ರೂ. ನಗದು, ಪತಿಯ ಬಳಿ 1.7 ಲಕ್ಷ ರೂ. ನಗದು ಇದೆ. ಸ್ವಂತ ಉಳಿತಾಯ ಖಾತೆಯಲ್ಲಿ 6.51 ಲಕ್ಷ ರೂ, ಪತ್ನಿಯ ಖಾತೆಯಲ್ಲಿ 10 ಸಾವಿರ ರೂ. ನಗದು ಇದೆ. ದಂಪತಿ ಸುಮಾರು 1 ಕೋಟಿಯಷ್ಟು ಇತರೆ ಕಡೆ ಹೂಡಿಕೆ ಮಾಡಿದ್ದಾರೆ. ಮುನಿಯಪ್ಪ ಅವರ ಬಳಿ ಫೊರ್ಡ್ ಕಾರ್, 30 ಎಕರೆ ಜಮೀನು ಇದೆ.

25 ಕೋಟಿ ಆಸ್ತಿಯ ಒಡೆಯ ಸಿ ಮೋಹನ್:
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಅವರು 25.31 ಕೋಟಿ ರೂ. ಮೌಲ್ಯ ಆಸ್ತಿಯ ಒಡೆಯರು. ಪತ್ನಿ ಶೈಲಾ ಹೆಸರಲ್ಲಿ 13.19 ಲಕ್ಷ ರೂ. ಮಗಳು ರಿತಿಕಾ ಹೆಸರಲ್ಲಿ 3.11 ಲಕ್ಷ ರೂ, ಮಗ ರಿತೀನ್ ಹೆಸರಲ್ಲಿ 3.51 ಲಕ್ಷ ರೂ. ಹಾಗೂ 3ನೇ ಅವಲಂಬಿತರ ಹೆಸರಲ್ಲಿ 93.35 ಲಕ್ಷ ರೂ. ಮೌಲ್ಯದ ಆಸ್ತಿ ಇದೆ. ಜತೆಗೆ, ಮೋಹನ್ 3.74 ಕೋಟಿ ರೂ. ಮತ್ತು ಪತ್ನಿ 2.71 ಕೋಟಿ ರೂ. ಸಾಲ ಮಾಡಿಕೊಂಡಿದ್ದಾರೆ.
5.58 ಲಕ್ಷ ರೂ. ನಗದು ಹೊಂದಿರುವ ಮೋಹನ್ ಅವರು, 9.92 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನ, 1.40 ರೂ. ಮೌಲ್ಯದ ಮೂರು ಕೆಜಿ ಬೆಳ್ಳಿ ಹೊಂದಿದ್ದಾರೆ. ಬೆಂಗಳೂರಿನ ಕೆಲವೆಡೆ ಇಬ್ಬರ ಹೆಸರಲ್ಲಿ ತಲಾ 2 ಕೋಟಿ ರೂ. ಮೌಲ್ಯದ ವಸತಿ ಕಟ್ಟಡಗಳಿವೆ. (ಮೋಹನ್ ವೆಬ್ ಸೈಟ್)

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಶೋಭಾ ಆಸ್ತಿಯೆಷ್ಟು?
ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಒಟ್ಟು ಸುಮಾರು 5.1 ಕೋಟಿ ರೂ. ಆಸ್ತಿವಂತರು. ಜತೆಗೆ, 3.81 ಕೋಟಿ ರೂ. ಸಾಲವನ್ನೂ ಹೊಂದಿದ್ದಾರೆ.
ನಗದು 1.76 ಲಕ್ಷ ರೂ, 25 ಲಕ್ಷ ರೂ ಮೌಲ್ಯದ ಎರಡು ಕಾರು, 1 ಕೆಜಿ ಚಿನ್ನ, 10 ಲಕ್ಷ ರೂ ಮೌಲ್ಯದ ಬೆಳ್ಳಿ, ಚಿನ್ನಾಭರಣವೂ ಇದೆ. ಕಾರು ಖರೀದಿಗೆ 14 ಲಕ್ಷ ರೂ ಸಾಲ ಸೇರಿದಂತೆ ಒಟ್ಟಾರೆಯಾಗಿ 3.66 ಕೋಟಿ ರೂ ಸಾಲವಂತರು.

ಅನಂತ್ ಹೆಸರಿನಲ್ಲಿ 41 ಲಕ್ಷ, ತೇಜಸ್ವಿನಿ ಬಳಿ 68.32 ಲಕ್ಷ ರೂ.
ಪತಿಗಿಂತ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರೇ ಹೆಚ್ಚು ಶ್ರೀಮಂತರು! ಅನಂತ್ ಹೆಸರಲ್ಲಿ ಕೇವಲ 41.45 ಲಕ್ಷ ರೂ. ಆಸ್ತಿ ಇದೆ. ಅದೇ ಪತ್ನಿ ತೇಜಸ್ವಿನಿ 68.32 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಮಗಳು ವಿಜೇತಾ ಹೆಸರಲ್ಲಿಯೂ 13.81 ಲಕ್ಷ ರೂ. ಆಸ್ತಿ ಇದೆ. ಇಂರಟೆಸ್ಟಿಂಗ್ ಅಂದರೆ ಅನಂತಕುಮಾರ್ ಬಳಿ ರೇವಾ ಕಾರಿದೆ. ಅದೇ ತೇಜಸ್ವಿನಿ ಅವರ ಬಳಿ ಮೂರು ಕಾರು ಇವೆ.
ಅನಂತಕುಮಾರ್ ಬಳಿ 1.41 ಲಕ್ಷ ರೂ. ಮೌಲ್ಯದ 50 ಗ್ರಾಂ ಚಿನ್ನ ಹಾಗೂ 75 ಸಾವಿರ ರೂ. ನಗದು ಇದೆ ಅಷ್ಟೇ! ತೇಜಸ್ವಿನಿ ಅವರ ಬಳಿ 21.26 ಲಕ್ಷ ರೂ. ಮೌಲ್ಯದ 750 ಗ್ರಾಂ ಚಿನ್ನ ಹಾಗೂ 4.68 ಲಕ್ಷ ರೂ. ಮೌಲ್ಯದ 10 ಕೆಜಿ ಬೆಳ್ಳಿ ಇದೆ. ಪುತ್ರಿ ವಿಜೇತಾ ಬಳಿ 9.42 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ. ಪತ್ನಿ ತೇಜಸ್ವಿನಿಗೆ ಅನಂತ್ 10 ಲಕ್ಷ ರೂ. ಸಾಲ ನೀಡಿದ್ದಾರೆ. ತೇಜಸ್ವಿನಿ ಅವರು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ 1.20 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಮತ್ತು ಅನಂತ್ 9.67 ಲಕ್ಷ ರೂ. ಮೌಲ್ಯದ ವಸತಿ ಕಟ್ಟಡ ಹೊಂದಿದ್ದಾರೆ.

ರಾಹುಕಾಲದಲ್ಲಿ ಜೆಡಿಎಸ್ ಅಭ್ಯರ್ಥಿ ಎ ಕೃಷ್ಣಪ್ಪ ನಾಮಪತ್ರ
ತುಮಕೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಎ ಕೃಷ್ಣಪ್ಪ ಅವರು ಬುಧವಾರ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದರು. ಕೃಷ್ಣಪ್ಪ ಅವರಿಗೆ ಪಿತ್ರಾರ್ಜಿತವಾಗಿ 4.70 ಕೋಟಿ ರೂ. ಮೌಲ್ಯದ ಆಸ್ತಿ ಬಂದಿದ್ದು, ತಾವೂ 25 ಕೋಟಿ ರೂ. ಮೌಲ್ಯದ ಆಸ್ತಿ ಗಳಿಸಿದ್ದಾರೆ. ಹಾಗೆಯೇ, ಇವರ ಪತ್ನಿ ಮಂಜುಳಾ ಅವರಿಗೆ ಪಿತ್ರಾರ್ಜಿತವಾಗಿ 7.20 ಕೋಟಿ ರೂ. ಮೌಲ್ಯದ ಆಸ್ತಿ ಬಂದಿದೆ. ಕೃಷ್ಣಪ್ಪ ಅವರು ಈಸ್ಟ್ ವೆಸ್ಟ್ ಏಷ್ಯಾ ಶಿಕ್ಷಣ ಸಂಸ್ಥೆಯ ಮಾಲೀಕರು.
ಕೃಷ್ಣಪ್ಪ ಅವರು 9.93 ಕೋಟಿ ರೂ. ಸಾಲದಲ್ಲಿದ್ದರೆ ಅವರ ಪತ್ನಿ ಮಂಜುಳಾ ಹೆಸರಲ್ಲಿ 7.50 ಕೋಟಿ ರೂ. ಸಾಲವಿದೆ. ಕೃಷ್ಣಪ್ಪ ಅವರ ಬಳಿ 25.6 ಲಕ್ಷ ರೂ ಮೌಲ್ಯದ ಟೊಯೋಟಾ ಫಾರ್ಚೂನರ್ ಕಾರು, 7.47 ಲಕ್ಷ ರೂ ಮೌಲ್ಯದ ಮಹೀಂದ್ರಾ ಜೀಪು, 46 ಸಾವಿರ ರೂ. ಫರ್ಯೂಸನ್ ಟ್ರ್ಯಾಕ್ಟರ್ ಇದೆ. ಕೃಷ್ಣಪ್ಪ ಹೆಸರಿನಲ್ಲಿ 1.1 ಕೆಜಿ ಚಿನ್ನ, ಪತ್ನಿಯ ಬಳಿ 3.1 ಕೆಜಿ ಚಿನ್ನಾಭರಣವಿದೆ.
(ಕೃಷ್ಣಪ್ಪ ವೆಬ್ ಸೈಟ್)

ಬಿದರಿ ದಂಪತಿ ಬಳಿಯಿದೆ 5.75 ಕೋಟಿ ರೂ ಆಸ್ತಿ
ಸ್ವಂತ ಪಕ್ಷ ಕಟ್ಟಿದ್ದರೂ (ಸರ್ವ ಜನಶಕ್ತಿ ಪಕ್ಷ) ಚುನಾವಣಾ ಆಯೋಗದಿಂದ ಇನ್ನೂ ಮಾನ್ಯತೆ ಪ್ರಾಪ್ತಿಯಾಗದ ಹಿನ್ನೆಲೆಯಲ್ಲಿ ನಿವೃತ್ತ ಡಿಐಜಿ ಶಂಕರ ಮಹಾದೇವ ಬಿದರಿ ಅವರು ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಡಾ. ಶಂಕರ ಬಿದರಿ ಅವರು 3.19 ಕೋಟಿ ರೂ ಆಸ್ತಿವಂತರು. ಬಿದರಿ ಅವರ ಪತ್ನಿ ಡಾ. ಉಮಾ ಅವರು 1.56 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. 1 ಟೊಯೋಟಾ ಇನ್ನೋವಾ ಕಾರ್ ಹೊಂದಿದ್ದಾರೆ.
ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್ ವಿವರದಲ್ಲಿ ಬಿದರಿ ತಮ್ಮ ಪಿತ್ರಾರ್ಜಿತ ಆಸ್ತಿ 15 ಲಕ್ಷ ರೂ. ಹಾಗೂ ಸ್ವಂತ ಗಳಿಕೆಯ 3.04 ಕೋಟಿ ರೂ. ಮೌಲ್ಯದ ಆಸ್ತಿ ಸೇರಿ 3.19 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ತಮ್ಮ ಬಳಿ 10 ಲಕ್ಷ ರೂ. ಮೌಲ್ಯದ 300 ಗ್ರಾಂ ಚಿನ್ನ ಹಾಗೂ ಪತ್ನಿಯ ಬಳಿ 40 ಲಕ್ಷ ರೂ. ಮೌಲ್ಯದ ಚಿನ್ನ, 1 ಕೆಜಿ ಬಂಗಾರ ಇದೆ ಎಂದು ವಿವರ ನೀಡಿದ್ದಾರೆ.

ಮಂಜುನಾಥ್ 'ಭಂಡಾರ' ಹೀಗಿದೆ:
ಎಐಸಿಸಿ ಸದಸ್ಯರು, ಅಸ್ಕರ್ ಫರ್ನಾಂಡಿಸ್ ಅವರ ಪರಮಾಪ್ತ ಮಂಜುನಾಥ್ ಭಂಡಾರಿ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅದಕ್ಕಿನ್ನೂ ಬಿ ಫಾರಂ ಲಗತ್ತಿಸಿಲ್ಲ. ಕೊನೆಯ ಕ್ಷಣದಲ್ಲಿ ಕುಮಾರ್ ಬಂಗಾರಪ್ಪ ಎಂಟ್ರಿ ಕೊಡುವ ಸಾಧ್ಯತೆಯೂ ಇದೆ.
ಈ ಮಧ್ಯೆ, ಮಂಜುನಾಥ್ ಅವರ ಚರ ಮತ್ತು ಸ್ಥಿರಾಸ್ತಿ ಭಂಡಾರದಲ್ಲಿ 15.22 ಕೋಟಿ ರೂ. ಇದೆ. ಪತ್ನಿ ಪ್ರಸನ್ನ ಭಂಡಾರಿ ಒಟ್ಟು 4.24 ಕೋಟಿ ರೂ.ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಹೊಂದಿದ್ದಾರೆ. ಇದರ ಜತೆಗೆ ಮಂಜುನಾಥ್ ಭಂಡಾರಿ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಒಟ್ಟು 8.53 ಕೋಟಿ ರೂ. ಸಾಲ ಮಾಡಿದ್ದು, ಇವರ ಪತ್ನಿಯ ಹೆಸರಿನಲ್ಲಿ 43 ಲಕ್ಷ ರೂ. ಸಾಲವಿದೆ ಎಂದು ಘೋಷಿಸಿದ್ದಾರೆ.
ಮ್ಯಾಂಟೆರೋ, ಹೊಂಡಾ ಸಿಆರ್ ವಿ, ಹೊಂಡಾ ಸಿಟಿ, ಹುಂಡೈ, ಹೊಂಡಾ ಜಾಝ್ ಕಾರು, ಮಹೀಂದ್ರಾ ಬೊಲೆರೋ, ದ್ವಿಚಕ್ರ ವಾಹನ, ಸರಕು ಸಾಗಣೆ ವಾಹನಗಳಿವೆ.












Click it and Unblock the Notifications