ಸ್ಥಳೀಯ ಸಂಸ್ಥೆ ಈಸ್ಟ್ ಇಂಡಿಯಾ ಕಂಪನಿಯಂತೆ ವರ್ತಿಬಾರದು: ಹೈಕೋರ್ಟ್ ಕಿಡಿ
ಬೆಂಗಳೂರು, ಮೇ 09. ಸ್ಥಳೀಯ ಸಂಸ್ಥೆ ಅಂದರೆ ಅದೇನೂ ಈಸ್ಟ್ ಇಂಡಿಯಾ ಕಂಪನಿ ಅಲ್ಲ, ಅದು ಹಾಗೆ ವರ್ತಿಸಲೂ ಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಂಡ್ಯದ ಪ್ರಕರಣವೊಂದರಲ್ಲಿ ಓಣಿ ರಸ್ತೆಯ ಸ್ವಲ್ಪಭಾಗದ ಬಳಕೆಗೆ ಅನುಮತಿ ನೀಡುವಂತೆ ಕೋರಲಾಗುವ ಅರ್ಜಿದಾರರ ಮನವಿಯನ್ನು ಪರಿಗಣಿಸಿ ಎಂದು ನಗರಸಭೆಗೆ ನಿರ್ದೇಶನ ನೀಡಿದ ವೇಳೆ ಮೇಲಿನಂತೆ ಅಭಿಪ್ರಾಯಪಟ್ಟಿದೆ.
ಮಂಡ್ಯ ಅಶೋಕ ನಗರದ ನಿವಾಸಿಗಳು ಸಲ್ಲಿಸಿದ್ದ ರಿಟ್ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಹೀಗೆ ಹೇಳಿದೆ.

ವಾದ -ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಅರ್ಜಿದಾರರ ಖಾಸಗಿ ಸ್ವತ್ತಿಗೆ ಹೊಂದಿಕೊಂಡಿರುವ ನಗರಸಭೆಯ ಸ್ಥಿರಾಸ್ತಿ ಬಳಕೆಗೆ ಅನುಮತಿ ಕೋರಿ ಸಲ್ಲಿಸಲಾಗುವ ಮನವಿ ಪರಿಗಣಿಸಬೇಕು ಎಂದು ನಗರಸಭೆಗೆ ಆದೇಶಿಸಿದೆ.
ಕೋರ್ಟ್ ಆದೇಶವೇನು?
ನಗರಸಭೆ ವಿಧಿಸುವ ಷರತ್ತುಗಳಿಗೆ ನಾವು ಬದ್ಧವಾಗಿರುತ್ತೇವೆ ಎಂಬ ಸ್ಥಳೀಯರ ಹೇಳಿಕೆಯನ್ನು ಪರಿಗಣಿಸಬೇಕು. ಸ್ಥಳೀಯ ನಾಗರಿಕರಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ನಗರಸಭೆ ನಡೆದುಕೊಳ್ಳಬೇಕು. ಅದು ಬಿಟ್ಟು ಈಸ್ಟ್ ಇಂಡಿಯಾ ಕಂಪನಿಯ ಶಾಖೆಯ ರೀತಿ ವರ್ತನೆ ಮಾಡುವುದು ಸರಿಯಲ್ಲ. ಸ್ಥಳೀಯ ಸರಕಾರವಾಗಿರುವ ಅದು ನಗರಸಭೆಗೆ ಸರಿ ಹೋಗುವುದೂ ಇಲ್ಲ. ಸ್ಥಳೀಯ ನಿವಾಸಿಗಳು ಎಂದರೆ ಅವರೆಲ್ಲಾ ತೆರಿಗೆದಾರರೇ ಆಗಿರುತ್ತಾರೆ, ಹಾಗಾಗಿ ಅವರ ಮನವಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂಬುದನ್ನು ಮರೆಯಬಾರದು ಎಂದು ನ್ಯಾಯಪೀಠ ಕಿಡಿ ಕಾರಿದೆ.
ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಾಲಯ, 2008ರಲ್ಲಿ ನಗರಸಭೆಯೇ ನಿರ್ಣಯ ಕೈಗೊಂಡಿರುವಂತೆ ಇತರರಂತೆ ಅರ್ಜಿದಾರರೂ ಸಹ ಓಣಿ (ಕನ್ಸರ್ ವೆನ್ಸಿ) ಬಳಕೆ ಮಾಡಿಕೊಳ್ಳಲು ಬಳಕೆದಾರರ ಹಕ್ಕು ನೀಡುವ ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ.
"ಓಣಿ ಪ್ರದೇಶದ ಕೆಲವು ಮಾಲೀಕರಿಗೆ ನಗರಸಭೆಯ ಸ್ವತ್ತಿಗೆ ಹೊಂದಿಕೊಂಡ ಪ್ರದೇಶ ಬಳಕೆಗೆ ಅನುಮತಿ ನೀಡಿ ಹಂಚಿಕೆ ಮಾಡಲಾಗಿದೆ, ಆದರೆ ಅದೇ ಲಾಭವನ್ನು ಅರ್ಜಿದಾರರಿಗೆ ವಿಸ್ತರಿಸದಿರುವುದು ಸರಿಯಲ್ಲ. ನಗರಸಭೆ ಸ್ಥಳೀಯ ಸರ್ಕಾರವಿದ್ದಂತೆ, ಅದು ನ್ಯಾಯಯುತವಾಗಿ ಮತ್ತು ನಿಸ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಅದೆ ಹಿಂದೆ ಇದ್ದ ಬ್ರಿಟಿಷ್ ಸರ್ಕಾರದ ಶಾಖೆಯಂತೆ ವರ್ತಿಸಬಾರದು, ನಿವಾಸಿಗಳ ನಡುವೆ ತಾರತಮ್ಯದಿಂದ ನಡೆದುಕೊಳ್ಳಬಾರದು''ಎಂದೂ ಸಹ ನ್ಯಾಯಪೀಠ ಹೇಳಿದೆ.
ಅರ್ಜಿದಾರರು ಬೇರೆಯವರಿಗೆ ನೀಡಿರುವ ಅನುಕೂಲವನ್ನು ತಮಗೂ ಕಲ್ಪಿಸಿ ಎಂದು ಕೋರಿದ್ದಾರೆ, ಜೊತೆಗೆ ಎಲ್ಲ ಷರತ್ತುಗಳನ್ನು ಪಾಲನೆ ಮಾಡುವುದಾಗಿ ಹೇಳಿದ್ದಾರೆ. ಆದರೂ ಅದನ್ನು ಪರಿಗಣಸದಿರುವುದು ನಿಯಮ ಬದ್ಧವಾಗುವುದಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣವೇನು?
ಮಂಡ್ಯದ ಅಶೋಕ ನಗರದ ನಿವಾಸಗಳು ತಮ್ಮ ನಿವಾಸಗಳಿಗೆ ಹೊಂದಿಕೊಂಡ ನಗರಸಭೆಯ ಕನ್ಸರ್ ವೆನ್ಸಿ ಜಾಗ ಬಳಕಕೆಗೆ ಮನವಿ ಮಾಡಿದ್ದರು. ಆ ಕುರಿತು 1996ರಲ್ಲಿ ನಗರಸಭೆಯೇ ನಿರ್ಣಯ ಕೈಗೊಂಡು ಓಣಿ ಜಾಗವನ್ನು ಸಾರ್ವಜನಿಕರ ಬಳಕೆಗೆ ನೀಡಲು ನಿರ್ಧರಿಸಿತ್ತು.
ಆದರೆ ಸರ್ಕಾರ ಕನ್ಸರ್ ವೆನ್ಸಿ ಜಾಗ ಸರ್ಕಾರಿ ಜಾಗವಾಗಿದ್ದು, ಅದನ್ನು ಉಳಿಸಬೇಕು ಮತ್ತು ಅದನ್ನು ಯಾರಿಗೂ ಪರಭಾರೆ ಮಾಡುವಂತಿಲ್ಲ ಎಂದು ಆದೇಶಿಸಿದ್ದ ಹಿನ್ನೆಲೆಯಲ್ಲಿ ನಗರಸಭೆ ತನ್ನ ನಿಲುವು ಬದಲಿಗೆ ಅರ್ಜಿದಾರರಿಗೆ ಓಣಿ ಜಾಗಕ್ಕೆ ಹೊಂದಿಕೊಂಡ ಸ್ಥಳಾವಕಾಶ ಬಳಕೆಗೆ ಅವಕಾಶ ನಿರಾಕರಿಸಿತ್ತು. ಅದನ್ನು ಅರ್ಜಿದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.












Click it and Unblock the Notifications