ನವೆಂಬರ್ 20 ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್!
ನವೆಂಬರ್ 20ರಂದು ರಾಜ್ಯದಲ್ಲಿ ಮದ್ಯದಂಗಡಿಗಳು ಬಂದ್ ಆಗಲಿವೆ. ಅಬಕಾರಿ ಇಲಾಖೆ ಅಧಿಕಾರಿಗಳು ಕೊಡುತ್ತಿರುವ ಕಿರುಕುಳದ ವಿರುದ್ಧ ಬೇಸತ್ತಿರುವ ಮದ್ಯ ಮಾರಾಟಗಾರರ ಸಂಘ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ಪ್ರತಿಭಟನೆಗೆ ಮುಂದಾಗಿದೆ. ಹಣ ವಸೂಲಿ, ಲೈಸೆನ್ಸ್ ನವೀಕರಣಕ್ಕೆ ಲಂಚ ಸೇರಿದಂತೆ ಅನೇಕ ರೀತಿಯಲ್ಲಿ ತೊಂದರೆ ಕೊಡುತ್ತಿದ್ದು, ಇದರ ವಿರುದ್ಧ ಮದ್ಯದಂಗಡಿ ಬಂದ್ ಮಾಡಿ ಪ್ರತಿಭಟನೆ ಮಾಡಲು ಮುಂದಾಗಿವೆ.
ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಮದ್ಯದಂಗಡಿಗಳ ಬಂದ್ಗೆ ಪೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕ ಕರೆ ನೀಡಿದೆ. ಯಾವುದೇ ಕಾರಣಕ್ಕೂ ಬಂದ್ ಮಾಡುವ ನಿರ್ಧಾರದರಿಂದ ಹಿಂದೆ ಸರಿಯಲ್ಲ ಎಂದು ಸ್ಪಷ್ಟನೆ ನೀಡಿದೆ.

ಬಂದ್ ಮಾಡಲ್ಲ ಎಂದು ಕರ್ನಾಟಕ ವೈನ್ ಮರ್ಚೆಂಟ್ಸ್ನ ಹೊನ್ನಗಿರಿ ಗೌಡ ಮತ್ತು ಕರ್ನಾಟಕ ರಾಜ್ಯ ಲಿಕ್ಕರ್ ಸೊಸೈಟಿ ಅಧ್ಯಕ್ಷ ಎಚ್. ಚಂದ್ರಶೇಖರ್ ಹೇಳಿದ್ದಾರೆ. ಆದರೆ ಇವರಿಬ್ಬರಿಗೂ ನಮಗೂ ಸಂಬಂಧವಿಲ್ಲ, ನಾವು ಬಂದ್ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಪೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಬಿ. ಗೋವಿಂದರಾಜ್ ಹೆಗ್ಡೆ ಹೇಳಿದ್ದಾರೆ.
ವ್ಯಾಪಕ ಭ್ರಷ್ಟಾಚಾರ ಆರೋಪ
ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿಚಾರಗಳನ್ನು ಆರ್ಥಿಕ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘಟ ಅಧ್ಯಕ್ಷ ಗುರುಸ್ವಾಮಿ ಹೇಳಿದ್ದಾರೆ. ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ, ನವೆಂಬರ್ 20ರಂದು ಮದ್ಯ ಮಾರಾಟ ಬಂದ್ ಮಾಡಲಾಗುತ್ತದೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ಬೇಡಿಕೆಗಳೇನು?
ಅಬಕಾರಿ ಇಲಾಖೆಯ ಅಧಿಕಾರಿಗಳು ಮದ್ಯ ಮಾರಾಟ ವ್ಯಾಪಾರಿಗಳಿಂದ ಪ್ರತಿ ತಿಂಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಮದ್ಯ ಮಾರಾಟಗಾರರ ಸಂಘ ಆರೋಪಿಸಿದೆ. ಲೈಸೆನ್ಸ್ ನವೀಕರಣ ಸೇರಿದಂತೆ ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು ಇದಕ್ಕೆಲ್ಲಾ ಬ್ರೇಕ್ ಹಾಕುವಂತೆ ಬೇಡಿಕೆ ಇಡಲಾಗಿದೆ.
ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ, ಪ್ರಮೋಷನ್ಗೆ ಅಧಿಕಾರಿಗಳು ಲಕ್ಷ, ಕೋಟಿಗಟ್ಟಲೆ ಲಂಚ ನೀಡುತ್ತಿದ್ದಾರೆ. ಇದನ್ನು ರಿಕವರಿ ಮಾಡಲು ಮದ್ಯದಂಗಡಿಗಳಿಂದ ಲಂಚ ಪಡೆಯುತ್ತಿದ್ದಾರೆ. ಅಧಿಕಾರಿಗಳ ಲಂಚಗುಳಿತನದಿಂದ ಕರ್ನಾಟಕದಲ್ಲಿ ಅಂತರಾಜ್ಯ ಮದ್ಯ ರಾಜ್ಯಕ್ಕೆ ಹೆಚ್ಚಾಗಿ ಬರುತ್ತಿದ್ದು, ಅಕ್ರಮ, ನಕಲಿ ಮದ್ಯದ ಮಾರಾಟ ಕೂಡ ಹೆಚ್ಚಾಗಿದೆ. ಒಂದು ಕಡೆ ಅಧಿಕಾರಿಗಳಿಗೆ ಲಂಚ, ಮತ್ತೊಂದು ಕಡೆ ನಕಲಿ ಮದ್ಯದಿಂದ ಮದ್ಯ ವ್ಯಾಪಾರಿಗಳು ನಷ್ಟದ ಭೀತಿಯಲ್ಲಿದ್ದಾರೆ ಎಂದು ಹೇಳಿದೆ. ಹಣಕಾಸು ಇಲಾಖೆ ಸಚಿವರೇ ಅಬಕಾರಿ ಇಲಾಖೆ ಜವಾಬ್ದಾರಿ ವಹಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.












Click it and Unblock the Notifications