ಈ ವಿಷಯದಲ್ಲಿ ಕರ್ನಾಟಕಕ್ಕಿಂತ ಬಿಹಾರವೇ ಉತ್ತಮ!
ಬೆಂಗಳೂರು, ಆಗಸ್ಟ್, 02: ಸದ್ಯದ ಮಟ್ಟಿಗೆ ಕರ್ನಾಟಕದ ರಾಜಧಾನಿ ಬೆಂಗಳೂರು ಮದ್ಯದ ದಾಸರಿಗೆ ಸ್ವರ್ಗ. ರಾತ್ರಿ 1 ಗಂಟೆವರೆಗೂ ಬಾರ್ ಗಳು ಓಪನ್. ಯಾವಾಗ ಬೇಕಾದರೂ ಕುಡಿ, ಎಷ್ಟು ಬೇಕಾದರೂ ಕುಡಿ ಎಂಬ 'ಸಾಮಾಜಿಕ' ಚಿಂತನೆಯ ನೀತಿ.
ವಿಧಾನಸೌಧದಲ್ಲಿ ಹೇಳಿಕೆ ನೀಡುವ ಅಬಕಾರಿ ಸಚಿವ ಎಚ್ ವೈ ಮೇಟಿ, ನಗರದವರು ಸುಶಿಕ್ಷಿತರು, ಹಳ್ಳಿಯವರಂಥಲ್ಲ, ನಗರದವರು ಕುಡಿದು ರಸ್ತೆಯಲ್ಲಿ ಬೀಳುವುದಿಲ್ಲ ಎಂದು ಹೇಳುತ್ತಾ ಸರ್ಕಾರದ ನೀತಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಕೈಗೆ ಮದ್ಯದ ಬಾಟಲಿ ಕೊಟ್ಟ ಸರ್ಕಾರದ ನೀತಿಗೆ ವಿರೋಧ ಮಾಡುವವರು ಯಾರು ಇಲ್ಲವೇ?[ಅಮಲುದಾರ ಪೊಲೀಸಪ್ಪನ ತೂರಾಟ ನೋಡಿ, ಮಜಾ ಮಾಡಿ]
ಈ ವಿಷಯಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕಕ್ಕಿಂತ ಬಿಹಾರವೇ ಬೆಸ್ಟ್. ಸಂಪೂರ್ಣ ಪಾನ ನಿಷೇಧ ಮಾಡಿರುವ ಬಿಹಾರ ಸರ್ಕಾರ ಇದೀಗ ಕಟ್ಟುನಿಟ್ಟಿನ ಕಾನೂನನ್ನು ಜಾರಿ ಮಾಡಿದೆ.[ಬೆಂಗಳೂರು ಸಭ್ಯ ಕುಡುಕರ ರಾಜಧಾನಿ ಎಂದ ಅಬಕಾರಿ ಸಚಿವ]
ಕರ್ನಾಟಕ ಸರ್ಕಾರದ ಆದೇಶ
ಜುಲೈ 15 ರಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸುವ ಮೂಲಕ ಮಹಾನಗರಗಳಲ್ಲಿ ರಾತ್ರಿ 1 ಗಂಟೆವರೆಗೆ ಬಾರ್ ಗಳು ತೆರೆದಿರಬಹುದು ಎಂದು ಆದೇಶ ನೀಡಿತ್ತು.
ಹೆಚ್ಚುಮದ್ಯ ಕುಡಿಸಿ
ಸರ್ಕಾರಕ್ಕೆ ಅಬಕಾರಿ ಸುಂಕ ಬಹುದೊಡ್ಡ ಆದಾಯ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. 2013-14ರಲ್ಲಿ ಶೇ. 15.89 ರಷ್ಟಿದ್ದ ಆದಾಯ 2014-15 ಕ್ಕೆ ಶೇ. 7.58 ಕ್ಕೆ ಇಳಿದಿದೆ. ಪರಿಣಾಮ ಸರ್ಕಾರಕ್ಕೆ ಬರುತ್ತಿರುವ ಆದಾಯವೂ ಕಡಿಮೆಯಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಜನರಿಗೆ ಕುಡಿಸಿ ಎಂಬ ನೀತಿಗೆ ವಾಲಿಕೊಂಡಿದೆ.
ಬಿಹಾರದಲ್ಲಿ ಕಠಿಣ ಶಿಕ್ಷೆ
ಯಾವುದೇ ಮನೆಯಲ್ಲಿ ಮದ್ಯ ಸಿಕ್ಕರೆ 18 ವರ್ಷ ಮೇಲ್ಪಟ್ಟ ಎಲ್ಲರನ್ನೂ ಜೈಲಿಗೆ ಕಳುಹಿಸುತ್ತೇವೆ ಎಂದು ಬಿಹಾರ ಸರ್ಕಾರ ಹೇಳಿದೆ. ಈ ಅಪರಾಧಕ್ಕೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಹಾಗೂ 1 ರಿಂದ 10 ಲಕ್ಷ ರೂಪಾಯಿ ತನಕ ದಂಡ ವಿಧಿಸಬಹುದು ಎಂದು ಬಿಹಾರ ಸರ್ಕಾರದ ಆದೇಶ ಹೇಳಿದೆ. ಕರ್ನಾಟಕದಲ್ಲಿ ಮಧ್ಯರಾತ್ರಿ ಮೀರಿದರೂ ಮದ್ಯ ಸಮಾರಾಧನೆ, ಬಿಹಾರದಲ್ಲಿ ಮದ್ಯಪಾನ ನಿಷೇಧ.
ಮಾತು ತಪ್ಪದ ನಿತೀಶ್
ಚುನಾವಣೆಗೂ ಮುನ್ನ ಮಹಿಳಾ ಮತದಾರರಿಗೆ ನೀಡಿದ್ದ ಭರವಸೆಯನ್ನು ನಿತೀಶ್ ಉಳಿಸಿಕೊಂಡಿದ್ದಾರೆ. ಬಿಹಾರದಲ್ಲಿ ಏಪ್ರಿಲ್ 01 ರಿಂದ ಮದ್ಯ ಮಾರಾಟವನ್ನು ಬಹುತೇಕ ನಿಷೇಧಿಸಿದ್ದ ನಿತೀಶ್ ಅವರು ಏಪ್ರಿಲ್ 5ರಿಂದ ಸಂಪೂರ್ಣ ನಿಷೇಧ ಘೋಷಿಸಿದ್ದರು.
ನೀವು ಏನಂತೀರಿ?
ಸರ್ಕಾರ ಜನರಿಗೆ ಒಂದು ಗಂಟೆವರೆಗೆ ಮದ್ಯ ಸಿಗುವಂತೆ ಮಾಡಿದ್ದಕ್ಕೆ ನೀವೇನು ಹೇಳುತ್ತೀರಿ, ಬಿಹಾರ ಸರ್ಕಾರ ತನ್ನ ವಿಧಾನಸಭೆಯಲ್ಲಿ ಸಂಪೂರ್ಣ ಪಾನ ನಿಷೇಧ ಕಾನೂನನ್ನು ಅಂಗೀಕಾರ ಮಾಡಿದ್ದಕ್ಕೆ ನಿಮ್ಮ ಅಭಿಪ್ರಾಯ ಏನು? ಎಂಬುದನ್ನು ಧಾರಾಳವಾಗಿ ಕಮೆಂಟ್ ಮಾಡಿ.