Karnataka Rains : ಕರ್ನಾಟಕದಲ್ಲಿ ಹಿಂಗಾರು ಚುರುಕು, ಭಾರಿ ಮಳೆ ಸಂಭವ
ಬೆಂಗಳೂರು, ಡಿಸೆಂಬರ್ 02: ಕರ್ನಾಟಕದಲ್ಲಿ ಮತ್ತೆ ಮಳೆ ಚುರಕಾಗುವ ಲಕ್ಷಣಗಳು ಕಂಡು ಬಂದಿವೆ. ಮುಂದಿನ ಮೂರು ದಿನ ಕೆಲವು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಲಿದೆ. ಅಲ್ಲದೇ ಡಿ.4 ರಿಂದ ಹವಾಮಾನ ವೈಪರಿತ್ಯಗಳು ಘಟಿಸಲಿದ್ದು, ಮತ್ತೆ ಭಾರಿ ಮಳೆ ಬರುವ ಮುನ್ಸೂಚನೆ ಇದೆ.
ಡಿಸೆಂಬರ್ 4 ರಂದು ಬಂಗಾಳ ಕೊಲ್ಲಿಯ ಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಲಿದೆ. ಅದರ ಪರಿಣಾಮವಾಗಿ ಡಿಸೆಂಬರ್ 5 ಕ್ಕೆ ಸ್ಪಷ್ಟ ವಾಯುಭಾರ ಕುಸಿತ ಪ್ರದೇಶ ನಿರ್ಮಾಣವಗಲಿದೆ. ಇದು ಸೆ.7 ರ ಹೊತ್ತಿಗೆ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಅಂದುಕೊಂಡಂತಾದರೆ ಕರ್ನಾಟಕದಲ್ಲಿ ಮಳೆ ಆರ್ಭಟ ಮತ್ತೆ ಶುರುವಾಗಲಿದೆ. ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಲಿದೆ.

ಸದ್ಯದ ಮಳೆ ಮುನ್ಸೂಚನೆ:
ಕರ್ನಾಟಕದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮುಂದಿನ ಮೂರು ಹುಗುರ ಮಳೆ ಸಂಭವವಿದೆ. ಇದೇ ವೇಳೆ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಒಂದೆರಡು ಕಡೆ ಹಗುರ ಮಳೆ, ಹಲವು ಕಡೆ ತುಂತುರ ಮಳೆ ಆಗಲಿದೆ. ಉತ್ತರ ಒಳನಾಡಿನಲ್ಲಿ ಮುಂದಿನ ಐದು ದಿನವು ಒಣ ಹವೆ ಮುಂದುವರಿಯಲಿದೆ ಎಂದು ಕರ್ನಾಟಕ ಹವಾಮಾನ ಕೇಂದ್ರದ ತಜ್ಞರು ಹಗೂ ವಿಜ್ಞಾನಿ ಡಾ. ಪ್ರಸಾದ್ ಹೇಳಿದರು.
ರಾಜ್ಯದ ಕನಿಷ್ಠ ತಾಪಮಾನ ಬೆಣ್ಣೆ ನಗರಿ ದಾವಣಗೆರೆಯಲ್ಲಿ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗ್ಗೆ ಅನೇಕ ಜಿಲ್ಲೆಗಳಲ್ಲಿ ಚಳಿ ಹಾಗೂ ಅತ್ಯಧಿಕ ಮಂಜು ಕಂಡು ಬಂದಿದೆ. ಉಳಿದಂತೆ ಗಂಭೀರ ರೂಪದ ಯಾವ ಬದಲಾವಣೆಗಳು ಇಲ್ಲ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಮುಂದಿನ ಮೂರು ದಿನ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಉಂಟಾಗುವ ಸಾಧ್ಯತೆ ಇದೆ. ಕೆಲವೆಡೆ ತುಂತುರು ಮಳೆ ಕಂಡು ಬರಬಹುದು. ಬೆಳಗ್ಗೆ ಚಳಿ ಹೆಚ್ಚಿರಲಿದ್ದು ದಟ್ಟವಾಗಿ ಮಂಜು ಕವಿಯುವ ನಿರೀಕ್ಷೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.












Click it and Unblock the Notifications