'ಮರ್ ಜಾ ಮೋದಿ' ಎಂದವರು ಯಾರು? ಕೂಗಿದ್ದೆಲ್ಲಿ? ಎಂದು ಪ್ರಧಾನಿ ಬಹಿರಂಗಪಡಿಸಲಿ: ಸಿದ್ದರಾಮಯ್ಯ ಗರಂ
ಬಿಜೆಪಿ ಅಧಿಕಾರದಲ್ಲಿದ್ದರು ಸಹ ಕಾಂಗ್ರೆಸ್ನವರು 'ಮರ್ ಜಾ ಮೋದಿ' ಎಂದು ಕೂಗಿದ್ದಾರೆಂದು ಅನುಕಂಪದಲ್ಲಿ ಮತಯಾಚಿಸುತ್ತಿದ್ದಾರೆ. ಹಾಗೆ ಕೂಗಿದ್ದು ಯಾರೆಂದು ಪ್ರಧಾನಿ ಬಹಿರಂಗಪಡಿಸಲಿ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.
ಬೆಂಗಳೂರು, ಮಾರ್ಚ್ 03: ಬಿಜೆಪಿ ಪಕ್ಷವು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದೆ. ಹೀಗಿದ್ದರೂ ಸಾಧನೆಗಳ ಆಧಾರದಲ್ಲಿ ಮತ ಯಾಚಿಸಲು ಬಿಜೆಪಿ ಆಗುತ್ತಿಲ್ಲ. 'ಮರ್ ಜಾ ಮೋದಿ' ಎಂದು ಕೂಗಿದ್ದು ಯಾರು? ಎಲ್ಲಿ ಕೂಗಿದರು ಎಂದು ಪ್ರಧಾನಮಂತ್ರಿಗಳು ಬಹಿರಂಗಪಡಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು, 'ಮರ್ ಜಾ ಮೋದಿ' ಎಂದು ಕಾಂಗ್ರೆಸ್ ನವರು ಘೋಷಣೆ ಕೂಗುತ್ತಿದ್ದಾರೆ ಎಂದು ಹೇಳಿ ಅನುಕಂಪ ಗಳಿಸಲು ನಾಟಕ ಮಾಡುತ್ತಿರುವುದು ದುದೃಷ್ಟಕರ. ಮರ್ ಜಾ ಮೋದಿ ಎಂದು ಯಾರು? ಎಲ್ಲಿ? ಕೂಗಿದ್ದರು ಎನ್ನುವುದನ್ನು ಪ್ರಧಾನಮಂತ್ರಿಗಳು ಬಹಿರಂಗ ಪಡಿಸಬೇಕು. ಇಂಟಲಿಜೆನ್ಸ್, ಪೊಲೀಸ್, ತನಿಖಾ ಸಂಸ್ಥೆಗಳು ಎಲ್ಲವೂ ಕೈಯಲ್ಲಿರುವಾಗ ಸಾಯಲು ಹೇಳಿದವರನ್ನು ಎಳೆದು ತಂದು ಜೈಲಿಗೆ ಹಾಕಲು ಏನು ಅಡ್ಡಿ ಇದೆ ಎಂದು ಅವರು ಪ್ರಶ್ನಿಸಿದರು.
ಈ ದೇಶದಲ್ಲಿ ಒಬ್ಬ ಪ್ರಧಾನಿಗೆ ರಕ್ಷಣೆ ಇಲ್ಲ ಎಂದಾದರೆ ಇನ್ನು ಸಾಮಾನ್ಯ ಜನರಿಗೆ ಹೇಗೆ ರಕ್ಷಣೆ ನೀಡುತ್ತಾರೆ? ಇನ್ನು ಯಾಕೆ ಮರ್ ಜಾ ಮೋದಿ ಎಂದು ಕೂಗಿದರವರ ಮೇಲೆ ಕ್ರಮ ತೆಗೆದುಕೊಂಡಿಲ್ಲ? ಇವೆಲ್ಲ ಅನುಕಂಪ ಗಳಿಸಲು ಮಾಡುತ್ತಿರುವ ಗಿಮಿಕ್ ಗಳಷ್ಟೆ. ಜನರು ಮೂರ್ಖರಲ್ಲ, ಅವರಿಗೆ ಈ ನಾಟಕ ಅರ್ಥವಾಗುತ್ತದೆ.

ಸಚಿವರ ಬುದ್ಧಿ ಹೇಳಲಿಲ್ಲ: ಸಿದ್ದರಾಮಯ್ಯ
ಟಿಪ್ಪುವಿನಂತೆ ನನ್ನನ್ನೂ ಹೊಡೆದು ಹಾಕಬೇಕು ಎಂದು ಹತ್ಯೆಗೆ ಪ್ರಚೋದಿಸಿದ್ದ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರಿಗೆ ಪ್ರಧಾನಿಯವರು ತಲೆಗೆ ಕುಟ್ಟಿ ಬುದ್ದಿ ಹೇಳಬಹುದು ಎಂದು ಅಂದ್ಕೊಂಡಿದ್ದೆ. ಆದರೆ ಅವರು ತನ್ನನ್ನು ಮರ್ ಜಾ ಎಂದು ಹೇಳುತ್ತಿದ್ದಾರೆ ಎಂದು ಅನುಕಂಪ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ ಎಂದರು.
ಗುಜರಾತ್ ಗಲಭೆ ನಿಯಂತ್ರಿಸಲಾಗದ ನರೇಂದ್ರ ಮೋದಿಯವರನ್ನು ಕಿತ್ತುಹಾಕಲು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿರ್ಧರಿಸಿದ್ದರು. ಆಗ ಇವರನ್ನು ರಕ್ಷಿಸಿದ್ದು ಲಾಲ್ ಕೃಷ್ಣ ಅಡ್ವಾಣಿ. ಅಂತಹ ಹಿರಿಯನನ್ನೇ ಮೂಲೆಗೆ ತಳ್ಳಿರುವ ಮೋದಿಯವರಿಗೆ ಇತರರಿಗೆ ಉಪದೇಶ ಮಾಡುವ ಯಾವ ನೈತಿಕತೆ ಇದೆ ಎಂದು ತಿವಿದರು.

ಬಿಜೆಪಿಯಲ್ಲಿ ಹಿರಿಯ ನಾಯಕರ ಕಡೆಗಣನೆ
ಬಿಜೆಪಿಯಲ್ಲಿಯೇ ನರೇಂದ್ರ ಮೋದಿಯವರು ಕಡೆಗಣಿಸಿದ ನಾಯಕರು ಒಬ್ಬರಾ? ಇಬ್ಬರಾ? ಅಟಲಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಜಸ್ವಂತ್ ಸಿಂಗ್ ಮಾತ್ರವಲ್ಲ ತಮ್ಮದೇ ರಾಜ್ಯದ ಹಿರಿಯ ಬಿಜೆಪಿ ನಾಯಕ ಕೇಶುಭಾಯಿ ಪಟೇಲ್ ಅವರಿಗೆ ಮೋದಿಯವರು ಮಾಡಿದ್ದ ಅವಮಾನ ಏನು ಕಡಿಮೆಯೇ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಜೈಲಿಗೆ ಹೋಗಿದ್ದು ಎನ್ನುವುದು ನೆನಪಿರಲಿ. ಕೊನೆಗೆ ಅವರು ಪಕ್ಷವನ್ನೇ ಬಿಟ್ಟುಹೋಗುವಂತೆ ಮಾಡಿದ್ದು ಯಾರು? ಪಕ್ಷ ತೊರೆದು ಹೋದ ಅವರನ್ನು ತುಚ್ಚೀಕರಿಸಿ ಹಿಂಸಿಸಿದ್ದು ಯಾರು?. ಅವರೆಲ್ಲರೂ ನರೇಂದ್ರ ಮೋದಿಯವರ ಶಿಷ್ಯರೇ ಅಲ್ಲವೇ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬಿಜೆಪಿಯಲ್ಲಿ ಮತ ತರುವ ಮುಖಗಳಿಲ್ಲ
ನರೇಂದ್ರ ಮೋದಿಯವರಿಂದ ಹಿಡಿದು ಕರ್ನಾಟಕದ ರಾಜ್ಯದ ನಾಯಕರವರೆಗೆ ಈಗ ಎಲ್ಲರೂ ಬಿ.ಎಸ್.ಯಡಿಯೂರಪ್ಪನವರನ್ನು ಹಾಡಿ ಹೊಗಳುತ್ತಿರುವುದು ಅವರ ಮೇಲಿನ ಪ್ರೀತಿಯಿಂದ ಖಂಡಿತ ಅಲ್ಲ. ಲಿಂಗಾಯತರ ಮತ ಗಳಿಸಲು ಮಾತ್ರ. ಇದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಸಾಮರ್ಥ್ಯ ಲಿಂಗಾಯತ ಸಮುದಾಯಕ್ಕಿದೆ. ರಾಜ್ಯ ಬಿಜೆಪಿಗೆ ಮತ ತಂದು ಕೊಡುವ ಯಾವ ನಾಯಕರ ಮುಖವೂ ಇಲ್ಲ ಎಂದು ಪ್ರಧಾನಮಂತ್ರಿಗಳಿಗೆ ಮನವರಿಕೆಯಾಗಿದೆ. ಅದೇ ರೀತಿ ತನ್ನ ಮುಖ ತೋರಿಸಿದರೂ ಹಿಂದಿನಂತೆ ಜನ ಮತ ಹಾಕುವುದಿಲ್ಲ ಎನ್ನುವುದು ಖಾತರಿಯಾಗಿದೆ. ಅದಕ್ಕಾಗಿಯೇ ಈ ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸಂಸದರನ್ನು ಪ್ರಧಾನಿ ನಡೆಸಿಕೊಂಡಿದ್ದು ಹೇಗೆ?
ಕರ್ನಾಟಕದ ನಾಯಕರನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಅನುಕಂಪ ತೋರುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿಯ 25 ಸಂಸದರನ್ನು ಹೇಗೆ ನಡೆಸಿಕೊಂಡಿದ್ದಾರೆ? ಅವರೇನು ಕರ್ನಾಟಕದವರಲ್ಲವೇ? ಮೋದಿಯವರು ಅವರನ್ನು ಎಂದಾದರೂ ತಮ್ಮೆದುರು ತಲೆ ಎತ್ತಿ ಮಾತನಾಡಲು ಬಿಟ್ಟಿದ್ದರಾ? ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications