ಅಚ್ಚರಿಯಾದರೂ ಸತ್ಯ, ವಿಧಾನಸೌಧಕ್ಕೆ ಲಿಂಬೆ ಹಣ್ಣಿನ ಪ್ರವೇಶ ನಿಷೇಧ!
ಬೆಂಗಳೂರು, ಜುಲೈ 04 : ಕರ್ನಾಟಕದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ ಈಗ ಸುದ್ದಿಯಲ್ಲಿದೆ. ಅದು ಒಂದು ಹಣ್ಣಿನ ವಿಚಾರಕ್ಕೆ. ಹೌದು, ಕೆಲವು ರಾಜಕಾರಣಿಗಳ ಕೈಯಲ್ಲಿ ಸದಾ ಇರುವ ಲಿಂಬೆ ಹಣ್ಣಿಗೆ ವಿಧಾನಸೌಧಕ್ಕೆ ಪ್ರವೇಶ ನಿಷೇಧಿಸಲಾಗಿದೆ.
ಅಚ್ಚರಿಯಾದರೂ ಸತ್ಯ ಇದು ಸತ್ಯ...!. ಲಿಂಬೆ ಹಣ್ಣು ಹಿಡಿದು ಜನರು ವಿಧಾನಸೌಧ ಪ್ರವೇಶ ಮಾಡುವಂತಿಲ್ಲ. ಗೇಟ್ ಬಳಿ ತಪಾಸಣೆ ವೇಳೆ ಲಿಂಬೆ ಹಣ್ಣು ಸಿಕ್ಕರೆ ಅದನ್ನು ಪೊಲೀಸರ ಕೈಗೆ ಕೊಟ್ಟು ಖಾಲಿ ಕೈಯಲ್ಲಿ ಒಳಗೆ ಹೆಜ್ಜೆ ಹಾಕಬೇಕು.
ವಿಧಾನಸೌಧಕ್ಕೆ ಪ್ರತಿನಿತ್ಯ ನೂರಾರು ಜನರು ಆಗಮಿಸುತ್ತಾರೆ. ಲಿಂಬೆಹಣ್ಣನ್ನು ನಿಷೇಧ ಮಾಡಿದ ಬಳಿಕ ಪ್ರತಿದಿನ 25 ರಿಂದ 30 ಲಿಂಬೆಹಣ್ಣುಗಳು ಸಿಗುತ್ತಿವೆಯಂತೆ. ಒದೊಂದು ದಿನ 50 ಲಿಂಬೆಹಣ್ಣು ಸಿಕ್ಕಿರುವ ಉದಾಹರಣೆಗಳು ಇವೆ.

ರಾಜ್ಯದ ಆಡಳಿತ ಶಕ್ತಿ ಕೇಂದ್ರಕ್ಕೆ ಔಷಧ, ಮಾತ್ರೆ, ಬ್ಲೇಡ್, ಚಾಕು ಮುಂತಾದ ವಸ್ತುಗಳನ್ನು ಜನರು ತೆಗೆದುಕೊಂಡು ಹೋಗುವಂತಿಲ್ಲ. ಈ ವಸ್ತುಗಳ ಪಟ್ಟಿಗೆ ಈಗ ಲಿಂಬೆ ಹಣ್ಣು ಸೇರಿರುವುದು ಜನರ ಅಚ್ಚರಿಗೆ ಕಾರಣವಾಗಿದೆ.
ಲಿಂಬೆಹಣ್ಣ ಇದ್ದರೆ ಗೇಟ್ನಲ್ಲಿಯೇ ತಡೆಯುತ್ತೇವೆ. ಒಳಗೆ ತೆಗದುಕೊಂಡು ಹೋಗಲು ಬಿಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಲಿಂಬೆಹಣ್ಣಿನ ಪ್ರವೇಶಕ್ಕೆ ಏಕೆ ನಿಷೇಧ?, ಈ ಬಗ್ಗೆ ಆದೇಶವಿದೆಯೇ? ಎಂದು ಕೇಳಿದರೆ ನಗುವೇ ಉತ್ತರವಾಗಿದೆ.
ಕರ್ನಾಟಕದ ಹಲವು ರಾಜಕಾರಣಿಗಳು ಯಾವಾಗಲೂ ಲಿಂಬೆಹಣ್ಣು ಹಿಡಿದು ಓಡಾಡುವುದು ಗುಟ್ಟಾಗಿ ಉಳಿದಿಲ್ಲ. ವಿಧಾನಸಭೆ ಅಧಿವೇಶನಕ್ಕೆ ಬರುವಾಗಲೂ ಕೈಯಲ್ಲಿ ಲಿಂಬೆಹಣ್ಣು ಇರುತ್ತದೆ. ಆದರೆ, ಜನರು ಏಕೆ ತೆಗೆದುಕೊಂಡು ಹೋಗುವಂತಿಲ್ಲ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಕೊಟ್ಟಿಲ್ಲ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ವಿಧಾನಸೌಧದ ಮುಂದೆ ವಾಮಾಚಾರ ಮಾಡಿಸಿದ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಬಳಿಕ ಲಿಂಬೆಹಣ್ಣು ತೆಗೆದುಕೊಂಡು ಹೋಗುವುದು ನಿಷೇಧವಾಗಿತ್ತು. ಬಳಿಕ ಲಿಂಬೆಹಣ್ಣಿಗೆ ಪ್ರವೇಶ ನೀಡಲಾಗಿತ್ತು. ಈಗ ಪುನಃ ನಿಷೇಧದ ಭೀತಿ ಎದುರಿಸುತ್ತಿದೆ.












Click it and Unblock the Notifications