12 ದಿನ ಮೊದಲೇ ಪರಿಷತ್ ಕಲಾಪ ಮುಕ್ತಾಯ
ಮಡಿಕೇರಿ, ಜುಲೈ 18 : ಕರ್ನಾಟಕ ವಿಧಾನಪರಿಷತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ನಿಗದಿಯಂತೆ ಜುಲೈ 30ರ ತನಕ ಅಧಿವೇಶನ ನಡೆಯಬೇಕಿತ್ತು. ಆದರೆ, ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಗದ್ದಲದ ಹಿನ್ನಲೆಯಲ್ಲಿ 12 ದಿನ ಮೊದಲೇ ಅಧಿವೇಶನ ಮೊಟಕುಗೊಂಡಿದೆ.
ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಪರಿಷತ್ತಿನಲ್ಲಿ ಧರಣಿ ನಡೆಸುತ್ತಿದ್ದವು. ಆದ್ದರಿಂದ, ಕಳೆದ ವಾರದಿಂದ ಕಲಾಪವನ್ನು ಪದೇ-ಪದೇ ಮುಂದೂಡಲಾಗುತ್ತಿತ್ತು. [ಒಂದು ದಿನದ ಕಲಾಪಕ್ಕೆ ಲಕ್ಷ-ಲಕ್ಷ ವೆಚ್ಚ, ಚರ್ಚೆ ಶೂನ್ಯ]

ಸೋಮವಾರವೂ ಸದನದಲ್ಲಿ ಗದ್ದಲ ಮುಂದುವರೆಯಿತು. ಆದ್ದರಿಂದ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಕಲಾಪವನ್ನು ಮುಂದೂಡಿದರು. 'ಪ್ರತಿಪಕ್ಷಗಳು ಸಹಕಾರ ನೀಡದಿದ್ದರೆ ಅಧಿವೇಶನವನ್ನು ಮೊಟುಕುಗೊಳಿಸುವುದು ಅನಿವಾರ್ಯ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಮೈಸೂರಿನಲ್ಲಿ ಹೇಳಿದ್ದರು.[ಜಾರ್ಜ್ ರಾಜೀನಾಮೆಗೆ ವಿಪಕ್ಷಗಳ ಬಿಗಿ ಪಟ್ಟು]
ರಾಜ್ಯ ವಿಧಾನಸಭೆಯ ಮು೦ದುವರಿದ ಬಜೆಟ್ ಅಧಿವೇಶನ ಜುಲೈ 4ರ೦ದು ಆರ೦ಭವಾಗಿತ್ತು. ಜುಲೈ 29ರವರೆಗೆ ಒಟ್ಟು 19 ದಿನಗಳ ಕಾಲ ಅಧಿವೇಶನ ನಡೆಯಬೇಕಾಗಿತ್ತು. ಆದರೆ, ಜುಲೈ 7ರಂದು ಮಂಗಳೂರು ಐಜಿ ಕಚೇರಿ ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಮಾಡಿಕೊಂಡ ಬಳಿಕ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಹೋರಾತ್ರಿ ಧರಣಿ ಆರಂಭಿಸಿದ್ದರು. [ಗದ್ದಲದ ನಡುವೆಯೇ ಪರಿಷತ್ತಿನಲ್ಲಿ 3 ವಿಧೇಯಕಗಳಿಗೆ ಒಪ್ಪಿಗೆ]
ಜುಲೈ 14ರಂದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಪ್ರತಿಭಟನೆಗಳ ನಡುವೆಯೇ ರಾಜ್ಯ ಕಾನೂನು ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ, ಕರ್ನಾಟಕ ರಾಜ್ಯ ಸಹಕಾರಿ ಸಂಘ ತಿದ್ದುಪಡಿ ವಿಧೇಯಕ, ಆರ್ಡಿಪಿಆರ್ ಇಲಾಖೆ ತಿದ್ದುಪಡಿ ವಿಧೇಯಕಗಳನ್ನು ಪರಿಷತ್ತಿನಲ್ಲಿ ಅಂಗೀಕರಿಸಲಾಗಿತ್ತು.












Click it and Unblock the Notifications