ನಮ್ಮ ನೆಲ, ಜನರಿಗಾಗಿ ಶಕ್ತಿ ಮೀರಿ ಹೋರಾಟ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ನವೆಂಬರ್ 25: ಕರ್ನಾಟಕ ಗಡಿ ಪ್ರದೇಶ ಹಾಗೂ ಕನ್ನಡಿಗರನ್ನು ರಕ್ಷಿಸಲು ರಾಜ್ಯ ಸರ್ಕಾರ ಶಕ್ತಿ ಮೀರಿ ಹೋರಾಟ ಮಾಡಲು ಸಿದ್ಧವಿದೆ. ಕೂಡಲೇ ಮಹಾರಾಷ್ಟ್ರ ಶಾಂತಿ ಕಾಪಾಡುವತ್ತ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿ ಶುಕ್ರವಾರ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ, ಎಂಇಎಸ್ ಪುಂಡಾಟಿಕೆ ಕುರಿತು ಪ್ರಶ್ನಿಸಿದ ಸುದ್ದಿಗಾರರಿಗೆ ಮುಖ್ಯಮಂತ್ರಿಗಳು ಈ ರೀತಿಯ ಉತ್ತರಿಸಿದರು. ಗಡಿ ವಿಚಾರದಲ್ಲಿ ಕರ್ನಾಟಕದ ಕಡೆಗೆ ನ್ಯಾಯ ಇದೆ. ವಿಚಾರಣೆ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಹೀಗಿದ್ದರು ಗಡಿಯಲ್ಲಿ ತಂಟೆ, ತಕರಾರು ತೆಗೆದು ಎರಡೂ ರಾಜ್ಯಗಳ ಮಧ್ಯೆ ಅಶಾಂತಿ ಸೃಷ್ಟಿಸಬಾರದು. ಕೂಡಲೇ ಮಹಾರಾಷ್ಟ್ರ ಸರ್ಕಾರ ಶಾಂತಿ ಕಾಪಾಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಭಾರತ ರಾಜ್ಯಗಳ ಒಕ್ಕೂಟ ದೇಶವಾಗಿದೆ. ಪ್ರತಿ ರಾಜ್ಯಕ್ಕೂ ತನ್ನದೇ ಆದ ಹಕ್ಕು, ಸ್ಥಾನಮಾನಗಳಿವೆ. ದೇಶದೊಳಗಿನ ಎಲ್ಲ ರಾಜ್ಯಗಳನ್ನು 'ರಾಜ್ಯ ಮರುವಿಂಗಡನಾ ಕಾಯ್ದೆ' ಅಡಿಯಲ್ಲಿಯೆ ರಚಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಆಯಾ ರಾಜ್ಯ ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ ಎಂದರು.

ಈಗ ಶಾಂತಿ ಕಾಪಾಡಿಕೊಳ್ಳಬೇಕು
ಸದ್ಯದ ಪರಿಸ್ಥಿತಿಯಲ್ಲಿ ಎರಡು ರಾಜ್ಯಗಳ ನಡುವೆ ಶಾಂತಿ ಕಾಯ್ದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ತಕ್ಷಣವೇ ಕಾರ್ಯೋನ್ಮುಖವಾಗಬೇಕು. ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಬೇಕು. ನಾವು ಕಾನೂನು ಪಾಲಿಸುವವರಾಗಿದ್ದು, ನಮ್ಮ ಹಕ್ಕುಗಳ ವ್ಯಾಪ್ತಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದೇವೆ. ಮಹಾರಾಷ್ಟ್ರ ಗಡಿವಿವಾದ ಕುರಿತು 2004 ರಲ್ಲಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಇಂದಿಗೂ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ನಾವು ಕಾನೂನಾತ್ಮಕವಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಎಂದು ಗುಡುಗಿದರು.
ಕಾನೂನು ಹೋರಾಟಕ್ಕೆ ಆದ್ಯತೆ
ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಕಾನೂನಾತ್ಮಕ ಹೋರಾಟಕ್ಕೆ ಮೊದಲ ಆದ್ಯತೆ ನೀಡುತ್ತದೆ. ಸರ್ವೋಚ್ಚ ನ್ಯಾಯಾಲಯ ಎರಡು ರಾಜ್ಯಗಳ ಗಡಿ ಸಮಸ್ಯೆಯ ಪ್ರಕರಣ ಇದ್ದು, ಅದರ ತೀರ್ಪಿಗಾಗಿ ನಾವು ಕಾಯಬೇಕು. ಪ್ರಕರಣವು ಅದರ ಅರ್ಜಿಯ ಅರ್ಹತೆಯ ಮೇಲೆ ನಿಂತಿಲ್ಲ, ಬದಲಾಗಿ ಮೆಂಟೇನೆಬಿಲಿಟಿ (ನಿರ್ವಹಣಾ ಸಾಮರ್ಥ್ಯ) ಆಧಾರದ ಮೇಲೆ ನಿಂತಿದೆ. ಕಲಂ 3 ಸಹ ಅದನೆ ಸ್ಪಷ್ಟವಾಗಿ ತಿಳಿಸುತ್ತದೆ ಎಂದರು.

ಇನ್ನೂ ಪ್ರಕರಣ ಕುರಿತು ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ಒಂದು ನಿರ್ಣಯಕ್ಕೆ ಬರಬೇಕಿದೆ. ಈ ಸಂಬಂಧ ಮುಂದಿನ ವಾರವೇ ಸರ್ವ ಪಕ್ಷ ಸಭೆಯಲ್ಲಿ ಎಲ್ಲ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.












Click it and Unblock the Notifications