ಮಾಜಿ ಶಾಸಕ ಲಕ್ಷ್ಮಣ ಸವದಿಗೆ ಒಲಿದು ಬಂದ ಸಚಿವ ಸ್ಥಾನ!
ಬೆಂಗಳೂರು, ಆಗಸ್ಟ್ 20 : ಬಿಜೆಪಿ ಹೈಕಮಾಂಡ್ ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡಿದೆ. 17 ಶಾಸಕರು ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ನೂತನ ಸಚಿವರ ಪ್ರಮಾಣ ವಚನ ಸಮಾರಂಭ ರಾಜಭವನದ ಗಾಜಿನ ಮನೆಯಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಬಿಜೆಪಿ ಹೈಕಮಾಂಡ್ ಸಚಿವರಾಗುವ ಶಾಸಕರ ಪಟ್ಟಿಯನ್ನು ಅಂತಿಮಗೊಳಿಸಿ ಯಡಿಯೂರಪ್ಪಗೆ ನೀಡಿದೆ.
ಅಚ್ಚರಿ ಎಂಬಂತೆ ಮಾಜಿ ಶಾಸಕ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಅಥಣಿ ಕ್ಷೇತ್ರದ ಮಾಜಿ ಶಾಸಕರಾದ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಲಕ್ಷ್ಮಣ ಸವದಿ ಅವರನ್ನು ಸಚಿವರನ್ನಾಗಿ ಮಾಡುವ ಹೈಕಮಾಂಡ್ ಲೆಕ್ಕಾಚಾರ ಕುತೂಹಲಕ್ಕೆ ಕಾರಣವಾಗಿದೆ.

ಲಕ್ಷ್ಮಣ ಸವದಿಗೆ ಡಿ. ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿದ್ದರು. ಸಹಕಾರ ಖಾತೆಯ ಹೊಣೆಯನ್ನು ಅವರಿಗೆ ನೀಡಲಾಗಿತ್ತು. 2013ರ ಚುನಾವಣೆಯಲ್ಲಿ ಅವರು 74, 299 ಮತಗಳನ್ನು ಪಡೆದು ಜಯಗಳಿಸಿದ್ದರು. ಆದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರಲಿಲ್ಲ.
2018ರ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಮಹೇಶ್ ಕಮಟಳ್ಳಿ ವಿರುದ್ಧ ಲಕ್ಷ್ಮಣ ಸವದಿ ಕಣಕ್ಕಿಳಿದಿದ್ದರು. 79, 763 ಮತಗಳನ್ನು ಪಡೆದು ಸೋಲು ಕಂಡಿದ್ದರು. ಆದರೆ, ಬಿಜೆಪಿ ಅವರಿಗೆ ಸಚಿವರಾಗುವ ಅವಕಾಶ ನೀಡಿದೆ.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಮಂಗಳವಾರ ಯಡಿಯೂರಪ್ಪ ನಿವಾಸದ ಮುಂದೆ ಮಾಧ್ಯಮಗಳ ಜೊತೆ ಮಾತನಡಿದ ಲಕ್ಷ್ಮಣ ಸವದಿ, 'ಪಕ್ಷಕ್ಕೆ ಸಲ್ಲಿಸಿರುವ ಸೇವೆ, ನಿಷ್ಠೆಯನ್ನು ಗಮನಿಸಿ ಸಚಿವ ಸ್ಥಾನ ನೀಡಿರಬಹುದು" ಎಂದು ಹೇಳಿದರು.
ಅಥಣಿ ಕ್ಷೇತ್ರದ ಶಾಸಕರಾಗಿದ್ದ ಮಹೇಶ್ ಕಮಟಳ್ಳಿ ಅನರ್ಹಗೊಂಡಿದ್ದಾರೆ. ಒಂದು ವೇಳೆ ಉಪ ಚುನಾವಣೆ ಎದುರಾದರೆ ಲಕ್ಷ್ಮಣ ಸವದಿ ಅವರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುವ ಚಿಂತನೆ ಬಿಜೆಪಿ ಪಕ್ಷದ್ದಾಗಿದೆ. ಆದ್ದರಿಂದ ಸಚಿವ ಸ್ಥಾನ ನೀಡಲಾಗಿದೆ.












Click it and Unblock the Notifications