ತಡರಾತ್ರಿ ಉಸ್ತುವಾರಿ ಭೇಟಿ ಮಾಡಿದ ಸಿದ್ದು: ಕಾಂಗ್ರೆಸ್ ನಲ್ಲಿ ಬದಲಾವಣೆಯ ಗಾಳಿ!
ಭಾನುವಾರ (ಜೂ 4) ರಾತ್ರಿ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ.
ದಿಗ್ವಿಜಯ್ ಸಿಂಗ್ ಅನ್ನೋ ನಾಮಕೇವಾಸ್ತೆ ವ್ಯಕ್ತಿ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾಗ ಮತ್ತು ಈಗ ಕೆ ಸಿ ವೇಣುಗೋಪಾಲ್ ಉಸ್ತುವಾರಿ ವಹಿಸಿಕೊಂಡ ನಂತರ, ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಶಿಸ್ತು ಹೆಚ್ಚಾಗುತ್ತಿದೆಯೇ? ಕಾರ್ಯಕರ್ತರು ಮತ್ತು ಮುಖಂಡರ ಪ್ರಕಾರ ಹೌದು.
ಪಕ್ಷದಿಂದ ಬಿಟ್ಟುಹೋಗಲು ಒಂದು ಹೆಜ್ಜೆ ಹೊರಗಿಟ್ಟಿದ್ದ ವಿಶ್ವನಾಥ್, ರಾಜ್ಯ ಮುಖಂಡರ ಜೊತೆ ಮುನಿಸಿಕೊಂಡಿದ್ದ ಜಾಫರ್ ಶರೀಫ್ ಮುಂತಾದ ಹಿರಿಯ ಮುಖಂಡರನ್ನು ಭೇಟಿಯಾಗಿ, ಮನವೊಲಿಸಿದ್ದ ವೇಣುಗೋಪಾಲ್, ಭಾನುವಾರ (ಜೂ 4) ತಡರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾರೆ.
ಇಬ್ಬರೂ ಭೇಟಿಯಾದರು ಅನ್ನೋದಕ್ಕಿಂತ ತಾನಿದ್ದ ಜಾಗಕ್ಕೆ ಮುಖ್ಯಮಂತ್ರಿಗಳನ್ನು ಕರೆಸಿ ವೇಣುಗೋಪಾಲ್ ಮಾತುಕತೆ ನಡೆಸಿದ್ದಾರೆ ಎನ್ನುವುದು, ರಾಜ್ಯ ಕಾಂಗ್ರೆಸ್ ನಲ್ಲಿ ಬೀಸುತ್ತಿರುವ ಬದಲಾವಣೆಯ ಗಾಳಿಯೇ ಎನ್ನುವುದು ಇಲ್ಲಿರುವ ಪ್ರಶ್ನೆ.
ಭಾನುವಾರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ವೇಣುಗೋಪಾಲ್ ತಂಗಿರುವ ಕುಮಾರಕೃಪಾ ಅತಿಥಿಗೃಹಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ವೇಣುಗೋಪಾಲ್ ಜೊತೆ ಕ್ಲೋಸ್ ಡೋರ್ ಮಾತುಕತೆ ನಡೆಸಿದ್ದಾರೆ.
ಈ ಹಿಂದೆ ದಿಗ್ವಿಜಯ್ ಸಿಂಗ್ ತಾವೇ ಖುದ್ದಾಗಿ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಹೋಗಿ ಮಾತುಕತೆ ನಡೆಸುತ್ತಿದ್ದರೆ, ವೇಣುಗೋಪಾಲ್ ಮುಖ್ಯಮಂತ್ರಿಗಳನ್ನೇ ತಾನಿದ್ದ ಜಾಗಕ್ಕೆ ಕರೆಸಿಕೊಂಡಿದ್ದು ಗಮನಿಸಬೇಕಾದ ಅಂಶ. ಮುಂದೆ ಓದಿ..

ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ
ಕೆಲವು ದಿನಗಳ ಕೆಳಗೆ ಕೆಪಿಸಿಸಿ ಕಚೇರಿಗೆ ಕರೆಸಿಕೊಂಡು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದ ವೇಣುಗೋಪಾಲ್, ಈಗ ತಾನು ತಂಗಿರುವ ಗೆಸ್ಟ್ ಹೌಸಿಗೆ ಸಿದ್ದರಾಮಯ್ಯನವರನ್ನು ಕರೆಸಿಕೊಂಡು, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎನ್ನುವ ಸಂದೇಶವನ್ನು ರವಾನಿಸಿದ್ದಂತಿದೆ.

ಸೌಜನ್ಯಕ್ಕಾದರೂ ಬಾಗಿಲ ಬಳಿ ಬಂದು ಸ್ವಾಗತಿಸಲಿಲ್ಲ
ರಾಜ್ಯದ ಮುಖ್ಯಮಂತ್ರಿಯೊಬ್ಬರು ಮನೆಬಾಗಿಲಿಗೆ ಬಂದಾಗ, ಸೌಜನ್ಯಕ್ಕಾದರೂ ಬಾಗಿಲ ಬಳಿ ಹೋಗಿ ಸ್ವಾಗತಿಸದ ವೇಣುಗೋಪಾಲ್, ನೇರವಾಗಿ ತಮ್ಮ ಕೊಠಡಿಗೇ ಮುಖ್ಯಮಂತ್ರಿಗಳನ್ನು ಕರೆಸಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪ್ರಜಾವಾಣಿ ವರದಿ ಮಾಡಿದೆ.

ನ್ಯಾಷನಲ್ ಹೆರಾಲ್ಡಿಗೆ ಮರುಜೀವ
ಸೋನಿಯಾ ಮತ್ತು ರಾಹುಲ್ ಗಾಂಧಿಯವರನ್ನು ಕೋರ್ಟ್ ಮೆಟ್ಟಲೇರಿಸಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮತ್ತೆ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ, ಪೂರ್ವಭಾವಿ ತಯಾರಿಗಾಗಿ ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿದ್ದರು.
ಇದೇ ವಿಚಾರಕ್ಕಾಗಿ ಸಿದ್ದರಾಮಯ್ಯ ಅವರನ್ನು ವೇಣುಗೋಪಾಲ್ ಕರೆಸಿಕೊಂಡಿದ್ದರು ಎನ್ನಲಾಗುತ್ತಿದೆ.

ಜೂನ್ ಹನ್ನೆರಡರಂದು ಪತ್ರಿಕೆಗೆ ಮರುಚಾಲನೆ
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಇದೇ ಜೂನ್ ಹನ್ನೆರಡರಂದು ಮರುಚಾಲನೆ ಸಿಗಲಿದೆ. ಉಪರಾಷ್ಟ್ರಪತಿ ಅನ್ಸಾರಿ, ರಾಹುಲ್ ಗಾಂಧಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ, ಇದಕ್ಕೆ ಪೂರ್ವಭಾವಿಯಾಗಿ ಮಾತುಕತೆ ನಡೆಸಲು ವೇಣುಗೋಪಾಲ್, ಸಿಎಂ ಕರೆಸಿಕೊಂಡಿದ್ದರು.

ಬದಲಾಗುತ್ತಿರುವ ವರ್ಕಿಂಗ್ ಸ್ಟೈಲ್
ಆದರೂ, ವೇಣುಗೋಪಾಲ್ ಎರಡೆರಡು ಬಾರಿ ತಾನಿದ್ದ ಜಾಗಕ್ಕೇ ಮುಖ್ಯಮಂತ್ರಿಗಳನ್ನು ಕರೆಸಿಕೊಂಡು, ಕಾಂಗ್ರೆಸ್ ನಲ್ಲಿ ಬದಲಾಗುತ್ತಿರುವ ವರ್ಕಿಂಗ್ ಸ್ಟೈಲ್ ಅನ್ನು ತೋರಿಸಿಕೊಟ್ಟಿದ್ದಾರೆ.












Click it and Unblock the Notifications