ಪುಂಡರಿಗೆ ಪ್ರೇಮಿಗಳೆಂದರೆ ಆದಾಯ ತರುವ ಚಿಟ್ಟೆಗಳು
ತುಮಕೂರು, ಅ.23: ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಜನರಿಗೆ ಮಾರ್ಕೋನಹಳ್ಳಿ ಜಲಾಶಯ ವೀಕೆಂಡ್ ಪಿಕ್ನಿಕ್ ಸ್ಪಾಟ್ ಆಗಿದೆ. ಆದರೆ, ರಜಾ ಮೋಜಿನಲ್ಲಿ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಲಗ್ಗೆ ಹಾಕುವ ಪ್ರವಾಸಿಗರನ್ನು ಅಕ್ಷರಶಃ ಸುಲಿಗೆ ಮಾಡಲಾಗುತ್ತಿದೆ. ಸ್ಥಳೀಯ ಯುವಕರು ಇದನ್ನೇ ತಮ್ಮ ಬಂಡವಾಳ ಮಾಡಿಕೊಂಡುಅಕ್ಷರಶಃ ಲೂಟಿ ಮಾಡುತ್ತಿದ್ದಾರೆ.
ಸರ್ ಎಂ ವಿಶ್ವೇಶ್ವರಯ್ಯ ಅವರು ನಿರ್ಮಿಸಿದ ಮಾರ್ಕೋನಹಳ್ಳಿ ಜಲಾಶಯ ಇದು. ಪ್ರೇಮಿಗಳು ಬೆಳಗ್ಗೆ ಬಂದು ಸಂಜೆ ಮನೆ ತಲುಪಲು ಸಮೀಪದ ವಿಶ್ರಾಂತಿ ತಾಣ. ಕುಟುಂಬ ಸಮೇತ ಬರುವ ಪ್ರವಾಸಿಗರು ಸಂಜೆಯಾಗುತ್ತಿದ್ದಂತೆಯೇ ಖಾಲಿಯಾಗುತ್ತಾರೆ. ಆದರೆ, ಪ್ರೇಮಿಗಳು ಸೂರ್ಯಾಸ್ತ ವೀಕ್ಷಿಸಿ, ಸಾವಕಾಶವಾಗಿ ವಾಪಸಾಗಲು ಬಯಸುತ್ತಾರೆ.
ಈ ಅವಕಾಶಕ್ಕಾಗಿಯೇ ಕಾಯುವ ಮೀನುಗಾರರು ಸೇರಿದಂತೆ ಸ್ಥಳೀಯ ಕೆಲ ಯುವಕರ ತಂಡಗಳು ಪ್ರೇಮಿಗಳಿಗೆ ಇನ್ನಿಲ್ಲದ ಕಾಟ ಕೊಡುತ್ತವೆ. ಬೋಟಿಂಗ್ ಮಾಡಿಸುವ ನೆಪ ಮುಂದು ಮಾಡಿ ಕಿರುಕುಳ ಕೊಡುತ್ತಾರೆ. ದುಡ್ಡಿನ ಆಸೆಗಾಗಿ ಮೀನು ಹಿಡಿಯುವ ತೆಪ್ಪಗಳಲ್ಲಿ ಬೋಟಿಂಗ್ ಮಾಡಿಸುತ್ತಾರೆ. ಪ್ರೇಮಿಗಳನ್ನು ಅಸಹ್ಯಕರವಾಗಿ ನಡೆಸಿಕೊಳ್ಳುತ್ತಾರೆ.
ಪ್ರೇಮಿಗಳು ಮೊದಲೇ ಮನೆಯವರಿಗೆ ತಿಳಿಸದೆ ಇಂತಹ ತಾಣಗಳಿಗೆ ಬರುತ್ತಾರೆ. ಕಿಡಿಗೇಡಿಗಳಿಂದ ಲೂಟಿಗೆ ಒಳಗಾದರೂ ಪೊಲೀಸರಿಗೂ ದೂರು ನೀಡಲು ಹೋಗುವುದಿಲ್ಲ. ತಮ್ಮಲ್ಲಿರುವ ಚಿನ್ನಾಭರಣ, ನಗದು ಕಳೆದುಕೊಳ್ಳುವುದರ ಜೊತೆಗೆ ತಮ್ಮ ಗೌರವಕ್ಕೂ ಧಕ್ಕೆ ಬರುವ ಕಾರಣ ಪೊಲೀಸರೆಂದರೆ ಭಯ. ನೂರಾರು ಪ್ರೇಮಿಗಳನ್ನು ಬೆದರಿಸಿ, ಹಣ ಮಾಡುವ ದಂಧೆಯಲ್ಲಿ ತೊಡಗಿರುವ ಕಿಡಿಗೇಡಿಗಳಿಗೆ ಇದೇ ವರ.
ಬೆಳಗ್ಗೆಯಿಂದ ಸಂಜೆವರೆಗೆ ರೋಲ್ ಕಾಲ್ ಸುಳಿವು ಇಲ್ಲಿ ಸಿಗುವುದಿಲ್ಲ. ಕುಟುಂಬ ಸಮೇತ ಆಗಮಿಸುವ ಪ್ರವಾಸಿಗರ ಮಧ್ಯೆ ಪ್ರೇಮಿಗಳು ಬಾನಕ್ಕಿಗಳಂತೆ ವಿಹರಿಸುತ್ತಾರೆ. ಆದರೆ, ಪ್ರವಾಸಿಗರು ಖಾಲಿಯಾಗುತ್ತಿದ್ದಂತೆ ರೋಲ್ ಕಾಲ್ ತಂಡಗಳು ಜಾಗೃತವಾಗುತ್ತದೆ. ಮುಂದೆ, ತಮ್ಮ ಪಾಡಿಗೆ ಇದ್ದ ಪ್ರೇಮಿಗಳನ್ನು ಬೋಟಿಂಗ್ ಗೆ ಆಹ್ವಾನಿಸುತ್ತವೆ.
ಪ್ರವಾಸಿ ಯುವಕರು ಬೋಟಿಂಗ್ ಎಂಜಾಯ್ ಮಾಡುವಾಗ ಅದನ್ನು ನೋಡಿ ಸುಮ್ಮನಿರಲು ಸಾಧ್ಯವಾಗದ ಪ್ರೇಮಿಗಳೂ ಬೋಟಿಂಗ್ ಗೆ ಸಜ್ಜಾಗುತ್ತಾರೆ. ಕೆಲವರಿಗೆ ಮೀನುಗಾರರ ಆಶ್ರಯ ಸಿಕ್ಕು ತೆಪ್ಪದಲ್ಲಿಯೇ ಬೋಟಿಂಗ್ ವಿಹಾರ ನಡೆಯುತ್ತದೆ. ಇನ್ನು ಕೆಲವರು ಅಲ್ಲಿಯೇ ಇರುವ ತೆಪ್ಪಗಳಲ್ಲಿ ಕುಳಿತು ಬೋಟಿಂಗ್ ಅನುಭವ ಪಡೆಯುತ್ತಾರೆ. ಇದಿಷ್ಟೆ ಸಾಕಾಗುತ್ತದೆ ರೋಲ್ ಕಾಲ್ ವೀರರಿಗೆ!

ಬಾಯಿಗೆ ಬಂದಂತೆ ಪ್ರೇಮಿಗಳನ್ನು ನಿಂದಿಸುತ್ತಾರೆ
ತಕ್ಷಣ ಈ ಪ್ರೇಮಿಗಳ ಸುತ್ತ ಯುವಕರ ದಂಡು ಸೇರುತ್ತದೆ. ಈವರೆಗೆ ನಿಮ್ಮ ಆಟಗಳನ್ನೇಲ್ಲಾ ನೋಡಿದ್ದೇವೆ. ಏನಾದ್ರೂ ಮಾಡಿಕೊಳ್ಳಿ, ಅದು ನಮಗೆ ಸಂಬಂಧಿಸಿದ್ದಲ್ಲ. ಆದ್ರೆ, ತೆಪ್ಪದಲ್ಲಿ ಹೋಗಿ ಹಾಳು ಮಾಡಿದ್ದೀರಿ? ಡ್ಯಾಮೇಜ್ ಆಗಿದೆ ಎಂದು ಬಾಯಿಗೆ ಬಂದಂತೆ ಪ್ರೇಮಿಗಳನ್ನು ನಿಂದಿಸುತ್ತಾರೆ. ಪ್ರೇಯಸಿಯ ಎದುರೇ ಪ್ರಿಯಕರನನ್ನು ಬಾಯಿಗೆ ಬಂದಂತೆ ಹಿಯಾಳಿಸುತ್ತಾರೆ. ಅವರ ಗಂಡಸುತನಕ್ಕೂ ಸವಾಲಾಕುವ ರೀತಿಯಲ್ಲಿಯೇ ಆ ಮಾತುಗಳು ಮುಂದುವರಿಯುತ್ತವೆ. ಇದರಿಂದ ವಿಚಲಿತರಾಗುವ ಯುವತಿಯರು ತಮ್ಮಲ್ಲಿರುವ ಆಭರಣಗಳ ಜೊತೆಗೆ ನಗದನ್ನು ಕೊಟ್ಟು ಪ್ರಿಯಕರನನ್ನು ಕಾಪಾಡುತ್ತಾರೆ. ತಮ್ಮನ್ನು ರಕ್ಷಿಸಬೇಕಾದ ಯುವಕರನ್ನು ಯುವತಿಯರೇ ರಕ್ಷಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಅಂತಹ ಅಸಹ್ಯಕರ ವಾತಾವರಣ ನಿರ್ಮಿಸಿ, ಲೂಟಿ ಮಾಡಲಾಗುತ್ತದೆ.

ಗಲಾಟೆ ಮಾಡಿದ್ರೆ ಮರ್ಯಾದೆ ಹರಾಜು
ತಮ್ಮೆದುರು ಯುವತಿಯರನ್ನು ಬೈಯ್ಯುತ್ತಿರುವಾಗ ಯುವಕರು ತೆಪ್ಪಗಿರಲೇಬೇಕು. ಇಲ್ಲಾಂದ್ರೆ ಮೊದಲೇ ಬಿದ್ದ ಏಟುಗಳ ಜೊತೆಗೆ ಮತ್ತಷ್ಟು ಬೀಳುತ್ತವೆ. ಮುಖ ಮೂತಿ ಊದಿಸಿಕೊಂಡು ಹೋಗಬೇಕಾಗುತ್ತದೆ. ಜೇಬಲ್ಲಿ ಇರುವಷ್ಟು ಕೊಟ್ಟು ಹೋಗಲೇಬೇಕು. ಗಲಾಟೆ ಮಾಡಿದ್ರೆ ಸುತ್ತಮುತ್ತಲವರನ್ನು ಕರೆಸಿ ಮರ್ಯಾದೆ ಹರಾಜು ಹಾಕುವುದು ಇಲ್ಲಿ ಮಾಮೂಲಿಯಾಗಿದೆ.
ಇನ್ನು ಜಲಾಶಯದಲ್ಲಿ ನೀರು ಕಡಿಮೆ ಇರುವ ಕಾರಣ ಪ್ರೇಮಿಗಳು ಹಿನ್ನಿರಿಗೂ ಹೋಗುತ್ತಾರೆ. ಅಲ್ಲಿಯೇ ರೋಲ್ ಕಾಲ್ ಗೆ ಗುರಿಯಾಗುತ್ತಾರೆ. ಎಲ್ಲವನ್ನೂ ಕಳೆದುಕೊಂಡು ಅಳುತ್ತಾ ಹೋಗುತ್ತಾರೆ ಎನ್ನುತ್ತಾರೆ ಕಾವಲುಗಾರರು. (Pic-Wikimedia Commons)

ಮೀನುಗಾರಿಕೆ ಇಲಾಖೆ ಅಸಹಾಯಕ ಸ್ಥಿತಿ
ಬೆರಳೆಣಿಕೆಯಷ್ಟು ತೆಪ್ಪಗಳಿಗೆ ಮಾತ್ರ ಮೀನು ಹಿಡಿಯಲು ಅವಕಾಶ ನೀಡಲಾಗಿದೆ. ಆದ್ರೆ, 40ಕ್ಕು ಹೆಚ್ಚು ತೆಪ್ಪಗಳು ಜಲಾಶಯದಲ್ಲಿವೆ. ಬಹುತೇಕ ತೆಪ್ಪಗಳು ಬೋಟಿಂಗ್ ಗೆ ಬಳಕೆಯಾಗುತ್ತಿವೆ. ಆದರೆ, ಮೀನುಗಾರಿಕೆ ಇಲಾಖೆ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸ್ಥಳೀಯರ ಒಗ್ಗಟ್ಟಿನ ಮುಂದೆ ಈ ಇಲಾಖೆಯದು ಅಸಹಾಯಕ ಸ್ಥಿತಿ ಎನ್ನುತ್ತಾರೆ ಮಾರ್ಕೋನಹಳ್ಳಿ ಗ್ರಾಮದ ಹಿರಿಯರೊಬ್ಬರು.
ಈಚಿನ ದಿನಗಳಲ್ಲಿ ಯುವತಿಯರ ಮೇಲೆ ದೌರ್ಜನ್ಯ, ಅತ್ಯಾಚಾರದಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಇತಿಹಾಸ ಪ್ರಸಿದ್ಧ ಮಾರ್ಕೋನಹಳ್ಳಿ ಜಲಾಶಯ ನೋಡಲು ಬರುವ ಪ್ರವಾಸಿಗರಿಗೆ ಹಾಗೂ ಯುವತಿಯರಿಗೆ ಕಿಡಿಗೇಡಿಗಳ ತಂಡ ಏನಾದರೂ ಅನಾಹುತ ಮಾಡುವ ಮುನ್ನವೇ ಪೊಲೀಸರು ಎಚ್ಚರ ವಹಿಸುವ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರು. (ಚಿತ್ರ- ಗೂಗ್ಲಿಚಿದು)

ಅಮೃತೂರು ಪಿಎಸ್ಐ ಮಂಜುನಾಥ್
ಪ್ರವಾಸಿಗರಿಗೆ ಕೆಲವರು ಕಿರುಕುಳ ನೀಡಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಆದರೆ, ಬೆದರಿಸಿ ಹಣ ವಸೂಲಿ ಮಾಡುವ ಪ್ರಕರಣ ಈವರೆಗೆ ಗಮನಕ್ಕೆ ಬಂದಿಲ್ಲ. ರಜಾ ದಿನಗಳಲ್ಲಿ ಕುಟುಂಬ ಸಮೇತರಾಗಿ ಬರುವ ಪ್ರವಾಸಿಗರ ರಕ್ಷಣೆಗಾಗಿ ಇಬ್ಬರು ಪೇದೆಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಕೆಲವೊಂದು ಬಾರಿ ಬೇರೆ ಕಡೆ ಬಂದೂಬಸ್ತ್ ಇದ್ದ ಸಮುಯದಲ್ಲಿ ಜಲಾಶಯದ ಕರ್ತವ್ಯಕ್ಕೆ ಪೋಲಿಸರನ್ನು ನಿಯೋಜನೆ ಮಾಡಲಾಗಿಲ್ಲ ಏನ್ನುತ್ತಾರೆ ಅಮೃತೂರು ಪಿಎಸ್ಐ ಮಂಜುನಾಥ್ ಹೂಗಾರ್.

ಮಾರ್ಕೋನಹಳ್ಳಿ ಜಲಾಶಯ ಬೆಂಗಳೂರಿನಿಂದ 90 ಕಿಮೀ
ಮಾರ್ಕೋನಹಳ್ಳಿ ಜಲಾಶಯ ಬೆಂಗಳೂರಿನಿಂದ ಸುಮಾರು 90 ಕಿಮೀ ದೂರದಲ್ಲಿದೆ. 1930ರಲ್ಲಿ ನಾಡಿನ ಮಹಾನ್ ಸಿವಿಲ್ ಮತ್ತು ಮೆಕಾನಿಕಲ್ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ಅವರು ನಿರ್ಮಿಸಿದ ಅಣೆಕಟ್ಟೆ ಇದು. ಇಡೀ ಏಷ್ಯಾದಲ್ಲೇ ಅತಿ ವಿಶಿಷ್ಟವಾಗಿ ನಿರ್ಮಿಸಲಾದ ಅಣೆಕಟ್ಟೆಯಿದು.

ನೂರಾರು ಹಳ್ಳಿಗಳಿಗೆ ಕೃಷಿ ನೀರಿನ ಅಣೆಕಟ್ಟೆ
88 ಅಡಿಯ ಅಣೆಕಟ್ಟೆ ಭರ್ತಿಯಾದರೆ ನೀರು ತಂತಾನೇ ಹೊರೆಹೋಗುತ್ತದೆ. ಕೆಳಗೆ ಯಡಿಯೂರಿನಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನ ಮುಳುಗಡೆಯಾಗದಿರಲಿ ಎಂದು ಅಂದೇ ಯೋಚಿಸಿದ ವಿಶ್ವೇಶ್ವರಯ್ಯ ಅವರು ಅಣೆಕಟ್ಟೆ ಎತ್ತರವನ್ನು 88 ಅಡಿಗೆ ಸೀಮಿತಗೊಳಿಸಿದರು.
ಸುತ್ತಮುತ್ತಲ ನೂರಾರು ಹಳ್ಳಿಗಳಿಗೆ ಕೃಷಿ ನೀರಾವರಿಗಾಗಿ ಈ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ತುಮಕೂರು ಜಿಲ್ಲೆಯ ದೇವರಾಯದುರ್ಗ ಬೆಟ್ಟದಡಿ ಉದ್ಭವವಾಗುವ ಕಾವೇರಿ ಉಪನದಿಯಾದ ಶಿಂಷಾ ನದಿಗೆ ಅಡ್ಡವಾಗಿ ಈ ಅಣೆಕಟ್ಟೆ ಕಟ್ಟಲಾಗಿದೆ.

ಮಾರ್ಕೋನಹಳ್ಳಿ ಜಲಾಶಯಕ್ಕೆ ದಾರಿ ಯಾವುದಯ್ಯಾ?
ಬೆಂಗಳೂರಿನಿಂದ ಮಾರ್ಕೋನಹಳ್ಳಿ ಜಲಾಶಯಕ್ಕೆ ದಾರಿ ಹೀಗಿದೆ:
Bangalore to Nelamangala - 28 KMs - turn left to NH48
Nelamangala to Kunigal - 44 KMs - continue in NH48
Kunigal to KSTDC restaurant -16 KMs - turn left to a small road (2 KMs before Yediyur)
KSTDC restaurant to Dam - single lane road - 5 KMs
-
Moodbidri: ಮಹಿಳೆಯರನ್ನು ಮಂಚಕ್ಕೆ ಕರೆದಿದ್ದ ಆರೋಪ: ಮೂಡುಬಿದರೆ ಇನ್ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications