ಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಕುಮಾರಸ್ವಾಮಿ ಯತ್ನ
ಬೆಂಗಳೂರು, ಜುಲೈ 24: ಅಧಿಕಾರಕ್ಕೆ ಏರಿದ ದಿನದಿಂದಲೂ ಮಾಧ್ಯಮಗಳ ಮೇಲೆ ಅತೃಪ್ತಿ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಧ್ಯಮಗಳ ಮೇಲೆ ಅಂಕುಶ ಸಾಧಿಸಲು ಹೊಸ ನಿಯಮ ತರಲು ಮುಂದಾಗಿದ್ದಾರೆ.
ವಿಧಾನಸೌಧಕ್ಕೆ ಮಾಧ್ಯಮ ಪ್ರತಿನಿಧಿಗಳು ನಿಗದಿತ ಸಮಯದಲ್ಲಿ ಮಾತ್ರವೇ ಬರುವಂತೆ ನಿಯಮ ಮಾಡುವ ಬಗ್ಗೆ ಕುಮಾರಸ್ವಾಮಿ ಚಿಂತಿಸಿದ್ದು, ಈ ಕುರಿತು ಕೆಲವೇ ದಿನಗಳಲ್ಲಿ ಆದೇಶ ಹೊರಬರುವ ಸಾಧ್ಯತೆ ಇದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕುಮಾರಸ್ವಾಮಿ, 'ಪತ್ರಕರ್ತರು ಪದೇ ಪದೇ ವಿಧಾನಸೌಧಕ್ಕೆ ಬಂದು, ಸಚಿವರು, ಅಧಿಕಾರಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿರುತ್ತಾರೆ, ಇದರಿಂದ ಅವರಿಗೆ ಸುಗಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ' ಎಂದು ಹೇಳಿದರು.

ಮಾಧ್ಯಮಗಳ ಮೇಲೆ ಎಚ್ಡಿಕೆ ಅತೃಪ್ತಿ
ಅಧಿಕಾರಕ್ಕೆ ಏರಿದ ಮೇಲೆ ಹಲವು ಬಾರಿ ಮಾಧ್ಯಮಗಳ ವಿರುದ್ಧ ನೇರವಾಗಿಯೇ ಕುಮಾರಸ್ವಾಮಿ ಅತೃಪ್ತಿ ಹೊರಹಾಕಿದ್ದರು. ಮಾಧ್ಯಮಗಳು ತಮಗೆ ತೋಚಿದ್ದನ್ನೇ ಜನರಿಗೆ ತೋರಿಸುತ್ತಿವೆ, ಸರ್ಕಾರದ ಸಾಧನೆಗಳನ್ನು ತೋರಿಸುತ್ತಿಲ್ಲ ಎಂದು ಇತ್ತೀಚೆಗಷ್ಟೆ ಹೇಳಿದ್ದರು. ಈಗ ಮಾಧ್ಯಮಗಳನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಿದ್ದಾರೆ.

ಸಿಎಸ್ ಮೂರ್ತಿ ಹುಟ್ಟುಹಬ್ಬದ ಸುದ್ದಿಯಿಂಧ ಅಸಮಾಧಾನ
ಇತ್ತೀಚೆಗೆ ವಿಧಾನಸೌಧದಲ್ಲಿ ಕಾರ್ಯದರ್ಶಿ ಮೂರ್ತಿ ಅವರ ಹುಟ್ಟುಹಬ್ಬ ಆಚರಿಸಿಕೊಂಡಿದ್ದನ್ನು ಕೆಲವು ಸುದ್ದಿ ಮಾಧ್ಯಮಗಳು ಟೀಕಿಸಿ ಸುದ್ದಿ ಮಾಡಿದ್ದವು ಇದು ಅಧಿಕಾರಿಗಳ ಬೇಸರಕ್ಕೆ ಕಾರಣವಾಗಿದ್ದು, ಶಕ್ತಿಸೌಧದ ಪ್ರಮುಖ ಅಧಿಕಾರಿಗಳೇ ವಿಧಾನಸೌಧದಲ್ಲಿ ಮಾಧ್ಯಮದವರನ್ನು ನಿಯಂತ್ರಿಸಲು ಸಿಎಂ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ವಿಧಾನಸೌದದಲ್ಲಿ ದಲ್ಲಾಳಿಗಳು
ವಿಧಾನಸೌದದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದ ಸಿಎಂ ಅವರು, ವಿಧಾನಸೌದದಲ್ಲೇ ದಲ್ಲಾಳಿಗಳು, ಮಧ್ಯವರ್ತಿಗಳು ಓಡಾಡುತ್ತಿರುವುದು ಗಮನಿಸಿದ್ದೇನೆ ಅವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ ಎಂದಿದ್ದಾರೆ.

ರೇವಣ್ಣ ನಿವಾಸ ನವೀಕರಣ ಇಲ್ಲ
ಸಚಿವ ರೇವಣ್ಣ ಅವರ ನಿವಾಸವನ್ನು ನವೀಕರಣ ಮಾಡಲಾಗುತ್ತಿಲ್ಲ, ಕುಮಾರಕೃಪದಲ್ಲಿ ಹೊಸ ಕಟ್ಟಡ ಕಟ್ಟಲಾಗುತ್ತಿದೆ. ಅಲ್ಲದೆ ಮಳೆ ನೀರು ಹೋಗುವ ಪೈಪ್ ದುರಸ್ಥಿ ಮಾಡಲಾಗುತ್ತಿದೆ ಅದಕ್ಕೆ ಕುಮಾರಕೃಪದಲ್ಲಿ ಮರಳು, ಕಲ್ಲು ಸಂಗ್ರಹಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.












Click it and Unblock the Notifications