ಪ್ರಾಣಿಗಳ ಪರ ಎಚ್ಡಿಕೆ ನಿಲವು, ಬಂಡಿಪುರ ಎಲಿವೇಟೆಡ್ ರಸ್ತೆಗೆ 'No Way'
ಬೆಂಗಳೂರು, ಆಗಸ್ಟ್ 04: ಕೇಂದ್ರದ ಪ್ರಸ್ತಾವಿತ ಬಂಡಿಪುರ ಎಲಿವೇಟೆಡ್ ರಸ್ತೆ ನಿರ್ಮಾಣ ಸಾಧ್ಯವೇ ಇಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಪ್ರಾಣಿಪ್ರೇಮಿಗಳಿಗೆ ದೊಡ್ಡ ಸಮಾಧಾನ ನೀಡಿದ್ದಾರೆ.
ಕೇಂದ್ರ ಸರ್ಕಾರವು ಬಂಡಿಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿತ್ತು. ಅಲ್ಲದೆ ಬಂಡಿಪುರದಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರದ ಒಪ್ಪಿಗೆಯನ್ನು ಕೇಳಿತ್ತು.
ಬಂಡೀಪುರ: ಮನುಷ್ಯರ ತೆವಲಿಗೆ ವನ್ಯಪ್ರಾಣಿಗಳು ಬಲಿಯಾಗಬೇಕೇ?
ಕೇಂದ್ರದ ಪ್ರಸ್ತಾವಕ್ಕೆ ವನ್ಯಜೀವಿ ಪರರು, ಅರಣ್ಯಾಧಿಕಾರಿಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಕಾಡಿಗೆ ಈಗಾಗಲೇ ಮಾನವ ಹಸ್ತಕ್ಷೇಪ ಹೆಚ್ಚಾಗಿದೆ. ರಸ್ತೆ ನಿರ್ಮಾಣವಾದರೆ ವನ್ಯಜೀವಿಗಳ ಬದುಕು ಹಳಿ ತಪ್ಪುತ್ತದೆ, ರಾತ್ರಿ ವಾಹನ ಸಂಚಾರ ಪ್ರಾಣಿಗಳ ಜೀವಕ್ಕೆ ಕುತ್ತು ತರುತ್ತದೆ ಎಂದುದೊಡ್ಡ ಮಟ್ಟದಲ್ಲಿ ಕೂಗು ಎದ್ದಿತ್ತು.
ರಾತ್ರಿ ಸಂಚಾರ ನಿರ್ಭಂದ ತೆರವು ಸಾಧ್ಯವಿಲ್ಲ
ಈ ಬಗ್ಗೆ ನಿನ್ನೆ ತಮ್ಮ ನಿಲಲು ತಿಳಿಸಿದ ಕುಮಾರಸ್ವಾಮಿ ಅವರು, ಬಂಡಿಪುರದಲ್ಲಿ ವಾಹನಗಳ ರಾತ್ರಿ ಸಂಚಾರಕ್ಕೆ ಹೈಕೋರ್ಟ್ ನಿಶೇಧ ಹೇರಿದೆ, ಸರ್ಕಾರವು ಇದರ ಪರವಾಗಿದೆ. ಹಾಗೂ ಉದ್ದೇಶಿತ ಎಲಿವೇಟೆಡ್ ರಸ್ತೆ ನಿರ್ಮಾಣ ಕಾರ್ಯಸಾಧುವಲ್ಲ ಎಂದು ಹೇಳಿದ್ದಾರೆ.
ಬಂಡೀಪುರ ಅರಣ್ಯದಲ್ಲಿ ಫ್ಲೈಓವರ್: ಕರ್ನಾಟಕ ಸರ್ಕಾರದ ರೆಡ್ ಸಿಗ್ನಲ್
ಸಾಮಾಜಿಕ ಜಾಲತಾಣದಲ್ಲಿ ವಿರೋಧ
ಕೇಂದ್ರದ ಪ್ರಸ್ತಾವದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಪ್ರಾಣಿ ಪ್ರಿಯರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕೆಲವು ರಾಜಕಾರಣಿಗಳು ಸಹ ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಅರಣ್ಯ ಸಚಿವರಿಂದಲೂ ನಿರಾಕರಣೆ
ಅರಣ್ಯ ಇಲಾಖೆ ಸಚಿವ ಆರ್.ಶಂಕರ್ ಸಹ ಕೇಂದ್ರದ ಪ್ರಸ್ತಾವದ ವಿರುದ್ಧ ನಿಂತಿದ್ದು, ಬಂಡಿಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿಯನ್ನೂ ನೀಡುವುದಿಲ್ಲ ಜೊತೆಗೆ ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೂ ಅವಕಾಶ ನೀಡಲಾಗದು ಎಂದು ಹೇಳಿದ್ದರು.
ಏನಿದು ಎಲಿವೇಟೆಡ್ ರಸ್ತೆ
ಬಂಡಿಪುರ ಅರಣ್ಯ ಪ್ರದೇಶದ ಮೇಲೆ ಫ್ಲೈ ಓವರ್ ರಸ್ತೆ ನಿರ್ಮಾಣ ಮಾಡುವುದೇ ಬಂಡಿಪುರ ಎಲಿವೇಟೆಡ್ ರಸ್ತೆ ನಿರ್ಮಾಣ. ಬಂಡಿಪುರ ಕಾಡಿನ ಕರ್ನಾಟಕದ ಭಾಗದಲ್ಲಿನ 24.20 ಕಿ.ಮೀ, ಕೇರಳ ರಾಜ್ಯದ 10.4 ಕಿ.ಮೀ ದೂರದವರೆಗೆ 5 ಎಲಿವೇಟೆಡ್ ರಸ್ತೆ ನಿರ್ಮಾಣ ಮಾಡುವುದು ಕೇಂದ್ರದ ಯೋಜನೆಯಾಗಿತ್ತು.