ಮುಡಾ ಪ್ರಕರಣದಲ್ಲಿ ದಿ.ರಾಕೇಶ್ ಸಿದ್ದರಾಮಯ್ಯ ಪಾತ್ರದ ಬಗ್ಗೆ ಕುಮಾರಸ್ವಾಮಿ ಅನುಮಾನ
ಮಂಡ್ಯ, ಆಗಸ್ಟ್ 27: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ವಿಚಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಪ್ರಕರಣದಲ್ಲಿ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿದ್ದು, ಇದೀಗ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣ ಪ್ರಕರಣದಲ್ಲಿ ದಿ.ರಾಕೇಶ್ ಸಿದ್ದರಾಮಯ್ಯ ಪಾತ್ರದ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಮುಡಾ ಹಗರಣದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ಟಾರ್ಚ್ ಹಾಕಿ ನೋಡಿದರೂ ಅಷ್ಟೇ, ಹಾಕದೇ ನೋಡದೇ ಇದ್ದರೂ ಅಷ್ಟೇ. ಅದು ಸರ್ಕಾರಿ ಭೂಮಿಯಾಗಿದೆ. ಸರ್ಕಾರಿ ಭೂಮಿ ಲಪಟಾಯಿಸಿ ಆ ಭೂಮಿ ನನ್ನದು ಎಂದು ಹದಿನೈದು ಸೈಟ್ ಪಡೆದಿದ್ದಾರೆ. ಇದಕ್ಕೆ ಮೊದಲು ಸಿಎಂ ಉತ್ತರಕೊಡಿ. ಹದಿನೈದಲ್ಲಾ..ಇಪ್ಪತ್ತು ಸೈಟ್ ತೆಗೆದುಕೊಳ್ಳಿ ಆದರೆ ಕಾನೂನು ಪ್ರಕಾರ ಸೈಟ್ ಬೇಕಾದರೆ ಪಡೆಯಿರಿ. ಇದಕ್ಕೆ ನಮ್ಮ ವಿರೋಧವಿಲ್ಲ ಎಂದರು.
ನಿಮ್ಮ ಪ್ರಕರಣದಲ್ಲಿ ನಿಮ್ಮದೇ ಸ್ವಂತ ಜಮೀನು ಇದ್ದು. ಆ ಜಮೀನಿನಲ್ಲಿ ಇಂದು ಸರ್ಕಾರ ವಶಪಡಿಸಿಕೊಂಡಿದ್ದರೆ, ಕಾನೂನು ಪ್ರಕಾರ ತೆಗೆದುಕೊಳ್ಳಿ. ನಮ್ಮದೇನು ತಕರಾರಿಲ್ಲ. ಅದಕ್ಕೆ ನಾನು ಎಂದೂ ಸಹ ವಿರೋಧ ಮಾಡಿಲ್ಲ. ಆದರೆ ಈ ಪ್ರಕರಣದಲ್ಲಿ ಸುಳ್ಳು ದಾಖಲೆ ಸೃಷ್ಟಿ ಮಾಡಿ, ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಸಾಮಾನ್ಯ ರೈತ ಖಾತೆ ಮಾಡಲು ಹೇಳಿದ್ರೆ ಮಾಡುತ್ತೀರಾ?. ಎಷ್ಟು ಸಲ ರೈತರನ್ನು ಅಲೆಸುತ್ತೀರಿ. ಭೂ ಪರಿವರ್ತನೆ ಮಾಡಿದ್ದೀರಿ ಅಲ್ವಾ, ಅದು ಯಾರ ಭೂಮಿ?. ಆ ವ್ಯಕ್ತಿ ಸತ್ತು 25 ವರ್ಷ ಆಗಿದೆ. ಸತ್ತಿರುವ ವ್ಯಕ್ತಿಯ ಹೆಸರಲ್ಲಿ ಭೂಮಿಯ ಡಿನೋಟಿಫಿಕೇಷನ್ ಮಾಡಿಸಿದ್ದೀರಿ. ಆ ವ್ಯಕ್ತಿ ಯಾವತ್ತು ಅರ್ಜಿ ಕೊಟ್ಟ . ಸತ್ತಿರುವ ಲಿಂಗನ ಹೆಸರಲ್ಲಿ ಡಿನೋಟಿಫಿಕೇಷನ್ ಮಾಡಿಸಿದ್ದು ಯಾರು..? ಎಂದು ಪ್ರಶ್ನಿಸಿದ್ದಾರೆ.
ಇನ್ನೊಬ್ಬ ಮಗ ಇದ್ದರಲ್ಲಾ ಹಿಂದೆ ಅವರು ಹೇಳಿ ಮಾಡಿಸಿದ್ದಾ..? ಈ ಹಿಂದೆ ಆಕ್ಟೀವಿಟಿಸ್ ಇಟ್ಟುಕೊಂಡಿದ್ದರಲ್ಲ. ನಿಮ್ಮ ಕುಟುಂಬದಲ್ಲಿ ಇದ್ದರಲ್ಲ ಅವರು ಮಾಡಿಸಿದ್ದಾ ಈ ಡಿನೋಟಿಫಿಕೇಷನ್ನನಾ..? ಈ ಹಗರಣದಲ್ಲಿ ಯಾರ ಪಾತ್ರವಿದೆ ಎಂದು ಸಿದ್ದರಾಮಯ್ಯ ಪುತ್ರ ದಿ.ರಾಕೇಶ್ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ.












Click it and Unblock the Notifications