"ಸ್ಥಿರ ಸರ್ಕಾರ ಯಾರಿಂದಲೂ ಸಾಧ್ಯವಿಲ್ಲ": ಹಂಗಾಮಿ ಸಿಎಂ ಘೋಷಣೆ
ಬೆಂಗಳೂರು, ಜುಲೈ 26: "ಯಾರಿಂದಲೂ ಸ್ಥಿರ ಸರ್ಕಾರ ನೀಡಲು ಸಾಧ್ಯವಿಲ್ಲ, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಆಡಳಿತವೊಂದೇ ಪರಿಹಾರ" ಎಂದು ಕರ್ನಾಟಕದ ಹಂಗಾಮಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ರೆಬೆಲ್ ಶಾಸಕರ ರಾಜೀನಾಮೆಯಿಂದಾಗಿ 15ನೇ ವಿಧಾನಸಭೆಯಲ್ಲಿ ಕುಮಾರಸ್ವಾಮಿ ವಿಶ್ವಾಸಮತ ಕಳೆದುಕೊಂಡಿದ್ದು, ಮೈತ್ರಿ ಸರ್ಕಾರದ 14 ತಿಂಗಳ ಅವಧಿ ಅಧಿಕಾರ ಅಂತ್ಯಕಂಡಿತ್ತು.
ನಾನು ಅತ್ಯಂತ ಸಂತುಷ್ಟ ವ್ಯಕ್ತಿ: ಎಚ್ ಡಿ ಕುಮಾರಸ್ವಾಮಿ
ಇದಾದ ಕೆಲ ದಿನಗಳ ಬಳಿಕ ಮೂವರು ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಆದೇಶಿಸಿದ್ದಾರೆ. ಬಿ.ಎಸ್ ಯಡಿಯೂರಪ್ಪ ಅವರು 4ನೇ ಬಾರಿಗೆ ಸಿಎಂ ಆಗಿ ಜುಲೈ 26ರಂದು ಸಂಜೆ 6 ಗಂಟೆ ನಂತರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ನಡುವೆ ಪ್ರಸಕ್ತ ರಾಜಕೀಯ ಸನ್ನಿವೇಶದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, "ಬಿಜೆಪಿ ಸೃಷ್ಟಿಸಿರುವ ರಾಜಕೀಯ ಗೊಂದಲದಿಂದಾಗಿ 20 ರಿಂದ 25 ಸ್ಥಾನದ ಉಪ ಚುನಾವಣೆ ಎದುರಿಸಬೇಕಾಗಬಹುದು, ಸರ್ಕಾರ ಇದಿಲ್ಲದೆಯೇ ಅಧಿಕಾರಕ್ಕೆ ಬಂದರೂ ಸ್ಥಿರ ಸರ್ಕಾರ ಇರಲಿದೆ ಎಂದು ಹೇಳಲು ಸಾಧ್ಯವಿಲ್ಲ, ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯೇ ಸೂಕ್ತ, ನಂತರ ಚುನಾವಣೆ ಎದುರಿಸಬಹುದು' ಎಂದು ಕುಮಾರಸ್ವಾಮಿ ಅವರು ಹೇಳಿದರು.
ಸಿಎಂ ಆಗುವ ಮೊದಲೇ ಕುಮಾರಸ್ವಾಮಿ ಆದೇಶಗಳಿಗೆ ತಡೆ ನೀಡಿದ ಯಡಿಯೂರಪ್ಪ
ರಾಮಲಿಂಗಾ ರೆಡ್ಡಿ ಭೇಟಿ: ಮಾಜಿ ಸಚಿವ, ಹಿರಿಯ ಕಾಂಗ್ರೆಸ್ಸಿಗ ರಾಮಲಿಂಗಾ ರೆಡ್ಡಿ ಅವರನ್ನು ಹಂಗಾಮಿ ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ ಬಳಿಕ ಕಾಂಗ್ರೆಸ್ ಅತೃಪ್ತ ಶಾಸಕರನ್ನು ವಾಪಸ್ ಕರೆಸಿಕೊಳ್ಳಲಾಗುತ್ತದೆ. ಈ ಮೂಲಕ ಬಿಜೆಪಿಗೆ ಸಂಖ್ಯಾಬಲದಲ್ಲಿ ಸೋಲುಂಟು ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಇದೆಲ್ಲಾ ಸುಳ್ಳು ಸುದ್ದಿ ಎಂದು ಕುಮಾರಸ್ವಾಮಿ ಅಲ್ಲಗೆಳೆದಿದ್ದಾರೆ.