ಬಳ್ಳಾರಿಯಲ್ಲಿ ಬಿಜೆಪಿಗೆ ಆಘಾತ: ಕೈ ಹಿಡಿಯಲು ಮುಂದಾದ ಕೂಡ್ಲಿಗಿ ಶಾಸಕ ನಾಗೇಂದ್ರ
ಬಳ್ಳಾರಿ, ಜನವರಿ 01: 2013ರ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಬಿ.ನಾಗೇಂದ್ರ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲು ಮುಂದಾಗಿರುವ ಸುದ್ದಿ ಬಂದಿದೆ. ಸಂಸದ ಶ್ರೀರಾಮುಲು ಅವರ ಅಪ್ತ ನಾಗೇಂದ್ರ ಅವರು ಇಂದಲ್ಲ ನಾಳೆ ಬಿಜೆಪಿಗೆ ಮತ್ತೆ ಸೇರ್ಪಡೆಯಾಗುತ್ತಾರೆ ಎಂಬ ಆಸೆ ಕಮರಿದೆ.
ಬಳ್ಳಾರಿಯಲ್ಲಿ ಕಮಲ ಮುದುಡುವಂತೆ ಮಾಡಲು ಸಂತೋಷ್ ಲಾಡ್ ನೇತೃತ್ವದಲ್ಲಿ ಕಾಂಗ್ರೆಸ್ ಪಡೆ ಸರ್ವಸನ್ನದ್ಧವಾಗಿ ಹೋರಾಟಕ್ಕೆ ಇಳಿದಿದೆ. ಇದರ ಮೊದಲ ನಡೆ ಈಗ ಬಹಿರಂಗವಾಗಿದ್ದು, ಬಿ ನಾಗೇಂದ್ರ ಅವರನ್ನು ಕಾಂಗ್ರೆಸ್ ನತ್ತ ಸೆಳೆದಿರುವ ಮಾಹಿತಿ ಸಿಕ್ಕಿದೆ.
ಜನವರಿ 29 ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ಎಸ್ಟಿ ಘಟಕದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದು ರಾಹುಲ್ಗಾಂಧಿ ಆಗಮಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ ಶಿವಕುಮಾರ್, ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಉಪಸ್ಥಿತರಿರುವ ಸಾಧ್ಯತೆಯಿದೆ.

ಕೂಡ್ಲಿಗಿ, ಬಳ್ಳಾರಿ ಗ್ರಾಮೀಣ ಮತ್ತು ಕಂಪ್ಲಿ ಕ್ಷೇತ್ರದ ಜವಾಬ್ದಾರಿ ನಾಗೇಂದ್ರ ಅವರಿಗೆ ನೀಡುವ ಮೂಲಕ ಬಿ. ಶ್ರೀರಾಮುಲು ಅವರಿಗೆ ಪರ್ಯಾಯ ಶಕ್ತಿಯಾಗಿ ಬೆಳೆಸಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ.
2013 ರ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ನಿಂದ ಕಣಕ್ಕಿಳಿಯಲು ಮುಂದಾಗದೆ ಪಕ್ಷೇತರನಾಗಿ ಕಣಕ್ಕಿಳಿದ ನಾಗೇಂದ್ರ 71,477 ಮತಗಳನ್ನು ಪಡೆದು ಜಯಗಳಿಸಿದ್ದರು.
ಅಕ್ರಮ ಗಣಿಗಾರಿಕೆ ಮತ್ತು ಬೇಲೆಕೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ನಾಗೇಂದ್ರ ಅವರನ್ನು 3ನೇ ಬಾರಿಗೆ ಬಂಧಿಸಲಾಗಿತ್ತು. ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಈ ಬಾರಿಯೂ ಟಿಕೆಟ್ ಸಿಗದೆ ನಿರಾಶೆ ಅನುಭವಿಸುವುದರ ಬದಲು ಕಾಂಗ್ರೆಸ್ ಸೇರುವುದು ಉತ್ತಮ ಎಂದು ನಾಗೇಂದ್ರ ಅವರು ನಿರ್ಧರಿಸಿದ್ದಂತಿದೆ.












Click it and Unblock the Notifications