KSRTC: ಪ್ರಯಾಣಿಕರ ಸುರಕ್ಷತೆ, ಅಪಘಾತ ತಡೆಗೆ ಪರಿಣಾಮಕಾರಿ ಕ್ರಮ ಜಾರಿ
ಬೆಂಗಳೂರು, ಡಿಸೆಂಬರ್ 31: ಹಗಲು ರಾತ್ರಿ ಎನ್ನದೇ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಮತ್ತು ಪ್ರಯಾಣಿಕರ ಸುರಕ್ಷತೆ ಸಲುವಾಗಿ KSRTC ನಿಗಮವು ಮತ್ತೊಂದು ಪರಿಣಾಮಕಾರಿ ಕ್ರಮವೊಂದನ್ನು ಕೈಗೊಂಡಿದೆ.
ಬೆಂಗಳೂರಿನಿಂದ ಇತರ ದೂರ ಪ್ರದೇಶಗಳಿಗೆ ಸಾರಿಗೆ ಸೇವೆ ನೀಡುವಾಗ, ಅಥವಾ ದೂರದ ಊರುಗಳಿಂದ ಬೆಂಗಳೂರಿಗೆ ಬಸ್ ಓಡಿಸುವ ಕೆಎಸ್ಆರ್ಟಿಸಿ ಬಸ್ ಚಾಲಕರು ರಾತ್ರಿ ಪೂರ್ತಿ ಎಚ್ಚರವಿರುತ್ತಾರೆ. ಇಂತಹ ಕೆಲವು ಸಂದರ್ಭಗಳಲ್ಲಿ ಅಪಘಾತವಾಗುತ್ತಿವೆ. ಇದರಿಂದ ಜನರಿಗೆ, ಸಾರಿಗೆ ಸಿಬ್ಬಂದಿಗೆ ಜೀವಕ್ಕೆ ತೊಂದರೆ ಆಗುತ್ತದೆ.

ಈ ಕಾರಣದಿಂದ ಎಚ್ಚರಿಕೆ ಹೆಜ್ಜೆ ಇಟ್ಟಿರುವ KSRTC ನಿಗಮವು ಪ್ರಯಾಣಿಕರ ಸುರಕ್ಷತೆಗಾಗಿ ಬಸ್ ಚಾಲಕರಿಗೆ ಅದರಲ್ಲೂ ರಾತ್ರಿ ಪಾಳಿಯ ಚಾಲಕರಿಗೆ ಉತ್ತಮ ಗುಣಮಟ್ಟದ 500 ಮಿಲಿಯ ಥರ್ಮೋ ಫ್ಲಾಸ್ಕ್ ಅನ್ನು 1600 ಅನುಸೂಚಿಗಳಲ್ಲಿ ಒದಗಿಸಲಾಗಿದೆ.
ಅಪಘಾತದ ಅಧ್ಯಯನದ ವರದಿ
ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ನಿಗಮದ ವಾಹನಗಳು ರಾತ್ರಿ ವೇಳೆ ಕಾರ್ಯಾಚರಣೆಯಲ್ಲಿದ್ದಾಗ ಬೆಳಗಿನ ಜಾವ 3 ರಿಂದ 4 ಗಂಟೆಯ ಸಮಯದಲ್ಲಿ ಹೆಚ್ಚು ಅಪಘಾತಕ್ಕೆ ಒಳಪಟ್ಟಿರುವುದನ್ನು ಗಮನಿಸಲಾಗಿದೆ.
ಇದನ್ನು ಪರಿಗಣಿಸಿ ಪ್ರಯಾಣಿಕರಿಗೆ ಸುರಕ್ಷಿತ ಸೇವೆಯನ್ನು ಒದಗಿಸುವ ಸಲುವಾಗಿ, ರಾತ್ರಿ ಸಾರಿಗೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರು ಸುರಕ್ಷಿತವಾಗಿ ವಾಹನ ಚಾಲನೆ ಮಾಡುವ ಅವಶ್ಯಕತೆ ಇದೆ. ಹೀಗಾಗಿ ಚಾಲಕರ ಕಾರ್ಯಕ್ಷಮತೆಯನ್ನು ಉತ್ತಮ ಪಡಿಸುವ ಸಲುವಾಗಿ ಆ ಅವಧಿಯಲ್ಲಿ ರಿಫ್ರೇಶ್ ಆಗಲು ಕಾಫಿ-ಟೀ ಸೇವಿಸಲು ಅನುಕೂಲವಾಗುವಂತೆ ಫ್ಲಾಸ್ಟ್ ನೀಡಲಾಗಿದೆ.

ಟೀ/ಕಾಫಿ ಸಂಗ್ರಹಿಸಿಟ್ಟುಕೊಳ್ಳಲು ಅನುಕೂಲ
ರಾತ್ರಿ ವೇಳೆ ಬಸ್ ಓಡಿಸುವಾಗ ಮಾರ್ಗ ಮಧ್ಯದಲ್ಲಿ ಚಾಲಕರಿಗೆ ಟೀ ಕುಡಿದು ರೀಫ್ರೆಶ್ ಆಗಲು ಹೋಟೆಲುಗಳ ಲಭ್ಯತೆಯು ಇರುವುದಿಲ್ಲ. ಆದ ಕಾರಣ ವಾಹನವನ್ನು ಸುರಕ್ಷಿತವಾಗಿ ಚಾಲನೆ ಮಾಡಲು ಚಾಲಕರಿಗೆ ಉತ್ತಮ ಗುಣಮಟ್ಟದ 500 ಮಿಲಿಯ ಥರ್ಮೋ ಫ್ಲಾಸ್ಕ್ ನೀಡಲಾಗಿದೆ. ಇದರಿಂದ ಅವರು ಹೋಟೆಲ್ಗಳು ಲಭ್ಯವಿದಲ್ಲಿ, ಇಲ್ಲವೇ ಬಸ್ ನಿಲ್ದಾಣದಿಂದ ಹೊರಡುವಾಗ ಟೀ ಸಂಗ್ರಹಿಟ್ಟುಕೊಂಡು ತೆರಳಲು ಇದು ಅನುಕೂಲವಾಗುತ್ತದೆ ಎಂದು ನಿಗಮ ತಿಳಿಸಿದೆ.
ಚಾಲಕರು ಟೀ/ಕಾಫಿಯನ್ನು ಫ್ಲಾಸ್ಕ್ನಲ್ಲಿ ಸಂಗ್ರಹಿಸಿಕೊಂಡು, ಬೆಳಗಿನ ಜಾವದಲ್ಲಿ ಬಳಸಿ ಸುರಕ್ಷತೆಯಿಂದ ವಾಹನವನ್ನು ಚಾಲನೆ ಮಾಡಬೇಕಿದೆ. ಪ್ರಯಾಣಿಕರನ್ನು ಅವರವರ ಗಮ್ಯ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪ್ರಕಟಣೆಯಲ್ಲಿ ನಿಗಮ ಮಾಹಿತಿ ನೀಡಿದೆ.











Click it and Unblock the Notifications