ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಯೋಜನೆ ಶೀಘ್ರ ಜಾರಿಗೆ KSRTC ಒಕ್ಕೂಟ ಮನವಿ
ಬೆಂಗಳೂರು, ಮೇ 24: ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರ ಬರುತ್ತಿದ್ದಂತೆ ಒಂದೆಡೆ ವಿದ್ಯುತ್ ಬಿಲ್ ಪಾವತಿಗೆ ಹಿಂದೇಟು ಹಾಕಿ ಕೆಪಿಟಿಸಿಲ್ ಸಿಬ್ಬಂದಿ ಜೊತೆಗೆ ಜಗಳವಾಡುತ್ತಿದ್ದಾರೆ. ಇತ್ತ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಂತೆ ಮಹಿಳೆಯರು ಸಹ ಬಸ್ ನಿರ್ವಾಹಕರ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಉಚಿತ ಪ್ರಯಾಣ ಒತ್ತಡ, ಗಲಾಟೆಗೆ ರೋಸಿ ಹೋಗಿರುವ KSRTC ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದೆ. ನೀವು ನೀಡಿರುವ ಉಚಿತ ಬಸ್ ಪ್ರಮಾಣದ ಯೋಜನೆಯನ್ನು ಆದಷ್ಟು ಶೀಘ್ರವೇ ಜಾರಿಗೆ ತನ್ನಿ ಎಂದು ಒಕ್ಕೂಟದ ಪ್ರಧಾನಿ ಕಾರ್ಯಕದರ್ಶಿ ಡಿ.ಎ.ವಿಜಯಭಾಸ್ಕರ್ ಕೋರಿದ್ದಾರೆ.

ನಿತ್ಯವು ರಾಜ್ಯದ ವಿವಿಧ ಮಾರ್ಗಗಳಲ್ಲಿ ಮಹಿಳಾ ಪ್ರಯಾಣಿಕರು ಹಣ ಕೊಡದೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕೆಂದು ನಿರ್ವಾಹಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಬಸ್ಸು ಪ್ರಯಾಣದ ಸಂದರ್ಭದಲ್ಲಿ ಸಿಬ್ಬಂದಿಗಳು ಹಾಗೂ ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆಯುತ್ತಿದೆ. ಇದು ಒಳ್ಳೆ ಸೂಚನೆಯಲ್ಲ ಎಂದು ಅವರು ವಿವರಿಸಿದ್ದಾರೆ.
ಸಾರಿಗೆ ನಿಗಮಗಳಿಗೆ ವೆಚ್ಚದ ಮುಂಗಡ ಮಂಜೂರಿಗೆ ಮನವಿ
ಆದ್ದರಿಂದ ತಾವು ಶೀಘ್ರದಲ್ಲಿಯೇ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡುವ ವ್ಯವಸ್ಥೆಯನ್ನು ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ಬಳಿಕ ಸಾರಿಗೆ ನಿಗಮಗಳಿಗೆ ಆದೇಶದಂತೆ ನಿರ್ದೇಶಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ. ಈ ಮೇಲ್ಕಂಡ ತೀರ್ಮಾನವನ್ನು ಜಾರಿ ಮಾಡಲು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಆಗುವ ಆರ್ಥಿಕ ಹೊರೆಯನ್ನು ಸೂಕ್ತ ಅಂದಾಜು ಮಾಡಿ ನಿಗಮಗಳಿಗೆ ವೆಚ್ಚದ ಮುಂಗಡವನ್ನು ಮಂಜೂರು ಮಾಡಬೇಕೆಂದು ಅವರು ಇದೇ ವೇಳೆ ಒತ್ತಾಯಿಸಿದರು.

ಇದೇ ವೇಳೆ ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ ಅವರಿಗೆ ಒಕ್ಕೂಟದ ಪದಾಧಿಕಾರಿಗಳು ಅಭಿನಂದನೆ ತಿಳಿಸಿದರು. ಜೊತೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಜನಮಾನಸವನ್ನು ಹೊಕ್ಕಿವೆ. ರಾಜ್ಯದ ಜನ ಕಾಂಗ್ರೆಸ್ ಭರವಸೆಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ಗೆ ನಿಚ್ಚಳ ಬಹುಮತ ದೊರೆತಿದೆ.
ಯಾವುದೇ ಸರ್ಕಾರ ಬಂದ ತಕ್ಷಣ ಅದು ಎಲ್ಲ ಭರವಸೆಗಳನ್ನು ತಕ್ಷಣ ಜಾರಿ ಮಾಡಲು ಸಾಧ್ಯವಿಲ್ಲವೆಂಬುದು ನಮಗೂ ತಿಳಿದಿದೆ. ಆದರೂ ಕೂಡ ಸದ್ಯ ನೀಡಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಕೂಡಲೇ ನೆರವೇರಿಸುವಂತೆ ಪತ್ರದಲ್ಲಿ ಒಕ್ಕೂಟ ಸದಸ್ಯರು ಪುನರುಚ್ಚರಿಸಿದ್ದಾರೆ.












Click it and Unblock the Notifications