KSRTC Employees Strike: ಡಿ. 31ರಂದು ಕೆಎಸ್ಆರ್ಟಿಸಿ ನೌಕರರಿಂದ ಬಂದ್; ಬಸ್ ಸೇವೆ ಇರುತ್ತಾ?
ವೇತನ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕಾರ್ಮಿಕ ಸಂಘಟನೆ ಜಂಟಿ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿದ್ದು, ನೌಕರರು ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಡಿಸೆಂಬರ್ 31ರಂದು ಬೆಳಿಗ್ಗೆ 6 ಗಂಟೆಯಿಂದ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಉಮೇಶ್ ಒತ್ತಾಯಿಸಿದ್ದಾರೆ.
ಸಾರಿಗೆ ನೌಕರರ ಮೂಲ ವೇತನವನ್ನು 25 ಪ್ರತಿಶತ ಹೆಚ್ಚಳ ಮಾಡಬೇಕು, ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರ ಇನ್ನೂ 5,010 ಕೋಟಿ ರೂಪಾಯಿ ನೀಡಬೇಕಿದೆ. ಶಕ್ತಿ ಯೋಜನೆಯ 2,000 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಉಮೇಶ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸಾರಿಗೆ ನೌಕರರ ಬೇಡಿಕೆಗಳೇನು?
2020ರಲ್ಲಿ ವೇತನ ಹೆಚ್ಚಳ ಘೋಷಿಸಿದ್ದರೂ 1,750 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. 2024 ರ ಜನವರಿಯಲ್ಲಿ ವೇತನ ಹೆಚ್ಚಳ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರೂ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದರಿಂದಾಗಿ ನೌಕರರು ಪ್ರತಿಭಟನೆ ಮಾಡಲು ನಿರ್ಧರಿಸಿವೆ.
ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ನೌಕರರ ಫೆಡರೇಷನ್ ಅಧ್ಯಕ್ಷ ಎಚ್. ವಿ. ಅನಂತ ಸುಬ್ಬರಾವ್ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ಪದೇ ಪದೇ ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರೂ ಈವರೆಗೂ ಏನೂ ಮಾಡಿಲ್ಲ. ಇದರಿಂದ ನೌಕರರು ಬೇಸತ್ತಿದ್ದು, ಮುಷ್ಕರ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.
ಜನವರಿ 2020 ಮತ್ತು ಫೆಬ್ರವರಿ 2023 ರವರೆಗೆ ಬಾಕಿ ಉಳಿದಿರುವ ಸರಿಸುಮಾರು 1,785 ಕೋಟಿ ರೂಪಾಯಿಗಳ ವೇತನವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಪಾವತಿ ಮಾಡದ 2,900 ಕೋಟಿ ರೂಪಾಯಿ ಭವಿಷ್ಯ ನಿಧಿ ಇತ್ಯರ್ಥಗೊಳಿಸಲು ಬೇಡಿಕೆ ಇಡಲಾಗಿದೆ.
ನಿವೃತ್ತ ನೌಕರರಿಗೆ 325 ಕೋಟಿ ರೂಪಾಯಿ ತುಟ್ಟಿಭತ್ಯೆ ನೀಡಬೇಕಾಗಿದ್ದು ಅದನ್ನು ಕೂಡಲೇ ಪಾವತಿ ಮಾಡಲು ಆಗ್ರಹಿಸಲಾಗಿದೆ. ಶಕ್ತಿ ಯೋಜನೆ ಜಾರಿ ಮಾಡಿದ ಬಳಿಕ ಯೋಜನೆಗೆ ಸಂಬಂಧಟ್ಟಂತೆ 2000 ಕೋಟಿ ರೂಪಾಯಿ ಬಾಕಿ ನೀಡಬೇಕಿದ್ದು ಕೂಡಲೇ ಪಾವತಿಸುವಂತೆ ಒತ್ತಾಯಿಸಲಾಗಿದೆ.
ಹೊಸ ವರ್ಷದ ಸಂಭ್ರಮದಲ್ಲಿರುವ ರಾಜ್ಯದ ಜನತೆ ಮೇಲೆ ಈ ಮುಷ್ಕರ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಷ್ಕರ ಗಂಭೀರವಾದರೆ ಖಾಸಗಿ ಬಸ್ಸುಗಳು ಪರಿಸ್ಥಿತಿ ಲಾಭ ಪಡೆಯಲಿದ್ದು ಟಿಕೆಟ್ ದರವನ್ನು ಮನಬಂದಂತೆ ಹೆಚ್ಚಿಸುವ ಆತಂಕ ಕೂಡ ಇದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ (NWRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಬಸ್ಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಮುಖ್ಯವಾಗಿ ಈ ಸಾರಿಗೆಯನ್ನೇ ನೆಚ್ಚಿಕೊಂಡಿರುವ ಗ್ರಾಮೀಣ ಭಾಗಗಳ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.












Click it and Unblock the Notifications